ಪ್ರಾಣ ಹೋದರೂ ಕೆರೆಯ ನೀರು ಬಿಡುವುದಿಲ್ಲ

| Published : Apr 16 2025, 12:35 AM IST

ಸಾರಾಂಶ

ಅಮಾನಿ ಭೈರಸಾಗರ ರೈತರಿಗೆ ಜೀವನಾಡಿಯಾಗಿದೆ. ನಗರಗೆರೆ ಹೋಬಳಿಯ ಬಹುತೇಕ ರೈತರು ಈ ನೀರನ್ನೇ ನಂಬಿ ವ್ಯವಸಾಯ ಮಾಡುತ್ತಿದ್ದಾರೆ. ಗೌರಿಬಿದನೂರು ನಗರಕ್ಕೆ ಿಲ್ಲಿದಂ ನೀರು ಹರಿಸಲು ಬಿಡುವುದಿಲ್ಲ. ಆ ಭಾಗದಲ್ಲೇ ಹಲವು ಕೆರೆಗಳಿವೆ ಅವುಗಳನ್ನೇ ಅಭಿವೃದ್ಧಿ ಮಾಡಿ, ಅಲ್ಲಿಂದಲೇ ನೀರನ್ನು ನಗರಕ್ಕೆ ಸರಬರಾಜು ಮಾಡಬಹುದು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ತಾಲೂಕಿನ ವಾಟದಹೊಸಹಳ್ಳಿ ಅಮಾನಿ ಭೈರಸಾಗರ ಕೆರೆ ನೀರನ್ನು ನಗರಕ್ಕೆ ಹರಿಸುವುದನ್ನು ವಿರೋಧಿಸಿ ವಾಟದಹೊಸಹಳ್ಳಿ ಕೆರೆ ಅಚ್ಚುಕಟ್ಟುದಾರರ ಸಂಘದ ವತಿಯಿಂದ ವಾಟದಹೊಸಹಳ್ಳಿಯಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು ಕೆರೆ ಭಾಗದಿಂದ ವಾಟದಹೊಸಹಳ್ಳಿ ವೃತ್ತದವರೆಗೆ ಕಾಲ್ನಡಿಗೆ ಜಾಥಾ ಮುಖಾಂತರ ತೆರಳಿ ವಾಟದಹೊಸಹಳ್ಳಿ ಗುಡಿಬಂಡೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಮ್ಮ ನೀರು ನಮ್ಮ ಹಕ್ಕು ಎಂದು ಘೋಷಣೆಗಳನ್ನು ಕೂಗಿದರು.ರೈತರನ್ನು ಒಕ್ಕಲೆಬ್ಬಿಸಬೇಡಿ

ಈ ವೇಳೆ ಅಚ್ಚುಕಟ್ಟುದಾರರ ಸಂಘದ ಪದಾಧಿಕಾರಿ ಮಾಳಪ್ಪ ಮಾತನಾಡಿ, ಈ ಭಾಗದ ರೈತರು ಹಲವು ವರ್ಷಗಳಿಂದ ಈ ಕೆರೆಯನ್ನೇ ನಂಬಿಕೊಂಡು ವ್ಯವಸಾಯ ಮತ್ತು ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ, ಇಲ್ಲಿಯ ರೈತರನ್ನು ಒಕ್ಕಲು ಎಬ್ಬಿಸುವ ಕೆಲಸ ಮಾಡಬಾರದು ಎಂದರು.

ಕೆಂಪರಂಗಪ್ಪ ಮಾತನಾಡಿ, ಈ ಕೆರೆಯು ನಮ್ಮ ರೈತರಿಗೆ ಜೀವನಾಡಿಯಾಗಿದೆ. ನಗರಗೆರೆ ಹೋಬಳಿಯ ಬಹುತೇಕ ರೈತರು ಈ ನೀರನ್ನೇ ನಂಬಿ ವ್ಯವಸಾಯ ಮಾಡುತ್ತಿದ್ದಾರೆ. ನಗರ ಭಾಗದ ಪಕ್ಕದಲ್ಲೇ ಹಲವು ಕೆರೆಗಳಿವೆ ಅವುಗಳನ್ನೇ ಅಭಿವೃದ್ಧಿ ಮಾಡಿ, ಅಲ್ಲಿಂದಲೇ ನೀರನ್ನು ನಗರಕ್ಕೆ ಸರಬರಾಜು ಮಾಡಬಹುದು, ಪ್ರಾಣ ಹೋದರು ಸಹ ನಮ್ಮ ಕೆರೆಯ ನೀರನ್ನು ನಗರಕ್ಕೆ ಹರಿಯಲು ಬಿಡುವುದಿಲ್ಲ ಎಂದು ತಿಳಿಸಿದರು.

ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಮರ ನಾರಾಯಣ ರೆಡ್ಡಿ, ಹರ್ಷವರ್ಧನ್ ರೆಡ್ಡಿ, ನವೀನ್ ರೆಡ್ಡಿ, ಬಂಡ ಪಲ್ಲಿ ಮೂರ್ತಿ, ಮಧುಸೂದನ್ ರೆಡ್ಡಿ, ಶಂಕರ್ ರೆಡ್ಡಿ, ಗೌರಮ್ಮ, ನಾರಾಯಣಪ್ಪ, ಮಾಧವ ರೆಡ್ಡಿ, ಕೆಂಪಮ್ಮ, ರತ್ನಮ್ಮ,ಸೇರಿದಂತೆ ರೈತರು ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.