ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಮೇ 5 ರಿಂದ 17ರವರೆಗೆ ರಾಜ್ಯ ಸರ್ಕಾರ ಜಾತಿಗಣತಿ ಕಾರ್ಯಕ್ಕೆ ಮುಂದಾಗಿದ್ದು, ಈ ಅವಧಿಯಲ್ಲಿ ಗೊಂದಲಕ್ಕೆ ಅವಕಾಶ ನೀಡದೆ ಮಾದಿಗ ಸಮುದಾಯದವರು ಕಡ್ಡಾಯವಾಗಿ ಜಾತಿ ಕಾಲಂನಲ್ಲಿ ಮಾದಿಗ ಎಂದೇ ನಮೂದಿಸುವಂತೆ ಪಾಲನಹಳ್ಳಿ ಮಠದ ಸಿದ್ದರಾಜು ಸ್ವಾಮೀಜಿ ಕರೆ ನೀಡಿದರು.ನಗರದ ಬಾಬು ಜಗಜೀವನ್ ರಾಂ ಭವನದಲ್ಲಿ ಕರ್ನಾಟಕ ಮಾದಾರ ಮಹಾಸಭಾ ವತಿಯಿಂದ ಒಳ ಮೀಸಲಾತಿ ಸಂಬಂಧ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಕೆಲವರು ನಾವು ಹೆಚ್ಚು ಸಂಖ್ಯೆಯಲ್ಲಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ವಾಸ್ತವವಾಗಿ ಮಾದಿಗರ ಸಂಖ್ಯೆ ಹೆಚ್ಚಿದ್ದು, ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಹೆಸರಿನಲ್ಲಿ ಗುರುತಿಸಿಕೊಂಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಗೊಂದಲ ನಿವಾರಣೆಗೆ ಸಮೀಕ್ಷೆಯ ವೇಳೆ ನಮ್ಮ ಸಮುದಾಯ ಮಾದಿಗ ಎಂದು ಬರೆಸುವುದೇ ಸೂಕ್ತ ಎಂದರು.ಸುಪ್ರೀಂ ಕೋರ್ಟ್ ಆದೇಶದಂತೆ ದತ್ತಾಂಶ (ಎಂಪೋರಿಯಲ್ ಡಾಟಾ) ಸಂಗ್ರಹ ಕಾರ್ಯ ನಡೆಯುವ ವೇಳೆ ಮಾದಿಗ ಸಮುದಾಯದವರು ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು. ಉತ್ಸವ, ಹಬ್ಬ, ಜಯಂತಿಗಳ ಆಚರಣೆಯಲ್ಲಿ ಮುಳುಗುವ ಮುಗ್ದ ಮಾದಿಗ ಸಮುದಾಯ ಜಾತಿಗಣತಿ ಕಾರ್ಯ ಮುಗಿಯುವವರೆಗೂ ಆಚರಿಸಬಾರದು. ನಮ್ಮ ಗುರಿ ಜಾತಿ ಗಣತಿಯತ್ತ ಇರಬೇಕು. ಹೋರಾಟ, ಚಳವಳಿ, ಜಯಂತಿ ಇತರೆ ನೆಪದಲ್ಲಿ ಗುಂಪು ಗುಂಪಾಗಿ ಸೇರುವುದು, ಹಬ್ಬ ಆಚರಿಸುವುದು ಎಲ್ಲವನ್ನು ಕೈಬಿಡಬೇಕು.
ಜಾತಿಗಣತಿ ಕಾರ್ಯ ಪೂರ್ಣಗೊಂಡು ಒಳಮೀಸಲಾತಿ ಜಾರಿಗೊಳ್ಳುವವರೆಗೂ ನಾವೆಲ್ಲರೂ ಕಾಲೋನಿ, ಹಟ್ಟಿ, ಬಡಾವಣೆಗಳ ನಮ್ಮ ನಮ್ಮ ಮನೆಗಳಲ್ಲಿ ಇದ್ದು, ಜಾತಿಗಣತಿದಾರರು ಬಂದಾಗ ಅವರೊಂದಿಗೆ ಸೇರಿ ಬಡಾವಣೆ ಸುತ್ತಬೇಕು. ಸಮುದಾಯದವರಲ್ಲಿ ಮಾದಿಗ ಎಂದು ಕಡ್ಡಾಯವಾಗಿ ಬರೆಸುವ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.ಕರ್ನಾಟಕ ಮಾದಾರ ಮಹಾಸಭಾದ ಸಿ.ರಾಮಕೃಷ್ಣಪ್ಪ ಮಾತನಾಡಿ, ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ಮಹತ್ವದ ತೀರ್ಪು ನೀಡಿದ ಹಿನ್ನೆಲೆ ಈಗಾಗಲೇ ತೆಲಂಗಾಣ ಸೇರಿ ಕೆಲವೆಡೆ ಒಳಮೀಸಲಾತಿ ಜಾರಿಗೆ ಅಲ್ಲಿನ ಸರ್ಕಾರಗಳು ಕ್ರಮಕೈಗೊಂಡಿವೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಕರ್ನಾಟಕದಲ್ಲಿಯೂ ಒಳಮೀಸಲಾತಿ ಜಾರಿಗೊಳಿಸಲು ದಿಟ್ಟ ಕ್ರಮಕೈಗೊಂಡಿದ್ದಾರೆ. ಒಳ ಮೀಸಲು ಜಾರಿಯಾಗುವ ತನಕ ಸರ್ಕಾರಿ ಉದ್ಯೋಗಗಳ ನೇಮಕಾತಿಗೆ ತಡೆ ನೀಡಿದ್ದಾರೆ ಎಂದು ಹೇಳಿದರು. ರಾಜ್ಯ ಸರ್ಕಾರ ನಾಗಮೋಹನ್ ದಾಸ್ ಅಯೋಗದ ನೇತೃತ್ವದಲ್ಲಿ ಸಮೀಕ್ಷೆ ನಡೆಸುತ್ತಿದೆ. ಸಮೀಕ್ಷೆಗೆ 59 ಸಾವಿರ ಶಿಕ್ಷಕರನ್ನು ನೇಮಿಸಿಕೊಂಡಿದೆ. ಸಮೀಕ್ಷೆ ವೇಳೆ ಮಾದಿಗ ಸಮುದಾಯ ಯಾವುದೇ ಕಾರಣಕ್ಕೂ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬ ಸೂಚಕವನ್ನು ಬರೆಸಲೇಬಾರದು. ಮಾದಿಗ ಎಂದೇ ನಾವೆಲ್ಲರೂ ಬರೆಸಬೇಕು ಎಂದರು.
ಸಭೆಯಲ್ಲಿ ಕರ್ನಾಟಕ ಮಾದಾರ ಮಹಾ ಸಭಾದ ಬಚ್ಚಹಳ್ಳಿ ನಾಗರಾಜ್, ಟಿ.ಡಿ.ಮುನಿಯಪ್ಪ, ಮುನಿಸುಬ್ಬಯ್ಯ, ಅಪ್ಪಕಾರನಹಳ್ಳಿ ಹನುಮಯ್ಯ, ಪುರುಷೋತ್ತಮ್, ವಿ.ವೆಂಕಟೇಶ್, ತಳವಾರ್ ನಾಗರಾಜ್, ಹಾದ್ರಿಪುರ ಹರ್ಷ, ವಕೀಲ ಕಾಂತರಾಜ್ , ಮುನಿರಾಜ್, ತಮಟೆ ಗಣೇಶ್, ವೆಂಕಟರಮಣಪ್ಪ, ಮುನಿರಾಜ್, ರಾಮದೇವನಹಳ್ಳಿ, ಆರ್.ವಿ ಮಹೇಶ್, ನೇರಳೇಘಟ್ಟ ರಾಮು, ಹನುಮಂತಯ್ಯ ಸ.ಪ. ಅಧ್ಯಕ್ಷ, ನಗರಸಭಾ ಸದಸ್ಯ ಶಿವಣ್ಣ, ಹುಲಿಕುಂಟೆ ನರಸಿಂಹಪತಿ, ಕೆಂಪವೆಂಕಟಯ್ಯ, ಮಂಜು ರಾಮದಾಸ್, ಕುರುಬರಹಳ್ಳಿ ಮಂಜು, ನರಸಿಂಹ ಮೂರ್ತಿ, ಕರೀಂ ಸೊಣ್ಣೇನಹಳ್ಳಿ ಮುನಿಯಪ್ಪ, ಗೊಲ್ಲಹಳ್ಳಿ ಮುನಿಯಪ್ಪ ಮುಂತಾದವರು ಉಪಸ್ಥಿತರಿದ್ದರು.ಫೋಟೋ-29ಕೆಡಿಬಿಪಿ1- ಪರಿಶಿಷ್ಟ ಜಾತಿ ಒಳಮೀಸಲಾತಿ ಸಂಬಂಧ ನಡೆಯುತ್ತಿರುವ ಜಾತಿ ಗಣತಿ ಕುರಿತು ದೊಡ್ಡಬಳ್ಳಾಪುರದಲ್ಲಿ ಕರ್ನಾಟಕ ಮಾದಾರ ಮಹಾಸಭಾ ನೇತೃತ್ವದಲ್ಲಿ ಬೂತ್ ಮಟ್ಟದ ಸಭೆ ನಡೆಯಿತು.