ಸಾರಾಂಶ
ಸ್ವಸಹಾಯ ಗುಂಪುಗಳಿಂದ ಸಣ್ಣ ಸಣ್ಣ ಉದ್ಯಮಗಳನ್ನು ಮನೆಯಲ್ಲಿಯೇ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರಡಿಯಾ ಹೇಳಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಸ್ವಸಹಾಯ ಗುಂಪುಗಳಿಂದ ಸಣ್ಣ ಸಣ್ಣ ಉದ್ಯಮಗಳನ್ನು ಮನೆಯಲ್ಲಿಯೇ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರಡಿಯಾ ಹೇಳಿದರು.ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ಯಮಿಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯ ಜಿಲ್ಲಾ ಮಟ್ಟದ ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆತ್ಮನಿರ್ಭರ ಭಾರತ ಅಭಿಯಾನದಡಿ ಇರುವ ಈ ಯೋಜನೆಯ ಲಾಭ ಪಡೆಯಬೇಕು. ಇಲ್ಲಿ ವೈಯಕ್ತಿಕ ಉದ್ದಿಮೆಗಳು ಮತ್ತು ಗುಂಪುಗಳೊಂದಿಗೆ ಉದ್ಯೋಗ ಮಾಡಬಹುದು. 15 ಲಕ್ಷ ರು.ವರೆಗೆ ಸಹಾಯಧನ ಸಿಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರ 6 ಲಕ್ಷ ರು.ಗಳು ಮತ್ತು ರಾಜ್ಯ ಸರ್ಕಾರ 9 ಲಕ್ಷ ರು. ಸೇರಿರುತ್ತದೆ ಎಂದು ಅವರು ಈ ಯೋಜನೆಯ ಹಲವು ಆಯಾಮಗಳ ಬಗ್ಗೆ ವಿವರಿಸಿದರು.ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರು ಮಾತನಾಡಿ, ಇದೊಂದು ಬಹು ಉಪಯುಕ್ತ ಯೋಜನೆಯಾಗಿದ್ದು, ಇದರ ಲಾಭ ಯಾದಗಿರಿ ಜಿಲ್ಲೆಯ ಜನರು ಪಡೆಯಬೇಕೆಂದರು. ಚಂದ್ರಕುಮಾರ ಯೋಜನೆಗಳ ಕುರಿತ ಸಮಗ್ರ ಮಾಹಿತಿ ನೀಡಿದರು.
ಅಗ್ರ ಶ್ರೇಣಿ ಬ್ಯಾಂಕಿನ ವ್ಯವಸ್ಥಾಪಕ ಭೀಮರಾವ ಪಾಂಚಾಳ್, ಉಪ ಕೃಷಿ ನಿರ್ದೇಶಕರು, ಜಿಲ್ಲೆಯ ವಿವಿಧ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು, ನಬಾರ್ಡ್ ಬ್ಯಾಂಕ್ ವ್ಯವಸ್ಥಾಪಕರು, ತೋಟಗಾರಿಕೆ ಉಪ ನಿರ್ದೇಶಕರು, ಪಶುಸಂಗೋಪನೆ ಉಪ ನಿರ್ದೇಶಕರು, ನಗರ ಅಭಿವೃದ್ಧಿ ಕೋಶದ ಅಧಿಕಾರಿಗಳು, ಎನ್ ಆರ್ ಎಲ್ ಎಮ್ ಅಧಿಕಾರಿಗಳು, ಯೋಜನೆಯ ಫಲಾನುಭವಿಗಳು, ಆಸಕ್ತ ಯುವ ಯುವತಿಯರು, ಕೃಷಿ ಸಖಿಯರು, ಉದ್ಯಮಿಗಳು, ರೈತ ಉತ್ಪಾದಕ ಸಂಸ್ಥೆ ಪ್ರತಿನಿಧಿಗಳು ಭಾಗವಹಿಸಿದ್ದರು.ಸುಮಾರು 200ಕ್ಕೂ ಹೆಚ್ಚು ಫಲಾನುಭವಿಗಳು ಮತ್ತು ಆಸಕ್ತರು ಭಾಗವಹಿಸಿದ್ದರು. ತರಬೇತಿ ನಂತರ ಆಸಕ್ತ ಸುಮಾರು 30 ಯುವಕರು ಈ ಯೋಜನೆಯಡಿ ಉದ್ಯೋಗ ಕೈಗೊಳ್ಳಲು ತಮ್ಮ ಹೆಸರು ನೊಂದಾಯಿಸಿದರು. ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ ನಿರೂಪಿಸಿದರು. ಕೆಎಪಿಪಿಇಸಿ ಪ್ರಧಾನ ಕಚೇರಿಯ ಅಧಿಕಾರಿ ಸಿಬ್ಬಂದಿ ಇದ್ದರು.