ಸಾರಾಂಶ
ತಾಲೂಕಿನ ವಿವಿಧೆಡೆ ಸಂವಿಧಾನ ಜಾಗೃತಿ ಜಾಥಾ
ಕನ್ನಡಪ್ರಭ ವಾರ್ತೆ, ಕೊಪ್ಪಡಾ.ಬಿ.ಆರ್. ಅಂಬೇಡ್ಕರ್ರವರ ಸಂವಿಧಾನದಿಂದ ದೇಶದೆಲ್ಲೆಡೆ ಎಲ್ಲರಿಗೂ ಸಮಾನ ಹಕ್ಕುಗಳಿದ್ದು, ಜನ ಸಾಮಾನ್ಯರಿಗೆ, ಜನಪ್ರತಿನಿಧಿಗಳನ್ನು ಚುನಾಯಿಸುವ ಮತದಾನದ ಹಕ್ಕು, ಸಾಮಾನ್ಯರೂ ಕೂಡ ಜನಪ್ರತಿನಿಧಿಗಳಾಗುವ ಅವಕಾಶ ಸಂವಿಧಾನ ಕಲ್ಪಿಸಿಕೊಟ್ಟಿದೆ ಎಂದು ಶಾಸಕ, ನವೀಕರಿಸಬಹುದಾದ ಇಂಧನ ಪ್ರಾಧಿಕಾರ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು. ಜಿಪಂ, ತಾಲೂಕು ಆಡಳಿತ, ತಾಪಂ ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಪಂಗಳಿಂದ ಅತ್ತಿಕೊಡಿಗೆ ಗ್ರಾಪಂ ವ್ಯಾಪ್ತಿಯ ಬಸ್ರಿಕಟ್ಟೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಸ್ವಾಗತಿಸಿ ಮಾತನಾಡಿ, ಸಂವಿಧಾನ ಬಂದು 75 ವರ್ಷದ ಸ್ಮರಣಾರ್ಥ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಜಾಥಾ ಏರ್ಪಡಿಸಲಾಗಿದೆ. ಶಾಲಾ ವಿದ್ಯಾರ್ಥಿಗಳು, ಸಾರ್ವ ಜನಿಕರಲ್ಲಿ, ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶ. ಇದರಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿ ಗೊಳಿಸಬೇಕು ಎಂದರು.
ಬಸ್ರಿಕಟ್ಟೆ ಸದ್ಗುರು ಪ್ರೌಢಶಾಲೆ ಶಿಕ್ಷಕ ಭರತೇಶ್ ಮಾತನಾಡಿ ಸಂವಿಧಾನವನ್ನು ಪ್ರತಿಯೊಬ್ಬ ನಾಗರಿಕನೂ ತಿಳಿಯಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮತ್ತು ಜಿಲ್ಲಾಡಳಿತ ಉತ್ತಮ ಕೆಲಸ ಮಾಡಿದೆ. ಎಲ್ಲರಿಗೂ ಸಮಬಾಳು, ಸಮಪಾಲು ಸಂವಿಧಾನಬದ್ಧ ಆಡಳಿತದ ಮೂಲಮಂತ್ರ ಎಂದರು.ಜಾಥಾದಲ್ಲಿ ಶಾಲಾ ವಿದ್ಯಾರ್ಥಿಗಳು ವಿವಿಧ ಐತಿಹಾಸಿಕ ಹೋರಾಟಗಾರರ, ಎಲ್ಲಾ ಧರ್ಮದವರ ವೇಷ ಧರಿಸಿ ಕಾಣಿಸಿ ಕೊಂಡರು. ಬಸ್ರಿಕಟ್ಟೆಯ ನಂತರ ಜಾಥಾ ಬಿಳಾಲುಕೊಪ್ಪ, ಗುಡ್ಡೆತೋಟ (ಶಾಂತಿಗ್ರಾಮ), ಅಗಳಗಂಡಿ ಗ್ರಾಪಂಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆಯಾ ಗ್ರಾಪಂಗಳ ಅಧ್ಯಕ್ಷರು ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಶಾಲಾ ವಿದ್ಯಾರ್ಥಿ ಗಳು ಜಾಥಾದಲ್ಲಿದ್ದರು.
ಅತ್ತಿಕೊಡಿಗೆ ಗ್ರಾಪಂ ಅಧ್ಯಕ್ಷ ಎನ್.ಟಿ. ಗೋಪಾಲಕೃಷ್ಣ, ತಹಸೀಲ್ದಾರ್ ಮಂಜುಳಾ ಬಿ. ಹೆಗಡಾಳ, ತಾಪಂ ಇಒ ನವೀನ್ ಕುಮಾರ್ ತಾಪಂ ಎನ್.ಆರ್.ಇ.ಜಿ ಚೇತನ್, ಆರ್.ಐ. ಸುಧೀರ್, ಸಮಾಜಕಲ್ಯಾಣ ಇಲಾಖಾಧಿಕಾರಿ ಕೆ.ಪಾಟೀಲ್, ಬಿ.ಪಿ. ಧರ್ಮೇಶ್, ಬಿಸಿಎಂ ಇಲಾಖೆ ಚಂದ್ರಶೇಖರ್, ಶಿಕ್ಷಣಾಧಿಕಾರಿ ಜ್ಯೋತಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಅಂಜನಪ್ಪ, ಸಿಡಿಪಿಒ ವೀಣಾ, ಟಿಎಂಒ ಮಹೇಂದ್ರ ಕಿರಿಟಿ, ಎಚ್.ಇ.ಒ. ಸುಧಾಕರ್, ಸ್ಥಳೀಯ ಮುಖಂಡ ಡಿ.ಎಸ್. ಸತೀಶ್, ಮೇರುತಿ ಆಟೋ ಚಾಲಕರ ಸಂಘದ ಅಧ್ಯಕ್ಷ ಸಂಜೀವ ನೇರಳಕಟ್ಟೆ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜೇಂದ್ರ ಇದ್ದರು.