ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪೋಡಿಮುಕ್ತ ಗ್ರಾಮ, ಇ-ಸ್ವತ್ತು ಸೇರಿದಂತೆ ವಿವಿಧ ರೀತಿಯಲ್ಲಿ ಭೂ ಮಾಪನ ಇಲಾಖೆಯ ಕೆಲಸ ಮಾಡುತ್ತಿರುವ ನಮಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿ ತಾಲೂಕು ಪರವಾನಗಿ ಭೂ ಮಾಪಕರು, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಲಲುಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಹಳೇ ಬಸ್ ನಿಲ್ದಾಣ ಹಿಂಭಾಗ ಇರುವ ಮಿನಿ ವಿಧಾನಸೌಧದ ಎರಡನೇ ಮಹಡಿಯಲ್ಲಿ ಭೂ ದಾಖಲೆಗಳ ಕಚೇರಿಗೆ ನಿಯೋಗದ ಮೂಲಕ ಭೇಟಿ ನೀಡಿದ ಪರವಾನಗಿ ಭೂ ಮಾಪಕರು, ನಮ್ಮ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಘಟಕದ ಕರೆ ಮೇರೆಗೆ ಸಾಂಕೇತಿಕ ಪ್ರತಿಭಟನೆ ಆರಂಭಿಸುತ್ತಿದ್ದೇವೆ. ಲಾಗಿನ್ಗಳನ್ನು ನಿಷ್ಕ್ರಿಯಗೊಳಿಸಿ, ಕೆಲಸವನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಿದರು.ತಾಲೂಕಿನಲ್ಲಿ ಸುಮಾರು 60 ಪರವಾನಗಿ ಭೂಮಾಪಕರಿದ್ದೇವೆ. ಸುಮಾರು 20 ಸರ್ಕಾರಿ ಭೂ ಮಾಪಕರಿದ್ದು, ಅವರು ಮಾಡುವ ಎಲ್ಲ ಕೆಲಸಗಳನ್ನು ನಾವೂ ಮಾಡುತ್ತೇವೆ. ಸಮಾನ ಕೆಲಸಕ್ಕೆ ಕನಿಷ್ಠ 50 ಸಾವಿರದಿಂದ 60 ಸಾವಿರ ವೇತನ ನೀಡಬೇಕು ಎಂದು ಒತ್ತಾಯಿಸಿ ಪರವಾನಗಿ ಭೂ ಮಾಪಕರು ಚನ್ನರಾಯಪಟ್ಟಣದ ದಾಖಲೆಗಳ ಸಹಾಯಕ ನಿರ್ದೇಶಕ ಲಲುಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು ಆದರೆ, ವೇತನದಲ್ಲಿ ಸಾಕಷ್ಟು ತಾರತಮ್ಯವಿದೆ. ಹೀಗಾಗಿ, ಕೆಲಸಕ್ಕೆ ತಕ್ಕಂತೆ ವೇತನ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಆರಂಭಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.ಸರ್ಕಾರಿ ಹಾಗೂ ಖಾಸಗಿ ಜಾಗ-ಜಮೀನು ಅಳತೆಯನ್ನು ಪರವಾನಗಿ ಭೂಮಾಪಕರು ಮಾಡುತ್ತಿದ್ದಾರೆ. ಪ್ರತಿ ಕಡತಕ್ಕೆ 1200 ರು. ಮಾತ್ರ ನೀಡಲಾಗುತ್ತಿದೆ. ಕಡತ ತಯಾರಿಸಲು ತಗುಲುವ ವೆಚ್ಚವೂ ಹೆಚ್ಚಾಗಿದೆ. ಅಗತ್ಯವಸ್ತುಗಳ ಬೆಲೆ ಹೆಚ್ಚಳವಾಗಿರುವ ಇಂದಿನ ದುಬಾರಿ ಯುಗದಲ್ಲಿ ಸರ್ಕಾರ ನೀಡುವ ಹಣ ಯಾವುದಕ್ಕೂ ಸಾಲುತ್ತಿಲ್ಲ. ಸರ್ಕಾರಿ ಭೂಮಾಪಕರ ರೀತಿಯಲ್ಲಿಯೇ ನಮಗೆ ತಿಂಗಳಿಗೆ 50 ಸಾವಿರ 60 ಸಾವಿರ ಕನಿಷ್ಠ ವೇತನ ನೀಡಬೇಕು. ನಮ್ಮನ್ನೂ ಕಾಯಂ ನೇಮಕಾತಿ ಮಾಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಪರವಾನಗಿ ಭೂಮಾಪಕರಾದ ಟಿ. ಮಂಜುನಾಥ್, ಪ್ರಕಾಶ್, ಉಮೇಶ್ ಚಂದ್ರ, ದೇವರಾಜ್, ದಾನಪ್ಪನವರ್, ಆರ್. ನಾಗೇಶ್, ಎನ್. ವಿ. ಬಾಲಕೃಷ್ಣ, ಎಂ. ಕೆ. ಮಂಜುನಾಥ್, ಎಚ್. ಕೆ. ವಿನಯ್ ಕುಮಾರ್, ಕೆ. ಎಸ್. ಪುನೀತ್ ಮತ್ತಿತರಿದ್ದರು.