ಎಂಡಿಎ ಆಸ್ತಿ ಸಂರಕ್ಷಣೆಗೆ ಒತ್ತುವರಿ ಕಾರ್ಯಾಚರಣೆ ಚುರುಕು

| Published : Jun 23 2025, 11:47 PM IST

ಎಂಡಿಎ ಆಸ್ತಿ ಸಂರಕ್ಷಣೆಗೆ ಒತ್ತುವರಿ ಕಾರ್ಯಾಚರಣೆ ಚುರುಕು
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಸೋಮವಾರ ಬೆಳಗ್ಗೆಯೇ ಎಂಡಿಎ ತೆರವು ಕಾರ್ಯಾಚರಣೆ ಕೈಗೊಂಡು 8 ಎಕರೆ 28 ಗುಂಟೆ ಜಾಗವನ್ನು ತನ್ನ ವಶಕ್ಕೆ ಪಡೆಯಿತು.

ಕನ್ನಡಪ್ರಭ ವಾರ್ತೆ ಮೈಸೂರುನಗರದಲ್ಲಿ ಸೋಮವಾರ ಬೆಳಗ್ಗೆಯೇ ಎಂಡಿಎ ತೆರವು ಕಾರ್ಯಾಚರಣೆ ಕೈಗೊಂಡು 8 ಎಕರೆ 28 ಗುಂಟೆ ಜಾಗವನ್ನು ತನ್ನ ವಶಕ್ಕೆ ಪಡೆಯಿತು.ಎಂಡಿಎ ಅಧಿಕಾರಿಗಳನ್ನು ಒಳಗೊಂಡ ತಂಡವು ಕೋಟ್ಯಂತರ ರೂ. ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆಯಿತು. ಮೈಸೂರಿನ ವಿಜಯನಗರ 4ನೇ ಹಂತದಲ್ಲಿ ಮನೆಗಳನ್ನ ತೆರವುಗೊಳಿಸಿದೆ. ಹೊರ ವರ್ತುಲ ರಸ್ತೆಗೆ ಹೊಂದಿಕೊಂಡಂತೆ ಇರುವ ಬಸವನಹಳ್ಳಿ ಗ್ರಾಮ ವ್ಯಾಪ್ತಿಗೆ ಸೇರಿದ ಜಾಗವನ್ನು ವಶಕ್ಕೆ ಪಡೆದಿದ್ದಾರೆ. ಈ ಮೂಲಕ 150 ಕೋಟಿ‌ರೂ. ಗಳಿಗೂ ಅಧಿಕ ಆಸ್ತಿ ರಕ್ಷಣೆ ಮಾಡಿದೆ.ಈ ಸ್ಥಳದಲ್ಲಿ ಹಲವು ವರ್ಷಗಳಿಂದ ಜನರು ವಾಸವಿದ್ದರು. ಈ ನಡುವೆ ಹೈ ಕೋರ್ಟ್ ನಲ್ಲಿ ಪ್ರಕರಣವಿದ್ದು, ಸ್ವಲ್ಪ ಕಾಲಾವಕಾಶ ನೀಡಿ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಹಾಗೆಯೇ ಮನೆಗಳ ತೆರವಿಗೆ ಮುಂದಾದ ಮುಡಾ ಅಧಿಕಾರಿಗಳ ಜೊತೆ ನಿವಾಸಿಗಳು ಮಾತಿನ ಚಕಮಕಿ ನಡೆಸಿದ್ದು, ಪೋಲೀಸರ ಸರ್ಪಗಾವಲಿನಲ್ಲಿ ಮನೆಗಳನ್ನ ತೆರವುಗೊಳಿಸಲಾಗಿದೆ.ಅಲ್ಲಿನ ನಿವಾಸಿಗಳು ಮತ್ತು ಮಹಿಳೆಯರು ಕಾರ್ಯಾಚರಣೆಗೆ ಅಡ್ಡಿಪಡಿಸಿದರೂ ಅಧಿಕಾರಿಗಳು ಕ್ಯಾರೆ ಎಂದಿಲ್ಲ. ಬದಲಿಗೆ ಪೊಲೀಸರು ಕಾರ್ಯಾಚರಣೆಗೆ ಅಡ್ಡಿಪಡಿಸಿದವರನ್ನು ಸಮಾಧಾನಪಡಿಸಿದರು. ಮಾತು ಕೇಳದಿದ್ದಾಗ ವಶಕ್ಕೆ ಪಡೆಯುವುದಾಗಿ ಬೆದರಿಕೆ ಹಾಕಿದರು.ಸ್ಥಳದಲ್ಲಿ ವಿಜಯನಗರ ಠಾಣೆ ಪೋಲೀಸರು ಬಿಗಿ ಬಂದೋಬಸ್ತ್‌ ನಿಯೋಜಿಸಿದ್ದರು.ಎಂಡಿಎಗೆ ಸುಮಾರು 300 ರಿಂದ 400 ಕೋಟಿ ರೂ. ಆದಾಯ ತಂದು ಕೊಡುವ ಈ ಜಾಗವನ್ನು ನಿವೇಶನವಾಗಿ ಪರಿವರ್ತಿಸಿ ಹರಾಜಿನಲ್ಲಿ ಮಾರಾಟ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಸರ್ವೇ ನಂಬರ್ 108, 109ರ 8 ಎಕರೆ ಜಾಗಕ್ಕೆ ಎಂಡಿಎಯಿಂದ 4 ಲಕ್ಷ ಪರಿಹಾರ ನೀಡಲಾಗಿತ್ತು. ಆದರೆ ಮುಡಾ ನೀಡಿದ್ದ ಪರಿಹಾರವನ್ನ ನಿವಾಸಿಗಳು ತೆಗೆದುಕೊಳ್ಳಲು ನಿರಾಕರಿಸಿ ಮುಡಾ ಅಧಿಕಾರಿಗಳ ಬಳಿ ಕಾಲವಕಾಶ ಕೇಳಿಕೊಂಡರು. ಸದ್ಯದಲ್ಲಿಯೇ ಹೈ ಕೋರ್ಟ್ ನ ದ್ವಿಸದಸ್ಯ ಪೀಠದಲ್ಲಿ ಪ್ರಕರಣವಿದೆ. ತೆರವು ಕಾರ್ಯಾಚರಣೆ ಮತ್ತಷ್ಟು ಚುರುಕುಅಕ್ರಮವಾಗಿ ಅತಿಕ್ರಮಿಸಿರುವ ನಿವೇಶನ ಹಾಗೂ ಜಮೀನುಗಳ ಒತ್ತುವರಿ ತೆರವಿಗೆ ಎಂಡಿಎ ಮತ್ತಷ್ಟು ಚುರುಕಿನ ಕಾರ್ಯಾಚರಣೆ ನಡೆಸಲಿದೆ. ಈ ಸಂಬಂಧ ಮುಂದಿನ 15 ದಿನಗಳಲ್ಲಿ ಭೂ ಅತಿಕ್ರಮಣದ ಆಡಿಟ್‌ವರದಿ ಎಂಡಿಎ ಕೈ ಸೇರಲಿದೆ.ಪ್ರಾಧಿಕಾರಕ್ಕೆ ಸೇರಿರುವ ಭೂಮಿಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಎಂಡಿಎ ಮುಂದಾಗಿದೆ. ಈ ಸಂಬಂಧ ಈಗಾಗಲೇ ಅಗತ್ಯ ಯೋಜನೆ ಸಿದ್ಧಪಡಿಸುತ್ತಿದ್ದು, ಮುಂದಿನ 15 ದಿನಗಳಲ್ಲಿ ಇದರ ಆಡಿಟ್‌ವರದಿ ಕೈ ಸೇರಲಿದೆ. ಬಳಿಕ ಒತ್ತುವರಿ ಕಾರ್ಯವರಣೆಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಆಯುಕ್ತ ರಕ್ಷಿತ್‌ ತಿಳಿಸಿದರು.ವಿಜಯನಗರದ ನಾಲ್ಕನೆ ಹಂತದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕಟ್ಟಡ ತೆರವುಗೊಳಿಸಲಾಗಿದೆ. ಒಟ್ಟು ಎಂಟು ಎಕರೆ ಜಾಗವನ್ನು ಎಂಡಿಎ ವಶಕ್ಕೆ ಪಡೆದಿದೆ. ಈ ಪ್ರಕರಣ ಕೋರ್ಟ್‌ನಲ್ಲಿತ್ತು. ಇದೀಗ ಕೋರ್ಟ್‌ಆದೇಶ ಸರ್ಕಾರದ ಪರವಾಗಿಯೇ ಆಗಿದ್ದು, ಒತ್ತುವರಿ ತೆರವುಗೊಳಿಸಿ ಅಲ್ಲಿ ಬೇಲಿ ಹಾಕಲಾಗುವುದು ಎಂದರು.ಒತ್ತುವರಿ ತೆರವುಗೊಳಿಸಿರುವ ಈ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಿ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಅಂದಾಜು 200 ಕೋಟಿ. ರೂ. ಗಳು ಪ್ರಾಧಿಕಾರಕ್ಕೆ ಲಭಿಸಲಿದೆ ಎಂದರು.ಬಹುತೇಕ ಒತ್ತುವರಿ ಪ್ರಕರಣಗಳಲ್ಲಿ ಒತ್ತುವರಿದಾರರು ಸ್ಥಳದಲ್ಲಿ ತಾವು ವಾಸವಾಗಿರುವುದನ್ನೇ ದಾಳವಾಗಿ ಬಳಸಿಕೊಂಡು ಕೋರ್ಟ್‌ ಮೆಟ್ಟಿಲೇರುತ್ತಾರೆ. ಸೂಕ್ತ ದಾಖಲೆ ಒದಗಿಸುವ ಮೂಲಕ ಪ್ರಾಧಿಕಾರದ ಜಾಗ ಸಂರಕ್ಷಿಸಲಾಗುವುದು. ಲ್ಯಾಂಡ್‌ಆಡಿಟ್‌ ರಿಪೋರ್ಟ್‌ಕೈ ಸೇರಿದ ಕೂಡಲೇ ಪ್ರಾಧಿಕಾರದ ಆಸ್ತಿ ಒತ್ತುವರಿ ತೆರವುಗೊಳಿಸಿ ರಕ್ಷಿಸಲಾಗುತ್ತದೆ. ಇನ್ಮುಂದೆ ಪ್ರತಿ ಶನಿವಾರ ಸಂಬಂಧಿಸಿದ ಒತ್ತುವರಿದಾರರಿಗೆ ನೋಟಿಸ್‌ನೀಡಿ, ಸೋಮವಾರ ಒತ್ತುವರಿ ತೆರವು ಕಾರ್ಯಚರಣೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.