ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಇಎಸ್ಐ ಆಸ್ಪತ್ರೆ ಮತ್ತು ಎರಡು ಕ್ರೀಡಾಂಗಣಗಳ ನಿರ್ಮಾಣದ ಮಹತ್ವದ ಯೋಜನೆಗಳ ಕನಸು ಶೀಘ್ರದಲ್ಲೇ ಸಾಕಾರಗೊಳ್ಳಲಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಇದಕ್ಕೆ ಸ್ಪಂದನೆ ದೊರೆಯುವ ಜೊತೆಗೆ ಅನುದಾನ ನಿಗದಿ ಮಾಡುವ ಬಗ್ಗೆಯೂ ಭರವಸೆ ಸಿಕ್ಕಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು. ನವ ದೆಹಲಿಯಲ್ಲಿ ಮಂಗಳವಾರ ಕೇಂದ್ರ ಕಾರ್ಮಿಕ ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯರನ್ನು ಭೇಟಿ ಮಾಡಿದ ಸಂಸದ ಡಾ.ಕೆ.ಸುಧಾಕರ್, ಈ ಯೋಜನೆಗಳ ಬಗ್ಗೆ ವಿವರವಾಗಿ ಚರ್ಚೆ ನಡೆಸಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ಇಎಸ್ಐ ಆಸ್ಪತ್ರೆ ಬಗ್ಗೆ ಡಾ.ಕೆ.ಸುಧಾಕರ್ ಜನರಿಗೆ ಭರವಸೆ ನೀಡಿದ್ದರು.ಕಾರ್ಮಿಕರ ಆರೋಗ್ಯ ರಕ್ಷಣೆಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕೈಗಾರಿಕಾ ಪ್ರದೇಶಗಳಿದ್ದು, ಹೆಚ್ಚು ಕಾರ್ಮಿಕರಿದ್ದಾರೆ. ಆದರೆ ಕಾರ್ಮಿಕರಿಗೆ ಸೂಕ್ತವಾದ ಆರೋಗ್ಯ ಸೌಲಭ್ಯ ದೊರೆಯುತ್ತಿಲ್ಲ. ಕ್ಷೇತ್ರದಲ್ಲೇ ಇಎಸ್ಐ ಆಸ್ಪತ್ರೆ ನಿರ್ಮಿಸುವುದರಿಂದ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಕಡಿಮೆ ದರದ ಹಾಗೂ ಉಚಿತ ಚಿಕಿತ್ಸೆ ಸಿಗಲಿದೆ. ಈ ಕುರಿತು ಶೀಘ್ರ ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದು,ಈ ಯೋಜನೆಗೆ ಕೇಂದ್ರ ಸಚಿವರು ಒಪ್ಪಿಗೆ ನೀಡಿದ್ದಾರೆ. ಒಳರೋಗಿಗಳ ಸಂಖ್ಯೆಯ ಆಧಾರದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಯಾವುದಾದರೂ ಒಂದು ತಾಲೂಕಿನಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು ಕ್ರೀಡಾಂಗಣಕ್ಕೆ ₹50 ಕೋಟಿಇದೇ ವೇಳೆ ಕ್ಷೇತ್ರಕ್ಕೆ ಕ್ರೀಡಾಂಗಣಗಳ ಅಗತ್ಯದ ಕುರಿತು ಡಾ.ಕೆ.ಸುಧಾಕರ್ ಪ್ರಸ್ತಾಪಿಸಿದರು. ಖೇಲೋ ಇಂಡಿಯಾ ಯೋಜನೆಯಡಿ, ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರದಲ್ಲಿ, ಒಟ್ಟು ಎರಡು ಕ್ರೀಡಾಂಗಣ ನಿರ್ಮಿಸಲು ಸಚಿವ ಮನ್ಸುಖ್ ಮಾಂಡವೀಯ ಒಪ್ಪಿಗೆ ನೀಡಿದರು. ಇದಕ್ಕಾಗಿ ವರ್ಷಕ್ಕೆ 10 ಕೋಟಿ ರೂ. ನಂತೆ, ಎರಡು ಕ್ರೀಡಾಂಗಣಗಳಿಗೆ ತಲಾ 50 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದರು ಎಂದು ತಿಳಿಸಿದರು.