ಮಕ್ಕಳು ದೇವರಿದ್ದಂತೆ. ಅವರನ್ನು ದೇವರಂತೆ ಕಾಣಬೇಕು. ಮಕ್ಕಳಿಗೆ ಆಚಾರ, ವಿಚಾರ ಮತ್ತು ಉತ್ತಮ ಪದ್ಧತಿ ಕಲಿಸಬೇಕು. ಮಕ್ಕಳ ಮುಂದೆ ಪಾಲಕರು ಜಗಳ ಮಾಡಬಾರದು. ಅದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.
ಹುಬ್ಬಳ್ಳಿ:
ಇಂದಿನ ಮಕ್ಕಳ ಮನಸ್ಥಿತಿ ಬಹಳ ಸೂಕ್ಷ್ಮವಾಗಿದೆ. ಪಾಲಕರು ಇನ್ನೊಬ್ಬ ಮಕ್ಕಳ ಎದುರು ತಮ್ಮ ಮಕ್ಕಳನ್ನು ಕೀಳುಮಟ್ಟದಲ್ಲಿ ನೋಡದೇ ಪ್ರೋತ್ಸಾಹಿಸಬೇಕೆಂದು ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀ ಹೇಳಿದರು.ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕನಕ ನೌಕರ ಬಳಗದಿಂದ ಭಾನುವಾರ ಆಯೋಜಿಸಿದ್ದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಕ್ಕಳು ದೇವರಿದ್ದಂತೆ. ಅವರನ್ನು ದೇವರಂತೆ ಕಾಣಬೇಕು. ಮಕ್ಕಳಿಗೆ ಆಚಾರ, ವಿಚಾರ ಮತ್ತು ಉತ್ತಮ ಪದ್ಧತಿ ಕಲಿಸಬೇಕು. ಮಕ್ಕಳ ಮುಂದೆ ಪಾಲಕರು ಜಗಳ ಮಾಡಬಾರದು. ಅದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದರು.ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಸಾಧಕರನ್ನು ಪುರಸ್ಕರಿಸುವುದರಿಂದ ಅವರು ಇನ್ನೂ ದೊಡ್ಡ ಸಾಧನೆ ಮಾಡಲು ಸ್ಫೂರ್ತಿ ದೊರೆಯುತ್ತದೆ. ಬದುಕಿನಲ್ಲಿ ಯಶಸ್ವಿಯಾಗಬೇಕಾದರೆ ಸಮಯದ ಮೌಲ್ಯ, ಕಠಿಣ ಪರಿಶ್ರಮ ಹಾಗೂ ದಣಿವರಿಯದ ದುಡಿಮೆಯ ಅಗತ್ಯವಿದೆ. ದುಡಿಮೆಯಲ್ಲಿ ದೇವರನ್ನು ಕಾಣಬೇಕು. ಆಗ ಮಾತ್ರ ಆ ವ್ಯಕ್ತಿಗೆ ಎಂದೆಂದಿಗೂ ಸೋಲಿಲ್ಲ ಎಂದು ಹೇಳಿದರು.
ಬದುಕಿನಲ್ಲಿ ಯಾರು ಕಷ್ಟಪಟ್ಟರೋ, ಅವಮಾನ ಎದುರಿಸಿದರೋ ಅವರೇ ಜೀವನದಲ್ಲಿ ಮುಂದೆ ಸಾಧನೆ ಮಾಡುತ್ತಾರೆ. ಕುರಿಗಾಯಿಗಳು ಬಿಸಿಲು, ಮಳೆ, ಗುಡುಗು, ಸಿಡಿಲನ್ನು ಮೆಟ್ಟಿ ನಿಂತು ಸಮಾಜಕ್ಕೆ ಕಾಯಕ ಪ್ರಜ್ಞೆಯನ್ನು ಕೊಟ್ಟವರು. ಕುರಿಗಾಯಿಗಳಿಗಾಗಿ ನಮ್ಮ ಸರ್ಕಾರ ₹ 236 ಕೋಟಿ ವೆಚ್ಚದಲ್ಲಿ 20 ಸಾವಿರ ಕುರಿಗಾಯಿಗಳಿಗೆ ಸಹಾಯ ನೀಡಿತ್ತು. ಆದರೆ, ಇಂದು ಆ ಸೌಲಭ್ಯ ನಿಂತಿದ್ದು, ಅದನ್ನು ಮತ್ತೆ ಜಾರಿಗೆ ತರಬೇಕಾಗಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಮಹೇಶ ಟೆಂಗಿನಕಾಯಿ, ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಲು ಸಣ್ಣ ಕನಸು ಕಾಣದೆ ದೊಡ್ಡ ಕನಸು ಕಾಣಬೇಕು. ಹಠ ಹಾಗೂ ಛಲದಿಂದ ಸಾಧನೆ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಂಡರೆ ವಿದ್ಯಾರ್ಥಿಗಳು ಜೀವನದಲ್ಲಿ ಎತ್ತರದ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದರು.
ಐರನ್ಮ್ಯಾನ್ ಟ್ರಯ್ಥ್ಲಾನ್ ಪಟು ಸದಾನಂದ ಎಚ್. ಅಮರಾಪುರ, ಶಂಕರಾನಂದ ಬನಶಂಕರಿ ಹಾಗೂ ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿದರು. ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಶನ್ ಅಧ್ಯಕ್ಷ ಬಸವರಾಜ ಗುರಿಕಾರ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕುರುಬ ಸಮುದಾಯದ 60 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಂದೀಪ್ ಬೂದಿಹಾಳ, ಮಾಜಿ ಯೋಧ ಪರಶುರಾಮ ದಿವಾನದ, ಎಚ್.ಕೆ. ರಮೇಶ, ಪಾಲಿಕೆ ಸದಸ್ಯ ಬೀರಪ್ಪ ಖಂಡೇಕಾರ್, ಪಾಲಿಕೆ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ಬಿಇಒ ಎಚ್.ಎಂ. ಫಡ್ನಿಸ್, ಅಶೋಕ ಒಡೆಯರ್, ಪಿ.ಆರ್. ಕಿರಣಗಿ, ದೇವೇಂದ್ರ ಸಿಂಧೋಗಿ, ಸಂತೋಷಕುಮಾರ ಯರಂಗಲೆ, ಸೇರಿ ಹಲವರಿದ್ದರು. ಪ್ರಕಾಶ ಕಂಬಳಿ ಪ್ರಾರ್ಥಿಸಿದರು. ತೇಜಾವತಿ ಎಚ್.ಡಿ. ಹಾಗೂ ಲಕ್ಷ್ಮೀ ಧನ್ನಕನವರ ನಿರೂಪಿಸಿದರು. ಎಂ.ಎಚ್. ಜಂಗಲಿ ಸ್ವಾಗತಿಸಿದರು.