ಸಾವಿರ ಹಸು ಕೊಡಿಸಿದರೂ ಕೆಚ್ಚಲು ಕೊಯ್ದ ನೋವು ಪರಿಹಾರವಾಗದು

| Published : Jan 14 2025, 01:01 AM IST

ಸಾವಿರ ಹಸು ಕೊಡಿಸಿದರೂ ಕೆಚ್ಚಲು ಕೊಯ್ದ ನೋವು ಪರಿಹಾರವಾಗದು
Share this Article
  • FB
  • TW
  • Linkdin
  • Email

ಸಾರಾಂಶ

ಹಸುಗಳ ಕೆಚ್ಚಲು ಕತ್ತರಿಸಿದ ಕ್ರೂರಕೃತ್ಯ ಘಟನೆ ನಡೆದ ಹಿನ್ನೆಲೆಯಲ್ಲಿ, ಮಾಲೀಕರಿಗೆ ಇನ್ನೊಂದು ಹಸು ಕೊಡಿಸುತ್ತೇನೆಂದು ಸಚಿವ ಜಮೀರ್ ಅಹಮ್ಮದ್ ಹೇಳಿದ್ದಾರೆ. ಕೆಚ್ಚಲು ಕೊಯ್ಯಲ್ಪಟ್ಟ ಹಸುಗಳ ನೋವನ್ನು ಇಂತಹವರ ಹಣದಿಂದ ಶಮನ ಮಾಡಲು ಸಾಧ್ಯವಿಲ್ಲ. ಮೊದಲು ಈ ರೀತಿಯ ಮಾನಸಿಕತೆಯನ್ನು ಪ್ರತಿಯೊಬ್ಬರೂ ಖಂಡಿಸಬೇಕು ಎಂದು ಮಾಜಿ ಗೃಹ ಸಚಿವ, ಹಾಲಿ ತೀರ್ಥಹಳ್ಳಿ ಕ್ಷೇತ್ರ ಶಾಸಕ ಆರಗ ಜ್ಞಾನೇಂದ್ರ ದಾವಣಗೆರೆಯಲ್ಲಿ ಕಿಡಿಕಾರಿದ್ದಾರೆ.

- ಗೋವುಗಳ ನೋವನ್ನು ನಿಮ್ಮ ಹಣದಿಂದ ಕೊಡಿಸಲು ಸಾಧ್ಯವಿಲ್ಲ: ಆರಗ ಜ್ಞಾನೇಂದ್ರ ಕಿಡಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಹಸುಗಳ ಕೆಚ್ಚಲು ಕತ್ತರಿಸಿದ ಕ್ರೂರಕೃತ್ಯ ಘಟನೆ ನಡೆದ ಹಿನ್ನೆಲೆಯಲ್ಲಿ, ಮಾಲೀಕರಿಗೆ ಇನ್ನೊಂದು ಹಸು ಕೊಡಿಸುತ್ತೇನೆಂದು ಸಚಿವ ಜಮೀರ್ ಅಹಮ್ಮದ್ ಹೇಳಿದ್ದಾರೆ. ಕೆಚ್ಚಲು ಕೊಯ್ಯಲ್ಪಟ್ಟ ಹಸುಗಳ ನೋವನ್ನು ಇಂತಹವರ ಹಣದಿಂದ ಶಮನ ಮಾಡಲು ಸಾಧ್ಯವಿಲ್ಲ. ಮೊದಲು ಈ ರೀತಿಯ ಮಾನಸಿಕತೆಯನ್ನು ಪ್ರತಿಯೊಬ್ಬರೂ ಖಂಡಿಸಬೇಕು ಎಂದು ಮಾಜಿ ಗೃಹ ಸಚಿವ, ಹಾಲಿ ತೀರ್ಥಹಳ್ಳಿ ಕ್ಷೇತ್ರ ಶಾಸಕ ಆರಗ ಜ್ಞಾನೇಂದ್ರ ಕಿಡಿಕಾರಿದರು.

ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮೊನ್ನೆ ರಾತ್ರಿ ದುರುಳರು ಅಮಾನುಷವಾಗಿ 3 ಹಸುಗಳ ಕೆಚ್ಚಲು ಕೊಯ್ದಿದ್ದಾರೆ. ಇದು ಯಾರೂ ಒಪ್ಪುವಂತಹದ್ದಲ್ಲ. ಸಚಿವ ಜಮೀರ್ ಅಹಮ್ಮದ್ ಇನ್ನೊಂದು ಹಸು ಕೊಡಿಸುತ್ತೇನೆ ಎಂದಿದ್ದಾರೆ. ಸಾವಿರ ಹಸುಗಳ ಕೊಡಿಸಿದರೂ ಕೆಚ್ಚಲು ಕೊಯ್ಯಲ್ಪಟ್ಟ ಹಸುವಿನ ನೋವನ್ನು ವಾಪಸ್‌ ಪಡೆಯಲು ಇಂತಹವರ ದುಡ್ಡಿನಿಂದ ಆಗುವುದೇ ಎಂದರು.

ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ಪ್ರತಿ ಜಿಲ್ಲೆಗೆ 1ರಂತೆ ಗೋ ಶಾಲೆ ಆರಂಭಿಸಿದ್ದರು. ಹಸುಗಳನ್ನು, ಬಿಡಾಡಿ ಹಸುಗಳನ್ನು ಗೋ ಶಾಲೆಯಲ್ಲಿ ಸಾಕುವುದು ಅದರ ಉದ್ದೇಶವಾಗಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಒಂದೇ ಒಂದು ಗೋಶಾಲೆಯನ್ನೂ ಆರಂಭಿಸಿಲ್ಲ. ಬದಲಾಗಿ ನಮ್ಮ ಸರ್ಕಾರ ಆರಂಭಿಸಿದ್ದ ಗೋ ಶಾಲೆಗಳನ್ನೇ ಬಂದ್ ಮಾಡಲು ಮುಂದಾಗಿದೆ ಎಂದು ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಗೋವುಗಳ ಕೆಚ್ಚಲು ಕತ್ತರಿಸಿದ ದುಷ್ಕರ್ಮಿಗಳನ್ನು ಪತ್ತೆ ಮಾಡಿ, ಕಠಿಣ ಕಾನೂನು ಕ್ರಮ ಜರುಗಿಸಲಿ ಎಂದು ತಾಕೀತು ಮಾಡಿದರು.

ಈ ಸಂದರ್ಭ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ ಗೌಡ, ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಯಶವಂತ ರಾವ್ ಜಾಧವ್‌, ಎಸ್.ಎಂ.ವೀರೇಶ ಹನಗವಾಡಿ, ಚನ್ನಗಿರಿ ತುಮ್ಕೋಸ್ ಶಿವಕುಮಾರ ಇತರರು ಇದ್ದರು.

- - -

ಟಾಪ್‌ ಕೋಟ್‌ ಗೋವುಗಳನ್ನು ಕಡಿದು ತಿನ್ನುವವರಿಗೆ ಸಹಾಯ ಮಾಡಲೆಂದೇ ಗೋ ಶಾಲೆಗಳನ್ನು ಮುಚ್ಚಿಸಲು ಕಾಂಗ್ರೆಸ್ ಸರ್ಕಾರದವರು ಹೊರಟಿದೆ. ವ್ಯವಸ್ಥಿತವಾಗಿ ಇದಕ್ಕಾಗಿ ಕಾಂಗ್ರೆಸ್ ಸರ್ಕಾರ ಪ್ರಯತ್ನ ನಡೆಸಿದೆ. ಗೋವಧೆ ನಿಷೇಧ ಕಾಯ್ದೆ ನಾವು ಜಾರಿಗೊಳಿಸಿದ್ದೆವು. ಗೋವುಗಳ ಸಂರಕ್ಷಣೆ ಮಾಡುವ ಅಧಿಕಾರ ಪೊಲೀಸ್ ಇಲಾಖೆಯವರ ಕೈಯಲ್ಲೇ ಇದೆ. ಆದರೆ, ಯಾವುದೇ ಪೊಲೀಸರೂ ಕ್ರಮ ಕೈಗೊಳ್ಳುತ್ತಿಲ್ಲ. ಯಾಕೆಂದರೆ, ಗೋವುಗಳನ್ನು ಕಡಿದು ತಿನ್ನುವವರ ಪರವಾಗಿ ಸರ್ಕಾರವೇ ಇದೆ

- ಆರಗ ಜ್ಞಾನೇಂದ್ರ, ಮಾಜಿ ಗೃಹ ಸಚಿವ

- - -

-13ಕೆಡಿವಿಜಿ8.ಜೆಪಿಜಿ: ದಾವಣಗೆರೆ ಜಿಎಂಐಟಿ ಅತಿಥಿ ಗೃಹದಲ್ಲಿ ಸೋಮವಾರ ಮಾಜಿ ಸಚಿವ ಆರಗ ಜ್ಞಾನೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.