ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಹೊಳಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಮುನೇಶ್ವರ ಸ್ವಾಮಿ, ಶ್ರೀಪಾರ್ವತಮ್ಮ ದೇವಿ, ಶ್ರೀದೊಡ್ಡಮ್ಮತಾಯಿ ಹಾಗೂ ಶ್ರೀಚಿಕ್ಕಮ್ಮ ದೇವಿ ದೇವಸ್ಥಾನ ದೇವರ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.ಎರಡು ದಿನಗಳ ಕಾಲ ಗುರು ಗಣಪತಿ ಪೂಜೆ, ನವಗ್ರಹ ಪೂಜೆ, ವಾಸ್ತು ಪೂಜೆ, ಗಣಪತಿ ಹೋಮ, ನವಗ್ರಹ ಹೋಮ ದುರ್ಗಾ ಹೋಮ, ಶಾಂತಿ ಹೋಮ, ಪ್ರಾಣ ಪ್ರತಿಷ್ಠೆ, ಪ್ರತಿಷ್ಠಾಪನ ಹೋಮ, ಅಮ್ಮನವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಅರ್ಚನೆ, ಮಹಾಮಂಗಳಾರತಿ ನೆರವೇರಿಸಲಾಯಿತು.
ದೇವತಾ ಕಾರ್ಯಕ್ರಮವನ್ನು ಅರ್ಚಕರಾದ ಮಂಜು ಉಡುಪ, ತಂಡದವರು ನಡೆಸಿಕೊಟ್ಟರು. ಮನ್ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ, ಗ್ರಾಮದ ಮುಖಂಡರಾದ ಎಚ್.ಸಿ.ಹರಿಪ್ರಸಾದ್, ಎಚ್.ಸಿ.ಶ್ರೀಧರ್, ಎಚ್.ಎಸ್.ಯೋಗೇಶ್ಕುಮಾರ್, ಜಟ್ಟಿ ಕುಮಾರ್, ಪುಟ್ಟಸ್ವಾಮಿ ಇತರರಿದ್ದರು.ದೇವರುಗಳ ವಿಗ್ರಹವನ್ನು ರೂಪಿಸಿದ ಶಿಲ್ಪಿಯಾದ ಅಶೋಕ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ದೇವಸ್ಥಾನಕ್ಕೆ ಧನ ಸಹಾಯ ಮಾಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಜನಪದ ಕಲಾವಿದ ಗೋಪಿ ತಂಡದಿಂದ ದೇವರ ಭಕ್ತಿ ಗೀತೆಗಳನ್ನು ನಡೆಸಿಕೊಟ್ಟರು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.೯ರಂದು ಸಾಹೇಬರ ಸರ್ಕೀಟು ನಾಟಕ ಪ್ರದರ್ಶನ
ಮಂಡ್ಯ: ಕರ್ನಾಟಕ ಸಂಘದ ವತಿಯಿಂದ ಎಂ.ಆರ್.ಶ್ರೀನಿವಾಸಮೂರ್ತಿ ಅವರ ರಂಗಣ್ಣನ ಕನಸಿನ ದಿನಗಳು ಕಾದಂಬರಿ ಆಧಾರಿತ ಸಾಹೇಬರ ಸರ್ಕೀಟು ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭ ಫೆ.೯ರಂದು ಸಂಜೆ ೬.೫೦ ಗಂಟೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆಯಲಿದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್.ಬಿ.ಶಂಕರೇಗೌಡ ಹೇಳಿದರು.ಉದ್ಘಾಟನೆಯನ್ನು ಮೈಸೂರಿನ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ನೆರವೇರಿಸುವರು. ಮಿತ್ರ ಫೌಂಡೇಷನ್ನ ವಿಜಯ ರಾಮೇಗೌಡ ಅಧ್ಯಕ್ಷತೆ ವಹಿಸುವರು. ಬೆಂಗಳೂರು ವ್ಹೀಲ್ಕಾರ್ಟ್ನ ಪ್ರಸನ್ನ ಸಂಚಿಕೆ ಬಿಡುಗಡೆ ಮಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಮೈಷುಗರ್ ಮಾಜಿ ಅಧ್ಯಕ್ಷ ಬಿ.ಸಿ.ಶಿವಾನಂದ, ಅಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು, ತಾರಾ ಡೈಗ್ನೋಸ್ಟಿಕ್ ಸೆಂಟರ್ನ ಡಾ.ಕೆ.ಚಂದ್ರಶೇಖರ್ ಭಾಗವಹಿಸುವರು.
ಮಮತಾ ರಾಮಕೃಷ್ಣ, ಮಂಜುಳಾ ಕಾಂತರಾಜ್, ಶಕುಂತಲಾ ಚಂದ್ರಶೇಖರ್, ಮಾಲತಿ ರವಿಪ್ರಸಾದ್ ಉಪಸ್ಥಿತರಿರುವರು. ಈ ನಾಟಕವನ್ನು ಪ್ರಮೋದ್ ಶಿಗ್ಗಾಂವ್ ನಿರ್ದೇಶಿಸಿದ್ದು, ಗಜಾನನ ಬಿ.ನಾಯ್ಕ ಸಂಗೀತ, ಕೃಷ್ಣಕುಮಾರ ನಾರ್ಣಕಜೆ ಬೆಳಕು, ಎಚ್.ಡಿ.ಸೋಮಶೇಖರ್ ಪ್ರಸಾದನ ಮಾಡಿದ್ದಾರೆ. ಪ್ರವೇಶ ಶುಲ್ಕ ೧೦೦ ರು. ನಿಗದಿಪಡಿಸಲಾಗಿದೆ ಎಂದರು. ೧೯೪೦-೫೦ರ ದಶಕದಲ್ಲಿ ನಮ್ಮ ದೇಶದ ಪ್ರಾಥಮಿಕ ವಿದ್ಯಾಭ್ಯಾಸ ಕ್ರಮದಲ್ಲಿರುವ ಕೆಲವು ಲೋಪದೋಷಗಳು, ಅವುಗಳನ್ನು ತಿದ್ದಿಕೊಳ್ಳಬಹುದಾದ ಮಾರ್ಗಗಳು, ಉಪಾಧ್ಯಾಯರ ಬಡತನದ ಜೀವನ, ಅವರ ಕಷ್ಟಕಾರ್ಪಣ್ಯಗಳು, ಅವರ ಶೀಲ ಸ್ವಭಾವಗಳು, ಸಾರ್ವಜನಿಕ ಮುಖಂಡರಲ್ಲಿನ ಸ್ವಾರ್ಥ-ನಿಸ್ವಾರ್ಥಗಳನ್ನು, ಹಳ್ಳಿಯ ಜನರ ಸಜ್ಜನಿಕೆಯನ್ನು ಕೆಲವು ಸಂಸಾರಗಳ ಚಿತ್ರಣಗಳು ಸೇರಿದಂತೆ ಮೊದಲಾದವನ್ನು ಈ ನಾಟಕದಲ್ಲಿ ಕಾಣಬಹುದಾಗಿದೆ ಎಂದರು.ಗೋಷ್ಠಿಯಲ್ಲಿ ಎಚ್.ನಾಗಪ್ಪ, ಎಚ್. ಸೋಮಶೇಖರ್, ಬಾಲಕೃಷ್ಣ ಇದ್ದರು.