ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣಕನ್ನಡ ಹಾಲು ಒಕ್ಕೂಟವು ಪ್ರತಿ ವರ್ಷದಂತೆ ಈ ವರ್ಷ ಕೂಡ ತನ್ನ ಸಮಸ್ತ ನಂದಿನಿ ಪರಿವಾರದೊಂದಿಗೆ ಒಕ್ಕೂಟದ ಅಧ್ಯಕ್ಷ, ಸಹಕಾರ ರತ್ನ ಕೊಡವೂರು ರವಿರಾಜ್ ಹೆಗ್ಡೆ ಮಾರ್ಗದರ್ಶನದಲ್ಲಿ ಪರಿಸರ ದಿನ ಆಚರಿಸಲಾಯಿತು.ಒಕ್ಕೂಟದ ಮುಖ್ಯದ್ವಾರದ ಬಳಿ ಬಸ್ ನಿಲ್ದಾಣದಿಂದ ಪ್ರಧಾನ ಕಚೇರಿ ವರೆಗೆ ಶ್ರಮದಾನದ ಮೂಲಕ ರಸ್ತೆ ಹಾಗೂ ಸುತ್ತಮುತ್ತಲಿನಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯವನ್ನು ಸಂಗ್ರಹಿಸುವುದರ ಮೂಲಕ, ಸ್ಥಳೀಯ ನಿವಾಸಿಗಳಿಗೆ ಅರಿವು ಮೂಡಿಸುತ್ತಾ ಜೊತೆಗೆ ಒಕ್ಕೂಟದ ಆವರಣದಲ್ಲಿ ಗಿಡ ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ವಿಶಿಷ್ಟವಾಗಿ ಹಾಗೂ ಮಹತ್ವ ಪೂರ್ಣವಾಗಿ ಆಚರಿಸಲಾಯಿತು.ಈ ಸಂದರ್ಭ ಒಕ್ಕೂಟದ ಉಪಾಧ್ಯಕ್ಷ ಉದಯ್ ಕೋಟ್ಯಾನ್ ಮಾತನಾಡಿ, ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಬಗ್ಗೆ ವಿವರಿಸಿದರು. ಒಕ್ಕೂಟದ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಗುರುಪ್ರಸಾದ್ ಮಾತನಾಡಿ, ಕೇವಲ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿದಿನವು ನಾವೆಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ಪ್ಲಾಸ್ಟಿಕ್ನ ಮಿತ ಬಳಕೆ, ಪುನರ್ ಬಳಕೆ ಹಾಗೂ ಪರ್ಯಾಯ ಬಳಕೆ ಮಾಡಿ ಪ್ಲಾಸ್ಟಿಕ್ ತ್ಯಾಜ್ಯ ಪ್ರಮಾಣವನ್ನು ಕಡಿಮೆಗೊಳಿಸುವಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು. ಒಕ್ಕೂಟದ ಡೇರಿ ಮೇಲ್ವಿಚಾರಕ ವಿನಾಯಕ್ ನಾಯ್ಕರವರು ಪರಿಸರ ದಿನದ ಧ್ಯೇಯ ವಾಕ್ಯದ ಬಗ್ಗೆ ವಿವರಿಸಿದರು. ತಾಂತ್ರಿಕಾಧಿಕಾರಿ ಮೇಘನಾ ಸ್ವಾಗತಿಸಿ ನಿರೂಪಿಸಿದರು.