ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಯಾವುದೇ ಸಾಧನೆ ಮಾಡಬೇಕಾದರೂ, ಶಿಕ್ಷಣವೇ ಇಂದಿನ ಪ್ರಬಲ ಅಸ್ತ್ರ. ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಾಲೆಗೆ ದಾಖಲು ಮಾಡುವ ಮೂಲಕ ಗುಣಮಟ್ಟದ ಶಿಕ್ಷಣಕೊಡಿಸಬೇಕು ಎಂದು ಚಾಮರಾಜನಗರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ (ಮುನ್ನ) ಹೇಳಿದರು.ನಗರದ ಗಾಳೀಪುರ ಬಡಾವಣೆಯ ಮಕ್ಕಾ ಮೊಹಲ್ಲಾ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ೨೦೨೫-೨೬ ನೇ ಸಾಲಿನ ಶಾಲಾಶೈಕ್ಷಣಿಕ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.ಸಮುದಾಯದವರು ತಮ್ಮ ಮಕ್ಕಳನ್ನು ೧ರಿಂದ ೮ ನೇ ತರಗತಿವರಗೆ ಓದಿಸುತ್ತಿದ್ದು, ಮುಂದೆ ಓದಿಸಲು ಮುಂದಾಗುವುದಿಲ್ಲ. ಇದರಿಂದ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವಿನ ಕೊರತೆ ಕಾಡುತ್ತದೆ. ೧೦ ನೇ ತರಗತಿ, ಪಿಯುಸಿ, ಪದವಿವರೆಗೂ ಶಿಕ್ಷಣ ಕೊಡಿಸಬೇಕು, ಪೋಷಕರು ಯಾವುದೇ ಕಾರಣಕ್ಕೂ ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬಾರದು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿಯೇ ಸರ್ಕಾರ ಪ್ರತ್ಯೇಕ ಅನುದಾನ ನೀಡುತ್ತದೆ. ಅಕ್ಷರಜ್ಞಾನಗಳಿಸುವ ಮೂಲಕ ಸರ್ಕಾರದ ಸೌಲಭ್ಯಪಡೆಯಬೇಕು ಎಂದರು. ಶಾಲಾ ಪ್ರಾರಂಭೋತ್ಸವ ಹಿನ್ನೆಲೆ ಶಾಲಾಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಿ ಸ್ವಾಗತಿಸಿ ಶಾಲೆಗೆ ಬರಮಾಡಿಕೊಳ್ಳಲಾಯಿತು.
ನಗರಸಭೆ ೬ ನೇ ವಾರ್ಡ್ ಸದಸ್ಯ ಅಪ್ಸರ್, ೩ ನೇ ವಾರ್ಡ್ ಸದಸ್ಯ ಮಹಮದ್ ಅಮಿಕ್, ಎಸ್ಡಿಎಂಸಿ ಅಧ್ಯಕ್ಷ ಮಹಮದ್ ಇಸ್ಮಾಯಿಲ್ ರಶೀದ್, ಉಪಾಧ್ಯಕ್ಷೆ ಜುಹೀರಾ, ಸದಸ್ಯರಾದ ಜಬೀ ಇಮ್ರಾನ್, ಪರ್ವೀಜ್, ಮುಖ್ಯಶಿಕ್ಷಕಿ ಬಿ,ಶರೀಪಾ, ಉರ್ದು ಕ್ಲಸ್ಟರ್ ಸಿಆರ್ಪಿ ಆಯಷಾಖಾನಂ, ದೈಹಿಕಶಿಕ್ಷಕ ಮಹದೇವಸ್ವಾಮಿ, ಸಹಶಿಕ್ಷಕರಾದ ರಾಜೇಶ್ವರಿ, ಪಹೀಮಾಮುನ್ನೀಸಾ, ಆಯಿಷಾಬಸುಂ, ಹಸೀನಾಭಾನು, ಕುಲ್ಸುಂ, ತಬಸುಂ, ಪೋಷಕರು ಹಾಜರಿದ್ದರು.