ಕನ್ನಡಪ್ರಭ ವಾರ್ತೆ ತುಮಕೂರು ಸ್ಕೌಟ್ಸ್ ಮತ್ತು ಗೈಡ್ಸ್‌ ಮಹತ್ವ, ಆಶಯಗಳನ್ನು ಪೋಷಕರಿಗೆ ಮನವರಿಕೆ ಮಾಡಿಮಕ್ಕಳು ಈ ಚಟುವಟಿಕೆಯಲ್ಲಿ ಭಾಗವಹಿಸಲು ಅವರು ಪ್ರೋತ್ಸಾಹಿಸಲಿ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ರಾಜ್ಯ ಮುಖ್ಯಆಯುಕ್ತ ಡಾ.ಪಿ.ಜಿ.ಆರ್. ಸಿಂಧ್ಯಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು. ನಗರದಲ್ಲಿ ವಿದ್ಯಾನಿಕೇತನ ಶಾಲೆ ಸಭಾಂಗಣದಲ್ಲಿ ನಡೆದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ ಜಿಲ್ಲಾ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದರು. ಪರೀಕ್ಷೆಗಳಲ್ಲಿ ಅಂಕ ಪಡೆಯುವುದೇ ಈಗಿನ ಮಕ್ಕಳ, ಪೋಷಕರ ಗುರಿಯಾಗಿದೆ, ಅದರ ಹೊರತಾಗಿ ಇತರೆ ಚಟುವಟಿಕೆಗಳಲ್ಲಿ ಆಸಕ್ತಿ ತೋರುತ್ತಿಲ್ಲ. ಮಕ್ಕಳು ಕೌಶಲ್ಯ ಕಲಿಯದಿದ್ದರೆ ಉದ್ಧಾರವಾಗುವುದಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿಯವರೂ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಭಾರತ ಸರ್ಕಾರ ಯುವ ಆಪದ್ ಮಿತ್ರಯೋಜನೆ ಅಂಗವಾಗಿ 21 ವಿಪತ್ತುಗಳನ್ನು ನಿರ್ವಹಿಸಲು ರೋಜರ್ಸ್ ಮತ್ತು ರೇಂಜರ್ಸ್ ದಳನಾಯಕರಿಗೆ ತರಬೇತಿ ನೀಡಿ ನಿಯೋಜಿಸಿಕೊಳ್ಳುತ್ತಿದೆ. ಪ್ರವಾಹ, ಭೂಕಂಪ ಅಥವಾ ಇತರೆ ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಗಳನ್ನು ಮಾಡಲು ಅಗತ್ಯ ತರಬೇತಿ ಪಡೆದವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್‌ ರಾಜ್ಯ ಉಪಾಧ್ಯಕ್ಷೆ, ಜಿಲ್ಲಾ ಆಯುಕ್ತರಾದ ಆಶಾ ಪ್ರಸನ್ನಕುಮಾರ್, ಗೈಡ್ಸ್‌ ಜಿಲ್ಲಾ ಆಯುಕ್ತೆ ಸುಭಾಷಿಣಿ ಆರ್.ಕುಮಾರ್, ಜಿಲ್ಲಾ ಕಾರ್ಯದರ್ಶಿ ಟಿ.ಎಸ್. ಆಂಜನಪ್ಪ, ರಾಜ್ಯಜಂಟಿ ಕಾರ್ಯದರ್ಶಿ ಸತೀಶ್, ರಾಜ್ಯ ಗೈಡ್ಸ್ ತರಬೇತಿ ಆಯುಕ್ತರಾದ ಶ್ಯಾಮಲಾ, ಮಲ್ಲೇಶ್ವರಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ರಾಧಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಘುಚಂದ್ರ ಸೇರಿದಂತೆ ಹಲವು ಬಿಇಒಗಳು, ಸಿಆರ್‌ಪಿಗಳು, ಸ್ಕೌಟ್ಸ್-ಗೈಡ್ಸ್ ಸಂಸ್ಥೆ ಪದಾಧಿಕಾರಿಗಳು ಭಾಗವಹಿಸಿದ್ದರು.