ಸಾರಾಂಶ
ಬಂಗಾರದೊಡ್ಡಿ ನಾಲೆ ಸಮೀಪ ಕಾವೇರಿ ನದಿ ದಂಡೆಯಲ್ಲಿ ಕೆಲ ಖಾಸಗಿ ಭೂ-ಮಾಲೀಕರು ಅನಧಿಕೃತವಾಗಿ ಕಾವೇರಿ ನದಿ ತೀರವನ್ನು ಒತ್ತುವರಿ ಮಾಡಿಕೊಂಡು ತಡೆಗೋಡೆ ನಿರ್ಮಿಸಿರುವ ವಿಷಯ ತಿಳಿದು ರಾಜಸ್ವ ನಿರೀಕ್ಷಕರು ಸೇರಿದಂತೆ 15 ಜನ ಪೊಲೀಸ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದರು.
ಶ್ರೀರಂಗಪಟ್ಟಣ : ಖಾಸಗಿ ವ್ಯಕ್ತಿಗಳು ಪಟ್ಟಣದ ಹೊರವಲಯದ ಬಂಗಾರದೊಡ್ಡಿ ನಾಲೆಯ ಸಮೀಪ ಕಾವೇರಿ ನದಿ ತೀರವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ತಡೆಗೋಡೆಯನ್ನು ತಹಸೀಲ್ದಾರ್ ಹಾಗೂ ಕಾವೇರಿ ನೀರಾವರಿ ಅಧಿಕಾರಿಗಳು ದಾಳಿ ನಡೆಸಿ ತೆರವುಗೊಳಿಸಿದರು.
ಬಂಗಾರದೊಡ್ಡಿ ನಾಲೆ ಸಮೀಪ ಕಾವೇರಿ ನದಿ ದಂಡೆಯಲ್ಲಿ ಕೆಲ ಖಾಸಗಿ ಭೂ-ಮಾಲೀಕರು ಅನಧಿಕೃತವಾಗಿ ಕಾವೇರಿ ನದಿ ತೀರವನ್ನು ಒತ್ತುವರಿ ಮಾಡಿಕೊಂಡು ತಡೆಗೋಡೆ ನಿರ್ಮಿಸಿರುವ ವಿಷಯ ತಿಳಿದು ರಾಜಸ್ವ ನಿರೀಕ್ಷಕರು ಸೇರಿದಂತೆ 15 ಜನ ಪೊಲೀಸ್ ಸಿಬ್ಬಂದಿ ಹಾಗೂ ತಾಲೂಕು ಭೂ-ಮಾಪಕರೊಂದಿಗೆ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಜಂಟಿ ಕಾರ್ಯಾಚರಣೆ ನಡೆಸಿದರು.
ಸರ್ವೇ ನಂಬರ್ 175/4ರಲ್ಲಿ ಕಾವೇರಿ ನದಿ ಪಾತ್ರದ ಖರಾಬು ಭೂಮಿಯನ್ನು ಒತ್ತುವರಿ ಮಾಡಿದ್ದನ್ನು ಪರಿಶೀಲಿಸಿದರು. ನಂತರ ಸುಮಾರು 50 ರಿಂದ 60 ಟಿಪ್ಪರ್ ಮಣ್ಣನ್ನು ನದಿ ಪಾತ್ರದಲ್ಲಿ ಹಾಕಿ ಎತ್ತರ ಮಾಡಿರುವುದನ್ನು ತೆರವುಗೊಳಿಸುವಂತೆ ಸ್ಥಳದಲ್ಲಿಯೇ ಸೂಚಿಸಲಾಯಿತು. ಒಂದು ವಾರದೊಳಗೆ ಮಣ್ಣನ್ನು ತೆಗೆದು ಯಥಾ ಸ್ಥಿತಿಗೆ ತರಬೇಕು. ಇಲ್ಲವಾದಲ್ಲಿ ಕ್ರಮ ತೆಗೆದುಕೊಳ್ಳಲುವುದಾಗಿ ಒತ್ತುವರಿದಾರರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಸರ್ವೇ ನಂಬರ್ 174/1ರ ಜಮೀನಿನ ಮಾಲೀಕ ಕಾವೇರಿ ನದಿ ಪಾತ್ರದ ಖರಾಬು ಭೂಮಿಯನ್ನು ಒತ್ತುವರಿ ಮಾಡಿ ನದಿಯ ದಂಡೆಯ ಸ್ವಾಭಾವಿಕ ಸ್ಥಿತಿಯನ್ನು ಬದಲಾಯಿಸಿ ಕೆಲ ಕಾಮಗಾರಿಯನ್ನು ನದಿಯ ಖರಾಬಿನಲ್ಲಿ ಕೈಗೊಂಡಿದ್ದಾನೆ.
ತೆರವುಗೊಳಿಸುವ ವೇಳೆ ವಿದ್ಯುತ್ ಲೈನ್ಗಳು ಇದ್ದ ಕಾರಣ ಸುರಕ್ಷತಾ ಹಿತದೃಷ್ಟಿಯಿಂದ ತೆರವುಗೊಳಿಸಲು ಸಾಧ್ಯವಾಗಿಲ್ಲ. ಜೊತೆಗೆ ಸ್ಥಳದಲ್ಲಿದ್ದ ಮಾಲೀಕನಿಗೆ 15 ದಿನಗಳ ಒಳಗೆ ಒತ್ತುವರಿಯಾಗಿರುವುದನ್ನು ತೆರವುಗೊಳಿಸಿಕೊಡುವುದಾಗಿ ಒಪ್ಪಿಗೆ ಪತ್ರ ಬರೆದು ಕೊಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕೆಆರ್ ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿ
ಇಂದಿನ ಮಟ್ಟ – 80.72 ಅಡಿ
ಒಳ ಹರಿವು – 1416 ಕ್ಯುಸೆಕ್
ಹೊರ ಹರಿವು –270 ಕ್ಯುಸೆಕ್
ನೀರಿನ ಸಂಗ್ರಹ – 11.107 ಟಿಎಂಸಿ