ಚಿಕ್ಕಮಗಳೂರುಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಚಿಕ್ಕಮಗಳೂರು ನಗರ ಸಜ್ಜಾಗಿದ್ದು, ಬೆಲೆ ಏರಿಕೆಯ ನಡುವೆಯೂ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಾಗಿದ್ದು, ಹೂವು, ಹಣ್ಣು, ಪೂಜಾ ಸಾಮಗ್ರಿ, ಬಟ್ಟೆ, ಬಳೆ ಸೇರಿದಂತೆ ವಿವಿಧ ವಸ್ತುಗಳ ಖರೀದಿ ಚುರುಕುಗೊಂಡಿತ್ತು.

ಬೆಲೆ ಏರಿಕೆಯ ನಡುವೆಯೂ ಹಬ್ಬದ ಖರೀದಿ ಭರಾಟೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಚಿಕ್ಕಮಗಳೂರು ನಗರ ಸಜ್ಜಾಗಿದ್ದು, ಬೆಲೆ ಏರಿಕೆಯ ನಡುವೆಯೂ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಾಗಿದ್ದು, ಹೂವು, ಹಣ್ಣು, ಪೂಜಾ ಸಾಮಗ್ರಿ, ಬಟ್ಟೆ, ಬಳೆ ಸೇರಿದಂತೆ ವಿವಿಧ ವಸ್ತುಗಳ ಖರೀದಿ ಚುರುಕುಗೊಂಡಿತ್ತು.ನಗರದ ಅಂಬೇಡ್ಕರ್ ರಸ್ತೆ, ಎಂ.ಜಿ. ರಸ್ತೆ, ತೊಗರಿಹಂಕಲ್ ವೃತ್ತ, ಹನುಮಂತಪ್ಪ ವೃತ್ತ, ದೀಪಾ ನರ್ಸಿಂಗ್ ಹೋಂ ರಸ್ತೆ, ವಿಜಯಪುರ ಹಾಗೂ ಮಾರ್ಕೆಟ್ ರಸ್ತೆಗಳಲ್ಲಿ ಹಬ್ಬದ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದರು. ವಿವಿಧ ಬಡಾವಣೆಗಳು, ಕಚೇರಿಗಳು ಹಾಗೂ ಗ್ರಾಮಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದ್ದು, ಯುವಕರ ತಂಡಗಳು ಮುಂಗಡ ವಾಗಿ ಕಾಯ್ದಿರಿಸಿದ್ದ ಮೂರ್ತಿಗಳನ್ನು ವಾಹನಗಳಲ್ಲಿ ಕೊಂಡೊಯ್ದರು.ಪರಿಸರ ಸ್ನೇಹಿ ಮೂರ್ತಿಗಳಿಗೆ ಬೇಡಿಕೆ: ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆ, ವಿಜಯಪುರ, ಕುಂಬಾರ ಬೀದಿ ಹಾಗೂ ಕೋಟೆ ಪ್ರದೇಶಗಳಲ್ಲಿ ವಿವಿಧ ಗಾತ್ರದ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಜೇಡಿಮಣ್ಣು ಹಾಗೂ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಈ ಬಾರಿ ಹೆಚ್ಚಿನ ಬೇಡಿಕೆ ಕಂಡುಬಂದಿತು. ಪ್ರತಿಷ್ಠಾಪನಾ ಸ್ಥಳಗಳ ಅಲಂಕಾರಕ್ಕೆ ವಿದ್ಯುತ್ ದೀಪಗಳು, ಬಂಟಿಂಗ್ಸ್, ಅಲಂಕಾರಿಕ ವಸ್ತುಗಳು ಹಾಗೂ ಪೂಜಾ ಸಾಮಗ್ರಿಗಳ ಖರೀದಿಯೂ ಬಿರುಸಿನಿಂದ ನಡೆಯಿತು.ಬಳೆ, ಸೀರೆ ಖರೀದಿಗೆ ಮಹಿಳೆಯರ ಉತ್ಸಾಹ: ಗೌರಿ ಹಬ್ಬದ ಹಿನ್ನೆಲೆಯಲ್ಲಿ ಎಂ.ಜಿ. ರಸ್ತೆ, ವಿಜಯಪುರ ಹಾಗೂ ಕೆ.ಎಂ. ರಸ್ತೆಯ ಬಳೆ ಅಂಗಡಿಗಳಲ್ಲಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಬಣ್ಣಬಣ್ಣದ ಬಳೆಗಳ ಖರೀದಿಯಲ್ಲಿ ತೊಡಗಿದ್ದರು. ಸೀರೆ ಅಂಗಡಿಗಳು ಮತ್ತು ಬಟ್ಟೆ ಮಳಿಗೆಗಳಲ್ಲಿಯೂ ಜನ ಸಂದಣಿ ಹೆಚ್ಚಿತ್ತು. ಹಬ್ಬದ ಪ್ರಯುಕ್ತ ವಿವಿಧ ವ್ಯಾಪಾರ ಮಳಿಗೆಗಳು ವಿಶೇಷ ರಿಯಾಯಿತಿ ನೀಡಿದ್ದವು.ಗೌರಿ ಹಬ್ಬದಂದು ಹೆಣ್ಣುಮಕ್ಕಳಿಗೆ ಬಾಗಿನ ನೀಡುವ ಸಂಪ್ರದಾಯದ ಹಿನ್ನೆಲೆಯಲ್ಲಿ ಮಾರ್ಕೆಟ್ ರಸ್ತೆ ಬಿದಿರು ಬುಟ್ಟಿ ತಯಾರಕರ ಬಳಿ ಬಿದಿರಿನ ಮೊರ ಹಾಗೂ ಬುಟ್ಟಿಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಗ್ರಂಥಿಕೆ ಅಂಗಡಿಗಳಲ್ಲೂ ಬಾಗಿನಕ್ಕೆ ಅಗತ್ಯವಿರುವ ಪೂಜಾ ಸಾಮಗ್ರಿಗಳ ಮಾರಾಟ ಚುರುಕುಗೊಂಡಿತ್ತು.ಹೂವು, ಹಣ್ಣುಗಳ ದರ ಏರಿಕೆಹಬ್ಬದ ಹಿನ್ನೆಲೆಯಲ್ಲಿ ಹೂವು ಹಾಗೂ ಹಣ್ಣುಗಳ ದರ ಏರಿಕೆಯಾಗಿದ್ದರೂ ಖರೀದಿಗೆ ಯಾವುದೇ ಕೊರತೆಯಾಗಿರಲಿಲ್ಲ. ಮಾರುಕಟ್ಟೆಯಲ್ಲಿ ಮಲ್ಲಿಗೆ ಒಂದು ಮಾರಿಗೆ ₹120, ಸೇವಂತಿಗೆ ₹80 ಹಾಗೂ ಚೆಂಡು ಹೂವು ₹60ರಂತೆ ಮಾರಾಟ ವಾಯಿತು. ಗುಲಾಬಿ, ಬಾಳೆಗಿಡ, ಮಾವಿನ ತೋರಣ, ಕಬ್ಬು ಹಾಗೂ ಹೊಂಬಾಳೆಗೂ ಬೇಡಿಕೆ ಹೆಚ್ಚಾಗಿತ್ತು.ಹಣ್ಣುಗಳ ಪೈಕಿ ಸೇಬು ಕೆಜಿಗೆ ₹250, ದ್ರಾಕ್ಷಿ ₹140, ಬಾಳೆಹಣ್ಣು ₹120, ದಾಳಿಂಬೆ, ಕಿತ್ತಳೆ ಹಾಗೂ ಮೋಸಂಬಿ ತಲಾ ₹100 ಮತ್ತು ಕಲ್ಲಂಗಡಿ ₹50ರಂತೆ ಮಾರಾಟವಾಯಿತು.ಸಿಹಿ ಖಾದ್ಯಗಳ ತಯಾರಿಗೆ ಸಿದ್ಧತೆ:ಗೌರಿ-ಗಣೇಶ ಹಬ್ಬದಂದು ಸಿಹಿ ಖಾದ್ಯ ತಯಾರಿಸಿ ದೇವರಿಗೆ ಪ್ರಸಾದವಾಗಿ ಅರ್ಪಿಸುವ ಹಿನ್ನೆಲೆಯಲ್ಲಿ ಸಕ್ಕರೆ, ಬೆಲ್ಲ, ಮೈದಾ, ಬೆಣ್ಣೆ, ತುಪ್ಪ, ಕೋವಾ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯೂ ಹೆಚ್ಚಾಗಿದೆ.ನಗರದ ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆ, ಐ.ಜಿ. ರಸ್ತೆ ಹಾಗೂ ತೊಗರಿಹಂಕಲ್ ವೃತ್ತಗಳು ಬಣ್ಣಬಣ್ಣದ ವಿದ್ಯುತ್ ದೀಪಗಳು ಮತ್ತು ಬಂಟಿಂಗ್ಸ್‌ಗಳಿಂದ ಕಂಗೊಳಿಸುತ್ತಿದ್ದು, ಹಬ್ಬದ ವಾತಾವರಣ ಕಳೆಗಟ್ಟಿದೆ. ಬೆಲೆ ಏರಿಕೆ ಬಿಸಿಯ ನಡುವೆ ಯೂ ಜನರ ಉತ್ಸಾಹಕ್ಕೆ ಯಾವುದೇ ಕೊರತೆಯಾಗದೆ, ನಗರದಲ್ಲಿ ಗೌರಿ-ಗಣೇಶ ಹಬ್ಬದ ಸಿದ್ಧತೆಗಳು ಭರದಿಂದ ಸಾಗುತ್ತಿವೆ.