ಜೀವಿಗಳ ಸಮತೋಲನದ ಬದುಕಿಗೆ ಪರಿಸರ ಸಂರಕ್ಷಣೆ ಅನಿವಾರ್ಯ: ಗಂಗಾಧರಯ್ಯ

| Published : Jul 12 2024, 01:35 AM IST

ಜೀವಿಗಳ ಸಮತೋಲನದ ಬದುಕಿಗೆ ಪರಿಸರ ಸಂರಕ್ಷಣೆ ಅನಿವಾರ್ಯ: ಗಂಗಾಧರಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಭೂಮಿ ಸೌರಮಂಡಲದಲ್ಲಿನ ಅತ್ಯಂತ ವಿಶಿಷ್ಟ ಗ್ರಹ. ಸುಮಾರು 4600 ಮಿಲಿಯನ್ ವರ್ಷಗಳ ಹಿಂದೆ ಭೂಮಿ ಉದಯವಾದಾಗ ಈ ರೀತಿಯ ವಾತಾವರಣ ಇರಲಿಲ್ಲ. ಆ ನಂತರ ಭೂಮಿಯಲ್ಲಿ ಒಂದು ನಿರ್ದಿಷ್ಟ ಪ್ರಮಾಣದ ಶಾಖ, ಸಮತೋಲನದ ಗಾಳಿ, ನೀರು, ಬೆಳಕಿನ ಸೃಷ್ಟಿಯಾಗಿ ಜೀವಿಗಳ ಬದುಕಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪ್ರಕೃತಿ ಮತ್ತು ಜೀವಿಗಳ ಬದುಕು ಒಂದೇ ನಾಣ್ಯದ ಎರಡು ಮುಖಗಳು. ಜೀವಿಗಳ ಸಮತೋಲನದ ಬದುಕಿಗೆ ಪರಿಸರ ಸಂರಕ್ಷಣೆ ಅನಿವಾರ್ಯ ಎಂದು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಉಪನ್ಯಾಸಕ ಗಂಗಾಧರಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಆಯೋಜಿಸಿದ್ದ ವನಮಹೋತ್ಸವದಲ್ಲಿ ಮಾತನಾಡಿ, ಭೂಮಿ ಸೌರಮಂಡಲದಲ್ಲಿನ ಅತ್ಯಂತ ವಿಶಿಷ್ಟ ಗ್ರಹ. ಸುಮಾರು 4600 ಮಿಲಿಯನ್ ವರ್ಷಗಳ ಹಿಂದೆ ಭೂಮಿ ಉದಯವಾದಾಗ ಈ ರೀತಿಯ ವಾತಾವರಣ ಇರಲಿಲ್ಲ ಎಂದರು.

ಆನಂತರ ಭೂಮಿಯಲ್ಲಿ ಒಂದು ನಿರ್ದಿಷ್ಟ ಪ್ರಮಾಣದ ಶಾಖ, ಸಮತೋಲನದ ಗಾಳಿ, ನೀರು, ಬೆಳಕಿನ ಸೃಷ್ಟಿಯಾಗಿ ಜೀವಿಗಳ ಬದುಕಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಸೂರ್ಯನ ಕಡು ಶಾಖದ ರಕ್ಷಣೆಗೆ ಓಜೋನ್ ಪದರವಿದೆ. ಮನುಷ್ಯನ ನೆಮ್ಮದಿಯ ಬದುಕಿಗೆ ಪ್ರಕೃತಿ ಪೂರಕವಾದ ಎಲ್ಲವನ್ನೂ ಕೊಟ್ಟಿದೆ ಎಂದರು.

ಮನುಷ್ಯ ವಿವೇಚನೆಯಿದ್ದೂ ಅಥವಾ ಇಲ್ಲದೆಯೂ ಪರಿಸರ ಸಮತೋಲನವನ್ನು ದಿಕ್ಕು ತಪ್ಪಿಸಿ ಅದಕ್ಕಾಗಿ ಇಂದು ಪರಿತಪಿಸುತ್ತಿದ್ದಾನೆ. ಸ್ಥಳೀಯವಾಗಿದ್ದ ಪರಿಸರ ಸಮಸ್ಯೆ ಇಂದು ಜಾಗತಿಕ ಸಮಸ್ಯೆಯಾಗಿದೆ. ಇದಕ್ಕೆ ಮಾನವನ ನಡವಳಿಕೆಗಳೇ ಮುಖ್ಯ ಕಾರಣ ಎಂದರು.

ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಎಚ್.ಸುಬ್ಬಯ್ಯ ಮಾತನಾಡಿ, ಆಧುನಿಕ ತಂತ್ರಜ್ಞಾನ ಮತ್ತು ಕೈಗಾರಿಕೀರಣದ ಫಲವಾಗಿ ಇಂದು ನಮ್ಮ ಭೂಮಿ ಅಪಾಯಕ್ಕೆ ಸಿಲುಕಿದೆ. ಪರಿಸರ ಮಾಲಿನ್ಯದ ಅಪಾಯ ಅರಿತು ವಿಶ್ವದ 198 ದೇಶಗಳು ಇಂದು ವಿಶ್ವಸಂಸ್ಥೆ ಮಾರ್ಗದರ್ಶನದಲ್ಲಿ ಪರಿಸರ ಸಂರಕ್ಷಣೆ ಕಾರ್ಯಕ್ರಮ ಜಾರಿಗೊಳಿಸುತ್ತಿವೆ ಎಂದರು.

ನಮ್ಮ ಸುತ್ತಲ ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ನಾವು ಆರೋಗ್ಯವಂತರಾಗಿ ಬದುಕಲು ಸಾಧ್ಯ. ಆದ್ದರಿಂದ ಸುತ್ತಮುತ್ತಲು ಮರ ಗಿಡಗಳನ್ನು ಹಾಗೂ ಭೌಗೋಳಿಕ ಪರಿಸರವನ್ನು ಜನತೆ ಕಾಪಾಡಬೇಕು ಎಂದರು.

ಗಿಡಮರಗಳು ನಮ್ಮ ರಾಷ್ಟ್ರದ ಸಂಪತ್ತು, ಸ್ವಚ್ಛಂದವಾದ ಸಮೃದ್ಧ ಪರಿಸರದಿಂದ ಆರೋಗ್ಯವಂತ ಜೀವನ ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಯುವ ಜನರು ಪರಿಸರ ಪ್ರೇಮ ಬೆಳೆಸಿಕೊಂಡು ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕು ಎಂದರು.

ವನಮಹೋತ್ಸವದ ಅಂಗವಾಗಿ ಕಾಲೇಜು ಆವರಣದಲ್ಲಿ ಅತಿಥಿಗಳು ಮತ್ತು ವಿದ್ಯಾರ್ಥಿಗಳು ಒಗ್ಗೂಡಿ ತೆಂಗಿನ ಸಸಿಗಳು, ಮಾವು, ಹಲಸು, ದಾಳಿಂಬೆ, ಬಟರ್ ಫ್ರೂಟ್ ಮುಂತಾದ ಹಣ್ಣಿನ ಗಿಡಗಳನ್ನು ನೆಟ್ಟು ನೀರೆರೆದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಕೆ.ಮೋಹನ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಆರ್.ಬಿ.ಪದ್ಮನಾಭ, ಉಪನ್ಯಾಸಕರಾದ ವಿನೋದ್‌ಸಿಂಗ್, ಡಿ.ಆರ್.ರಮೇಶ್, ಉದಯ್, ಎನ್.ಡಿ.ಕುಮಾರ್, ರೇವಣ್ಣ, ಶ್ವೇತಾಚಲ, ಎಸ್.ಡಿ.ಹರೀಶ್, ಜಗದೀಶ್. ಪ್ರಕಾಶ್ ಚೌಗಲೆ ಸೇರಿದಂತೆ ಹಲವರು ಇದ್ದರು.