ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯ ಹೆಬ್ಬೂರು ಹೋಬಳಿ ಬಿಕ್ಕೆಗುಡ್ಡ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕು ಹಾಗಲವಾಡಿ ಏತನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಗುರುವಾರ ರೈತ ಮುಖಂಡರು ಹಾಗೂ ಹೇಮಾವತಿ ನಾಲಾ ವಲಯದ ಅಧಿಕಾರಿಗಳ ಸಮಾಲೋಚನಾ ಸಭೆಯನ್ನು ಹೇಮಾವತಿ ನಾಲಾ ವಲಯ ಮುಖ್ಯ ಇಂಜಿನಿಯರ್ ಪಣಿರಾಜು ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.ಸಭೆಯಲ್ಲಿ ಬಿಕ್ಕೆಗುಡ್ಡ ಮತ್ತು ಹಾಗಲವಾಡಿ ಏತ ನೀರಾವರಿ ಯೋಜನೆಗಳ ಸಾಧಕ, ಭಾಧಕಗಳ ಕುರಿತು ಸುದೀರ್ಘ ಚರ್ಚೆ ನಡೆಸಿ, ಅಧಿಕಾರಿಗಳ ಮಾಹಿತಿ ಮತ್ತು ರೈತ ಮುಖಂಡರ ಒತ್ತಾಯಗಳನ್ನು ಆಲಿಸಿ ಮಾತನಾಡಿದ ಮುಖ್ಯ ಇಂಜಿನಿಯರ್ ಪಣಿರಾಜು, ಹೆಬ್ಬೂರು ಹೋಬಳಿ ಬಿಕ್ಕೆಗುಡ್ಡ ಏತ ನೀರಾವರಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ಸೆಪ್ಟಂಬರ್ ಅಂತ್ಯದೊಳಗೆ ಮುಗಿಸಿ, ಅಕ್ಟೋಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ, ನವೆಂಬರ್ 15ರಿಂದ ನೀರು ಹರಿಸುವ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದರು.ಚಿಕ್ಕನಾಯಕನಹಳ್ಳಿ ತಾಲೂಕು ಹಾಗಲವಾಡಿ ಏತನೀರಾವರಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಳಿಸಿ, ನವೆಂಬರ್ ಮತ್ತು ಡಿಸೆಂಬರ್ನಲ್ಲಿ ಕಾಮಗಾರಿ ನಡೆಸಿ, 2025ರ ಜನವರಿ 15 ರಂದು ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು.ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, 2015ರಲ್ಲಿ ರೈತ ಸಂಘ ಹಾಗೂ ರೈತರ ಹೋರಾಟದ ಫಲವಾಗಿ ಬಿಕ್ಕೆಗುಡ್ ಮತ್ತು ಹಾಗಲವಾಡಿ ಏತ ನೀರಾವರಿ ಯೋಜನೆಗಳು ಆರಂಭಗೊಂಡರೂ ಇದುವರೆಗೂ ಪೂರ್ಣಗೊಂಡಿಲ್ಲ. ಅಲ್ಲಲ್ಲಿ ಕೆಲಸಗಳಾಗಿವೆ. ಆದರೆ ಪೂರ್ಣ ಪ್ರಮಾಣದ ಕಾಮಗಾರಿ ಮುಗಿಯದೆ ನೀರು ಹರಿಸಲು ಸಾಧ್ಯವಾಗಿಲ್ಲ ಎಂದರು.ರೈತ ಮುಖಂಡರ ಮನವಿಗೆ ಉತ್ತರಿಸಿದ ಮುಖ್ಯ ಇಂಜಿನಿಯರ್ ಪಣಿರಾಜು, ಬಿಕ್ಕೆಗುಡ್ಡ ಏತನೀರಾವರಿಗೆ ಸಂಬಂಧಿಸಿಂತೆ 2024ರ ಸೆಪ್ಟಂಬರ್ 15ರೊಳಗೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಇದಕ್ಕಾಗಿ ಸೆಪ್ಟಂಬರ್ 4ರಂದು ಆ ಭಾಗದ ರೈತರೊಂದಿಗೆ ಅದಾಲತ್ ನಡೆಸಿ, ಭೂಸ್ವಾಧೀನ ಮತ್ತು ಪರಿಹಾರ ಪೂರ್ಣಗೊಳಿಸಿ, ತಕ್ಷಣವೇ ಕೆಲಸ ಆರಂಭಿಸಲಾಗುವುದು. ಆಕ್ಟೋಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ನವೆಂಬರ್ 15 ರಂದು ನೀರು ಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಬ್ಬೂರು, ಗೂಳೂರು ಏತನೀರಾವರಿ ಕುರಿತು ವಿಷಯವನ್ನು ತುಮಕೂರು ತಾಲೂಕು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚಿಕ್ಕಬೋರೇಗೌಡ ಪ್ರಸ್ತಾಪಿಸಿದರು. ಹೇಮಾವತಿ ನಾಲಾವಲಯದ ಅಧೀಕ್ಷಕ ಇಂಜಿನಿಯರ್, ವಿಶೇಷ ಭೂಸ್ವಾಧೀನಾಧಿಕಾರಿಗಳು, ಹಾಗಲವಾಡಿ ಮತ್ತು ಬಿಕ್ಕೆಗುಡ್ಡ ಯೋಜನೆಗಳ ಎಇಇಗಳು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಶ್,ಗುಬ್ಬಿ ತಾಲೂಕು ಅಧ್ಯಕ್ಷ ವೆಂಕಟೇಗೌಡ, ಪ್ರಧಾನ ಕಾರ್ಯದರ್ಶಿ, ಮುಖಂಡರಾದ ಮುನಿಯಪ್ಪ, ತಮ್ಮಯಣ್ಣ,ಸದಾಶಿವಪ್ಪ, ಕೃಷ್ಣಜೆಟ್ಟಿ ಹಾಗಲವಾಡಿ,ಗುಬ್ಬಿ ರವೀಶ್,ಯತೀಶ್, ಸುರೇಶ್, ಭದ್ರಯ್ಯ, ಜಗದೀಶ್ ಮತ್ತಿತರರು ಪಾಲ್ಗೊಂಡಿದ್ದರು.