ಸಾರಾಂಶ
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ನಗರದ ಪಾರ್ಕ್ಗಳು ಸೇರಿ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವ ಹಸಿರೀಕರಣ ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ಭಾನುವಾರ ಮತ್ತು ಬುಧವಾರ ಸಸಿ ನೆಡುವ ಕಾರ್ಯಕ್ರಮದ ಮೂಲಕ ಪರೋಪಕಾರಂ ಕುಟುಂಬದ ಸದಸ್ಯರು ಹಾಗೂ ಸಾರ್ವಜನಿಕರ ಒಂದೆಡೆ ಸೇರಿಸಿ ನಾಗರಿಕ ಸಂಬಂಧವನ್ನೂ ಬೆಸೆಯಲಾಗುವುದು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸ್ಮಾಟ್ ಸಿಟಿ ಎಂದರೆ ಕೇವಲ ಸ್ಮಾರ್ಟ್ ಕಟ್ಟಡ, ಸ್ಮಾರ್ಟ್ ಲಾಜಿಸ್ಟಿಕ್, ಸ್ಮಾರ್ಟ್ ರಸ್ತೆ ಮತ್ತಿತರೆ ಭೌತಿಕ ಅಭಿವೃದ್ಧಿ ಅಷ್ಟೇ ಅಲ್ಲ. ನಗರದ ನಾಗರಿಕರ ಸಹಕಾರ ಮತ್ತು ಸಹಭಾಗಿತ್ವದಿಂದ ಸುಂದರ ಮಾಲಿನ್ಯ ಮುಕ್ತ ಪರಿಸರ ನಿರ್ಮಾಣದೊಂದಿಗೆ ಮಾನವ ಸಂಬಂಧ ವೃದ್ಧಿ, ಸೌಹಾರ್ದತೆಯ ಸಮಾಜದಿಂದ ಕೂಡಿದ್ದರೆ ಮಾತ್ರ ಸ್ಮಾರ್ಟ್ ಸಿಟಿಗೆ ಪರಿಪೂರ್ಣ ಅರ್ಥ ಬರುತ್ತದೆ ಎಂದು ಪರೋಪಕಾರಂ ಕುಟುಂಬದ ಕಟ್ಟಾಳು ಎನ್.ಎಂ.ಶ್ರೀಧರ್ ಹೇಳಿದರು.ಪರೋಪಕಾರಂ ಕುಟುಂಬದ ವತಿಯಿಂದ ಭಾನುವಾರ 781ನೇ ಕಾರ್ಯಕ್ರಮದ ಭಾಗವಾಗಿ ಹಮ್ಮಿಕೊಂಡಿದ್ದ 24 ಜೈನ ತೀರ್ಥಂಕರರ ಪವಿತ್ರ ವೃಕ್ಷಗಳ ಉದ್ಯಾನವನದಲ್ಲಿ ಗಿಡಗಳ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ನಗರದ ಪಾರ್ಕ್ಗಳು ಸೇರಿ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವ ಹಸಿರೀಕರಣ ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ಭಾನುವಾರ ಮತ್ತು ಬುಧವಾರ ಸಸಿ ನೆಡುವ ಕಾರ್ಯಕ್ರಮದ ಮೂಲಕ ಪರೋಪಕಾರಂ ಕುಟುಂಬದ ಸದಸ್ಯರು ಹಾಗೂ ಸಾರ್ವಜನಿಕರ ಒಂದೆಡೆ ಸೇರಿಸಿ ನಾಗರಿಕ ಸಂಬಂಧವನ್ನೂ ಬೆಸೆಯಲಾಗುವುದು ಎಂದು ತಿಳಿಸಿದರು.
ಈ ಹಿಂದೆ ಮಹಾವೀರ ಉದ್ಯಾನವನದಲ್ಲಿ ಪರೋಪಕಾರಂ ವತಿಯಿಂದ ನೆಟ್ಟ ಗಿಡಗಳನ್ನು ರಾಜಾ ಕಾಲುವೆ ದುರಸ್ತಿ ನೆಪದಲ್ಲಿ ಕಿತ್ತು ಹಾಕಲಾಯಿತು. ನಂತರ ಮತ್ತೆ ನೆಟ್ಟ ಗಿಡಗಳು ಧೂಮ ವ್ಯಸನಿಗಳು ಸೇದಿ ಬಿಸಾಡಿದ ಬೀಡಿ ಅಥವಾ ಸಿಗರೇಟಿನಿಂದ ಹೊತ್ತಿ ಕೊಂಡ ಬೆಂಕಿಗೆ ಸುಟ್ಟು ಹೋದವು. ಈಗ ಮತ್ತೆ ಛಲ ಬಿಡದ ತ್ರಿವಿಕ್ರಮನಂತೆ ಈ ಮುಂಗಾರಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಪ್ರಾರಂಭಿಸಿದ್ದೇವೆ. ಪರಿಸರ ಪ್ರೇಮಿಗಳು ಹಾಗೂ ಉತ್ಸಾಹಿಗಳು ಈ ಹಸರೀಕರಣ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದರು.ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಸತೀಶ್, ಅನಿಲ್ ಹೆಗ್ಡೆ, ಆರ್.ಶ್ರೀಕಾಂತ್ , ಆಡಿಟರ್ ಕೃಷ್ಣಮೂರ್ತಿ, ಕಾರ್ಪೆಂಟರ್ ಕುಮಾರ್, ಎನ್.ಎಂ.ರಾಘವೇಂದ್ರ, ಬಿ.ಪಾಶ್ವನಾಥ್ , ಓಂ ಪ್ರಕಾಶ್, ಬಾಹುಬಲಿ, ಜಯಸ್ವಾಮಿ, ವಚನ ಜಗದೀಶ್, ರಾಘವೇಂದ್ರ ಪೈ, ಆರ್.ಕಿರಣ್ , ವಿಜಯ್ ಕಾರ್ತಿಕ್, ವೈಷ್ಣವಿ, ವೈಶಾಖ, ಚರಿತಾ, ಶ್ರೀಯಾನ್ ಮತ್ತಿತರರಿದ್ದರು.