ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಶ್ರೀಕೋಟೆ ವಿದ್ಯಾಗಣಪತಿ ವಿಸರ್ಜನಾ ಮಹೋತ್ಸವದಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಸೌಹಾರ್ಧತೆಯಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ಪಟ್ಟಣದ ಜಯಮ್ಮ ಕೃಷ್ಣಪ್ಪ ಅವರು ಸಮುದಾಯ ಭವನದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಆಯೋಜಿಸಿದ್ದ ಶ್ರೀಕೋಟೆ ವಿದ್ಯಾಗಣಪತಿ ವಿಸರ್ಜನೆ ಸಂಬಂಧ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ನಾವು ನಿರ್ಬಂಧಿಸುವುದಿಲ್ಲ. ಬದಲಾಗಿ ಶಾಂತಿ ಸುವ್ಯವಸ್ಥೆಯಿಂದ ಮಾಡಬೇಕು ಎಂಬ ಉದ್ದೇಶದಿಂದ ನಿಮ್ಮಗಳ ಶಾಂತಿ ಸೌಹಾರ್ದತೆ ಸಭೆ ಆಯೋಜಿಸಲಾಗಿದೆ ಎಂದರು.ಪ್ರತಿಯೊಂದು ಧರ್ಮದಲ್ಲಿ ಅವರದ್ದೇ ಆದ ಆಚಾರ, ವಿಚಾರಗಳು ಇರುತ್ತವೆ. ಅವುಗಳಿಗೆ ದಕ್ಕೆ ಉಂಟಾಗದಂತೆ ನಾವೆಲ್ಲಾ ನಡೆದುಕೊಳ್ಳಬೇಕು. ಇನ್ನೊಂದು ಧರ್ಮಕ್ಕೆ ದಕ್ಕೆ ಉಂಟಾಗುವ ರೀತಿ ವರ್ತಿಸಿದರೇ ಅಂತಹವರ ಮೇಲೆ ಕಟ್ಟುನಿಟ್ಟಿನ ನಿರ್ದಾಕ್ಷಣ್ಯ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಗಣಪತಿ ಮೆರವಣಿಗೆಗೆ ಸೂಕ್ತ ಬಂದೂಬಸ್ತ್ ಆಯೋಜಿಸಲಾಗುವುದು. ಎಲ್ಲಾ ಕಾರ್ಯಕ್ರಮಗಳನ್ನು ಕಾನೂನು ಸುವ್ಯವಸ್ಥೆಯಡಿಯಲ್ಲಿ ಮಾಡಬೇಕು, ಆಯೋಜಕರು ಜಿಲ್ಲಾಡಳಿತ ಹೇಳುವ ಸಲಹೆ ಸಹಕಾರವನ್ನು ಕೂಡ ಕೇಳಬೇಕು, ಎಲ್ಲದಕ್ಕೂ ಅನುಮತಿ ಪಡೆಯಬೇಕು, ಮೆರವಣಿಗೆಯಲ್ಲಿ ಹೊರಗಿನಿಂದ ಬಂದವರನ್ನು ಸಹ ಶಾಂತಿ ರೀತಿಯಲ್ಲಿ ವರ್ತಿಸುವಂತೆ ತಿಳಿ ಹೇಳಿ ಎಚ್ಚರವಹಿಸಬೇಕು ಎಂದರು,ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಬದರಿಕೊಪ್ಪಲಿನ ಗಣೇಶ ವಿಸರ್ಜನೆ ವೇಳೆ ನಡೆದ ಘಟನೆ ರಾಜ್ಯದಲ್ಲಿ ಸುದ್ದಿಯಾಯಿತು. ಇದರಿಂದ ಪೋಲಿಸ್ ಇಲಾಖೆ ಸೇರಿದಂತೆ ಅನೇಕರಿಗೆ ತೊಂದರೆ ಉಂಟಾಯಿತು. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲರೂ ಎಚ್ಚರವಹಿಸಬೇಕು ಎಂದರು.
ಶ್ರೀಕೋಟೆ ವಿದ್ಯಾಗಣಪತಿ ವಿಸರ್ಜನೆ ವೇಳೆ ಜನಸಾಮಾನ್ಯರು ಸೇರಿದಂತೆ ಸಂಘಟನೆಯವರು ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು, ಪೋಲಿಸ್ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮವಹಿಸುತ್ತದೆ. ಮೆರವಣಿಗೆ ವೇಳೆ ಪೋಲಿಸರು ಇರುವುದರೊಂದಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಲಾಗುವುದು ಎಂದರು.ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಅಸೀಫ್, ಅಪರ ಪೋಲಿಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್ಪಿ ಶಿವಮೂರ್ತಿ, ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಸಿಪಿಐ ಕೆ.ಎಸ್.ನಿರಂಜನ್, ಇನ್ಸ್ಪೆಕ್ಟರ್ ಶಿವಕುಮಾರ್, ಸೇರಿದಂತೆ ಮುಸ್ಲಿಂ ಹಾಗೂ ಹಿಂದೂ ಸಮಾಜದ ಮುಖಂಡರು ಹಾಜರಿದ್ದರು.