ಸಾರಾಂಶ
ಗದಗ: ಸಮೃದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ರೈತರನ್ನು ಸಶಕ್ತರನ್ನಾಗಿ ಮಾಡಬೇಕಾಗಿದ್ದು, ನೂತನ ವರ್ಷವನ್ನು ರೈತರ ಏಳ್ಗೆಗಾಗಿಯೇ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ಭಗವಂತನಲ್ಲಿ ಸಂಕಲ್ಪ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಧಾರವಾಡ ವಲಯದ ಸಂಚಾಲಕಿ ಬಿ.ಕೆ. ಜಯಂತಿ ಅಕ್ಕನವರ ಹೇಳಿದರು.
ತಾಲೂಕಿನ ಲಕ್ಕುಂಡಿ ಗ್ರಾಮದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಾಖೆಯಲ್ಲಿ ನಡೆದ 2025 ನೂತನ ವರ್ಷಾಚರಣೆ ಅಂಗವಾಗಿ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದೇಶದ ಬೆನ್ನೆಲುಬಾಗಿರುವ ರೈತರು ದೈಹಿಕ ಮತ್ತು ಆಂತರಿಕವಾಗಿ ಸಶಕ್ತರನ್ನಾಗಿ ಮಾಡಬೇಕಾಗಿದ್ದು ಅವರ ಆತ್ಮ ಶಕ್ತಿ ಅಧಿಕಗೊಳಿಸಬೇಕಾಗಿದೆ ಎಂದರು.ಇಂದಿನ ಹಲವು ಹವಾಮಾನ ವೈಪರಿತ್ಯ,ದರ ಕುಸಿತದಿಂದ ನಷ್ಟ ಅನುಭವಿಸುತ್ತಿರುವ ರೈತರು ಆಂತರಿಕವಾಗಿ ಕುಗ್ಗುತ್ತಿದ್ದಾರೆ. ಇದರಿಂದ ಮಧ್ಯಪಾನದಂತ ದುಶ್ಚಟದ ದಾಸರಾಗಿ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ.ಆದ್ದರಿಂದ ನೆಮ್ಮದಿಯ ಜೀವನ ಸಾಗಿಸಲು ದುಶ್ಚಟದಿಂದ ದೂರವಿರಲು ಜ್ಞಾನ, ಯೋಗ ಮತ್ತು ಸಾಧನೆಯ ಪಾಠಗಳ ಮೂಲಕ ಪರಮಾತ್ಮನ ಪರಿಚಯ ಮಾಡಿಕೊಡಬೇಕಾಗಿದೆ. ಅವರ ಆತ್ಮಕ್ಕೆ ಒಳ್ಳೆಯ ಸಂಸ್ಕಾರ ನೀಡಬೇಕಾಗಿದೆ. ಆದ್ದರಿಂದ ಇಂದಿನಿಂದ ನಾವೆಲ್ಲರೂ ರೈತರ ಅಭಿವೃದ್ಧಿಗಾಗಿ ಸಮೃದ್ಧ ರಾಷ್ಟ್ರಕ್ಕಾಗಿ ಸಂಕಲ್ಪ ಮಾಡಬೇಕು ಎಂದರು.
ನಿವೃತ್ತ ಯೋಧ, ರೈತ ದತ್ತಾತ್ರೇಯ ಜೋಶಿ ಮಾತನಾಡಿ, ಸೈನಿಕನಾಗಿ ದೇಶ ಸೇವೆಯಲ್ಲಿ ತೊಡಗಿಕೊಂಡಿದ್ದು ತೃಪ್ತಿ ತಂದಿದೆ.ನಿವೃತ್ತಿ ನಂತರ ಎತ್ತು ಆಕಳುಗಳೊಂದಿಗೆ ಕೃಷಿ ಮಾಡುತ್ತಿದ್ದೇನೆ. ಪ್ರತಿಯೊಬ್ಬರು ಗೋ ಸಾಕುವದರಿಂದ ಮನೆಯಲ್ಲಿ ಧನಾತ್ಮಕ ಚಟುವಟಿಕೆಗಳು ನಡೆಯುತ್ತವೆ ಎಂದರು.ಭಾರತೀಯ ಕಿಸಾನ್ ಸಂಘದ ತಾಲೂಕಾಧ್ಯಕ್ಷ ವೆಂಕಟೇಶ ದೊಂಗಡೆ ಮಾತನಾಡಿ, ಗೋ ಆಧಾರಿತ ಕೃಷಿ ಅಳವಡಿಸಿಕೊಂಡು ಸಾವಯವ ಗೊಬ್ಬರ ಹಾಕಿ ವಿಷಮುಕ್ತ ಆಹಾರ ತಯಾರಿಸಲು ರೈತರು ಮುಂದಾಗಬೇಕು.ಗೋ ಸಂತತಿ ಹೆಚ್ಚಿಸಬೇಕು ಎಂದು ತಿಳಿಸಿದರು.
ಈ ವೇಳೆ ಫಕ್ಕೀರಗೌಡ್ರ ಪವಾಡಿಗೌಡ್ರ, ಗುರುಶಾಂತ ಅರಹುಣಶಿ, ಈರಪ್ಪ ಗುಂಡಳ್ಳಿ, ಪ್ರಭು ಬೆಂತೂರು, ಶಿವಪುತ್ರಪ್ಪ ರಿತ್ತಿ, ಲಕ್ಷ್ಮಣಪ್ಪ ನಿಡಗುಂದಿ, ಪುತ್ರಪ್ಪ ಸೊರಟೂರು, ಸಣ್ಣಕೊಟ್ರಪ್ಪ ಶಿಗ್ಲಿ, ಹನುಮಂತಪ್ಪ ಹಿರೇಹಾಳ, ಆನಂದ ಕವಲೂರು, ಮಲ್ಲಿಕಾರ್ಜುನ ಅಡವಿಸೋಮಾಪೂರ, ಈರಣ್ಣ ಹರ್ತಿ ಹಾಗೂ ಶೆಟ್ಟೆಪ್ಪ ಹೊನ್ನರೆಡ್ಡಿ ಅವರನ್ನು ಸನ್ಮಾನಿಸಲಾಯಿತು.ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ನಂದಾ ಜ್ಯೋತಿ ಬೆಳಗುವದರೊಂದಿಗೆ ನೂತನ ವರ್ಷ ಸ್ವಾಗತಿಸಿ ಪಾಕೆಟ್ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಸಮೃದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ಅನ್ನದಾತ ರೈತರನ್ನು ಸಶಕ್ತರನ್ನಾಗಿ ಮಾಡುವ ಸಂಕಲ್ಪ ಮಾಡಲಾಯಿತು.ಆರ್.ಎನ್. ಗೌಡರ ಸ್ವಾಗತಿಸಿದರು. ಬ್ರಹ್ಮುಕುಮಾರಿ ಶಾಖೆಯ ಬಿ.ಕೆ.ಸರೋಜಕ್ಕ ನಿರೂಪಿಸಿದರು.