ಸರ್ಕಾರದ ಅನುದಾನದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಎಂಜಿನಿಯರ್ಗಳು ಕಟ್ಟುನಿಟ್ಟಿನ ನಿಗಾವಹಿಸಬೇಕು.
ಸರ್.ಎಂ. ವಿಶ್ವೇಶ್ವರಯ್ಯನವರ ಜಯಂತಿ ಆಚರಣೆ
ಕನ್ನಡಪ್ರಭ ವಾರ್ತೆ ಗದಗ
ಸರ್ಕಾರದ ಅನುದಾನದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಎಂಜಿನಿಯರ್ಗಳು ಕಟ್ಟುನಿಟ್ಟಿನ ನಿಗಾವಹಿಸಬೇಕು. ಗುತ್ತಿಗೆದಾರರು ತಮಗೆ ಬೇಕಾದ ರೀತಿಯಲ್ಲಿ ಕೆಲಸ ನಿರ್ವಹಿಸದಂತೆ, ನಿಯಮಾನುಸಾರ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.ನಗರದ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್, ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್ ಎಂಜಿನಿಯರಿಂಗ್ ಇಲಾಖೆ ವಿಭಾಗದ ವತಿಯಿಂದ ಜರುಗಿದ ಸರ್.ಎಂ. ವಿಶ್ವೇಶ್ವರಯ್ಯನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಸ್ತೆ, ಸೇತುವೆ ಸೇರಿ ಯಾವುದೇ ಕಾಮಗಾರಿಯ ಗುಣಮಟ್ಟ ಪರಿಶೀಲಿಸುವಾಗ ಅಗತ್ಯ ಅಳತೆ, ದಾಖಲೆ ಹಾಗೂ ತಾಂತ್ರಿಕ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕೇವಲ ಕಾಗದದಲ್ಲಿ ಗುಣಮಟ್ಟ ಪರಿಶೀಲನೆ ನಡೆಸದೆ, ಸ್ಥಳದಲ್ಲೇ ಕಾಮಗಾರಿಯನ್ನು ಪರಿಶೀಲಿಸಿ ಲೋಪ ಕಂಡುಬಂದರೆ ತಕ್ಷಣ ಸರಿಪಡಿಸಬೇಕು ಎಂದರು.ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಕಾಮಗಾರಿಯ ಗುಣಮಟ್ಟ ನೇರವಾಗಿ ಜನಪ್ರತಿನಿಧಿಗಳ ಮೇಲೂ ಪರಿಣಾಮ ಬೀರುತ್ತದೆ. ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾದರೆ ಅದರ ಶ್ರೇಯಸ್ಸು ಎಲ್ಲರಿಗೂ ಸಿಗುತ್ತದೆ. ಕಳಪೆ ಕಾಮಗಾರಿ ನಡೆದರೆ ಜನರು ಜನಪ್ರತಿನಿಧಿಗಳನ್ನೇ ಪ್ರಶ್ನಿಸುತ್ತಾರೆ. ಹೀಗಾಗಿ ಎಂಜಿನಿಯರ್ಗಳು ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಿ, ಸರ್ಕಾರದ ಹಣ ಸದುಪಯೋಗವಾಗುವಂತೆ ನೋಡಿಕೊಳ್ಳಬೇಕು ಎಂದರು.
ಈ ವೇಳೆ ಯುಥ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ನಗರರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಮುಖ್ಯ ಅಭಿಯಂತರ ಶಿವಾನಂದ ನಾಯಕ, ಕಾರ್ಯಪಾಲಕ ಅಭಿಯಂತರ ಉಮೇಶ ನಾಯಕ, ಆರ್.ಬಿ. ಮರಾಠೆ, ಹಿರಿಯ ಭೂವಿಜ್ಞಾನಿ ಉಮೇಶ ಬಗರಿ, ಜಿಲ್ಲಾ ಸಿವ್ಹಿಲ್ ಗುತ್ತಿಗೆದಾರರ ಅಸೋಸಿಯೇಶನ್ ಅಧ್ಯಕ್ಷ ಎಸ್.ಕೆ. ಪಾಟೀಲ, ವಿ.ಜಿ. ಮುಲ್ಕಿಪಾಟೀಲ, ಆಂಜನೇಯ ಕಟಗಿ, ರಮೇಶ ರಂಗಪ್ಪನವರ, ಬಿ.ಐ. ಶಿರಗುಂಪಿ, ಸುರೇಶ ತಿರ್ಲಾಪೂರ, ಬಿ.ಎಸ್. ಮೇಟಿ, ಸಿ.ಜಿ. ಬಿರಾದಾರ, ಎ.ಎಚ್. ಪಾಟೀಲ, ಬಿ.ಆರ್. ಹೊಸಮನಿ, ಅನಿಲ ಧರಿಯಣ್ಣವರ, ಸಿ.ಎಸ್. ನಾಗಾವಿ, ಎಂ.ಎಸ್. ಮಾದಣ್ಣವರ, ಎಂ.ಟಿ. ಪಾಟೀಲ, ಯುವರಾಜ ಬಳ್ಳಾರಿ, ಎಸ್.ಬಿ. ಗವಾರಿ ಇದ್ದರು.ಬಾಹುಬಲಿ ಜೈನರ ನಿರೂಪಿಸಿದರು. ಪ್ರಕಾಶ ಮುದಗಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು.