ಏಳು ವರ್ಷವಾದರೂ ನಿರಾಶ್ರಿತರಿಗೆ ಸಿಗದ ನಿವೇಶನ

| Published : May 17 2024, 12:30 AM IST

ಏಳು ವರ್ಷವಾದರೂ ನಿರಾಶ್ರಿತರಿಗೆ ಸಿಗದ ನಿವೇಶನ
Share this Article
  • FB
  • TW
  • Linkdin
  • Email

ಸಾರಾಂಶ

2018ರ ವಿಧಾನಸಭೆ ಚುನಾವಣೆಯಲ್ಲಿ ಪುರಸಭೆ ವ್ಯಾಪ್ತಿಯ ಪ್ರಚಾರದಲ್ಲಿ ನಿವೇಶನ ಹಂಚಿಕೆಯ ವಿಚಾರವೇ ಪ್ರಮುಖವಾಗಿತ್ತು

ಶರಣು ಸೊಲಗಿ ಮುಂಡರಗಿ

ಮುಂಡರಗಿ ಪುರಸಭೆ ವ್ಯಾಪ್ತಿಯಲ್ಲಿರುವ ಸಾವಿರಾರು ನಿರಾಶ್ರಿತರಿಗೆ ಆಶ್ರಯ ಮನೆ ನಿರ್ಮಿಸುವ ಉದ್ದೇಶದಿಂದ 2017 ರಲ್ಲಿ ಶಿರೋಳ ಗ್ರಾಮದ ಹತ್ತಿರ 24 ಎಕರೆ ಜಮೀನು ಖರೀದಿಸಲಾಗಿತ್ತಾದರೂ, 7 ವರ್ಷ ಕಳೆದರೂ ಇನ್ನೂ ನಿವೇಶನ ಮಾತ್ರ ಅರ್ಹರಿಗೆ ಲಭಿಸಿಲ್ಲ.

ಪುರಸಭೆಯ 23 ವಾರ್ಡುಗಳ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ನಿರಾಶ್ರಿತರ ಅರ್ಜಿಗಳಿದ್ದು, ಅವರಿಗೆ ಆಶ್ರಯ ಯೋಜನೆಯಲ್ಲಿ ಮನೆ ನಿರ್ಮಿಸಿ ಕೊಡಬೇಕು ಎನ್ನುವ ಉದ್ದೇಶದಿಂದಲೇ ಅಂದಿನ ಶಾಸಕ ರಾಮಕೃಷ್ಣ ದೊಡ್ಡಮನಿಯವರು ಜಮೀನು ಖರೀದಿ ಮಾಡಿಸಿದ್ದರು. ಆದರೆ ನಿವೇಶನ ಹಂಚಬೇಕೆನ್ನುವಷ್ಟರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಳ್ಳುವುದರ ಜತೆಗೆ ಶಾಸಕ ರಾಮಕೃಷ್ಣ ದೊಡ್ಡಮನಿ ಸಹ ಪರಾಭವಗೊಂಡರು. ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು, ರಾಮಣ್ಣ ಲಮಾಣಿ ಶಾಸಕರಾದರು. ಅವರು ಪ್ರಾರಂಭದಿಂದ 2023ರ ವಿಧಾನಸಭೆ ಚುನಾವಣೆ ಘೋಷಣೆಯಾಗುವವರೆಗೂ ನಿವೇಶನಗಳ ಹಂಚಿಕೆಗೆ ಪ್ರಯತ್ನಿಸುತ್ತಾ ಬಂದರೂ ಸಹ ಒಂದಿಲ್ಲೊಂದು ಅಡೆತಡೆ, ತಕರಾರು ಅರ್ಜಿಗಳಿಂದ ನಿವೇಶನ ಆಗಲೇ ಇಲ್ಲ.

2018ರ ವಿಧಾನಸಭೆ ಚುನಾವಣೆಯಲ್ಲಿ ಪುರಸಭೆ ವ್ಯಾಪ್ತಿಯ ಪ್ರಚಾರದಲ್ಲಿ ನಿವೇಶನ ಹಂಚಿಕೆಯ ವಿಚಾರವೇ ಪ್ರಮುಖವಾಗಿತ್ತು. ಅಂದಿನ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ತಾವು ಅಧಿಕಾರಕ್ಕೆ ಬಂದ 1-2 ತಿಂಗಳಲ್ಲಿಯೇ ನಿವೇಶ ಹಂಚಿಕೆ ಮಾಡುವುದಾಗಿ ಘೋಷಿಸಿದ್ದರು. 2023ರ ಚುನಾವಣೆಯಲ್ಲಿ ಬಿಜೆಪಿಯ ಡಾ. ಚಂದ್ರು ಲಮಾಣಿ ಶಾಸಕರಾಗಿ ಆಯ್ಕೆಯಾದರು. ಅವರು ಶಾಸಕರಾದ ಪ್ರಾರಂಭದಲ್ಲಿ ತಮ್ಮ ಮೊದಲ ಆದ್ಯತೆ ಆಶ್ರಯ ನಿವೇಶನ ಹಂಚಿಕೆ ಎಂದಿದ್ದರು.

ಇದೀಗ ಆಯ್ಕೆಯಾಗಿ ವರ್ಷ ಆಗುತ್ತಾ ಬಂದರೂ ಆ ಕಾರ್ಯ ಇದುವರೆಗೂ ಆಗಿಲ್ಲ. ಶಾಸಕ ಡಾ. ಚಂದ್ರು ಲಮಾಣಿ ಈ ಕುರಿತು ಅನೇಕ ಬಾರಿ ಅಧಿಕಾರಿಗಳು, ಪುರಸಭೆ ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರ ಸಭೆ ನಡೆಸಿ ಪ್ರಯತ್ನಿಸುತ್ತಿದ್ದಾರಾದರೂ ಇದುವರೆಗೂ ನಿವೇಶನ ಹಂಚಿಕೆ ಮಾತ್ರ ಕಗ್ಗಂಟಾಗಿಯೇ ಉಳಿದಿದೆ. ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಅನೇಕ ವರ್ಷಗಳಿಂದ ನಿವೇಶನ ರಹಿತರಿಗೆ ನಿವೇಶನ ನೀಡಿಲ್ಲ. ಹೀಗಾಗಿ ಇಲ್ಲಿನ ತಾಲೂಕಾಭಿವೃದ್ಧಿ ಹೋರಾಟ ವೇದಿಕೆ, ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ, ಉತ್ತರ ಕರ್ನಾಟಕ ರೈತಸಂಘ, ವಿವಿಧ ಕನ್ನಡಪರ ಸಂಘಟನೆ ನಿವೇಶನ ರಹಿತರಿಗೆ ನಿವೇಶನ ಕೊಡುವಂತೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರು.

ಅದಕ್ಕಾಗಿಯೇ 24 ಎಕರೆ ಜಮೀನು ಖರೀದಿಸಲಾಗಿತ್ತು. ಆದರೆ ಇದುವರೆಗೂ ನಿವೇಶನ ಹಂಚದಿರುವುದು ಮಾತ್ರ ವಿಪರ್ಯಾಸದ ಸಂಗತಿಯಾಗಿದೆ. ನಿರಾಶ್ರಿತರು ಮಾತ್ರ ಜನಪ್ರತಿನಿಧಿಗಳಿಗೆ ನಿತ್ಯವೂ ಹಿಡಿಶಾಪ ಹಾಕುತ್ತಿದ್ದಾರೆ. ಈಗಲಾದರೂ ನಮ್ಮನ್ನಾಳುವ ಜನಪ್ರತಿನಿಧಿಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.

ಪಟ್ಟಣದ ನಿರಾಶ್ರಿತರಿಗೆ ನಿವೇಶನ ಒದಗಿಸುವ ಉದ್ದೇಶದಿಂದ ತಾವು ಶಾಸಕರಾಗಿದ್ದ ಸಂದರ್ಭದಲ್ಲಿ 24 ಎಕರೆ ಜಮೀನು ಖರೀದಿಸಲಾಗಿತ್ತು. ಖರೀದಿಸಿ ಏಳು ವರ್ಷ ಗತಿಸಿದರೂ ಇದುವರೆಗೂ ನಿರಾಶ್ರಿತರಿಗೆ ಹಂಚದಿರುವುದು ಜನಪ್ರತಿನಿಧಿಗಳ ಇಚ್ಛಾಶಕ್ಕಿಯ ಕೊರತೆ ಎತ್ತಿ ತೋರಿಸುತ್ತಿದೆ. ಜತೆಗೆ ಇವರಿಗೆ ಬಡವರು,ಅಭಿವೃದ್ದಿಯ ಬಗ್ಗೆ ಯಾವುದೇ ರೀತಿಯ ಚಿಂತನೆ ಇಲ್ಲದಿರುವ ಕುರಿತು ಇದಕ್ಕಿಂತ ದೊಡ್ಡ ನಿದರ್ಶನ ಬೇಕಿಲ್ಲ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.