ವಾರ್ಷಿಕ ಉರುಸ್ ಕಾರ್ಯಕ್ರಮದಲ್ಲಿ ಧಾರ್ಮಿಕ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಧರ್ಮಗಳು ಬೇರೆಯಾದರು ಎಲ್ಲರ ಹೃದಯ ಒಂದಾಗಬೇಕು. ಮಾರ್ಗ ಬೇರೆಯಾದರೂ ಗುರಿ ಒಂದೇ. ಆತ್ಮ ಪರಮಾತ್ಮನಲ್ಲಿ ಸೇರುವುದಾಗಿದೆ ಎಂದು ಅಮ್ಮಫೌಂಡೇಷನ್ ನ ಸಂಸ್ಥಾಪಕ ಸುಧಾಕರ್ ಎಸ್.ಶೆಟ್ಟಿ ಅಭಿಪ್ರಾಯಪಟ್ಟರು.ಸೋಮವಾರ ರಾತ್ರಿ ಪಟ್ಟಣದ ಪ್ರವಾಸಿ ಮಂದಿರದ ಸಮೀಪದ ದರ್ಗಾಯೇ ಹಝ್ರತ್ ಹಯಾತ್ ಷಾ ವಲಿರ ಅಲೈರವರ 137ನೇ ವಾರ್ಷಿಕ ಉರುಸ್ ಸಮಾರಂಭದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿ ಯಾವುದೇ ಧರ್ಮದ ಕಾರ್ಯಕ್ರಮಗಳಲ್ಲಿ ಆಯಾ ಧರ್ಮಕ್ಕೆ ಸರಿಯಾಗಿ ಹೊಂದಿಕೊಂಡು ಹೋಗುವುದೇ ಧಾರ್ಮಿಕತೆ. ಮುಸ್ಲಿಂ ಧರ್ಮದ ಸಂಸ್ಕೃತಿ, ಸಂಸ್ಕಾರ ಉತ್ತಮವಾಗಿದೆ. 5 ಹೊತ್ತು ನಮಾಜ್ ಮಾಡುವ ಪದ್ಧತಿ ಇಂದಿಗೂ ಉಳಿಸಿಕೊಂಡು ಬಂದಿರುವುದು ಅನುಕರಣೀಯ. ಯಾರಿಗೂ ಮೋಸ ಮಾಡಬಾರದು, ಪ್ರೀತಿ ಕೊಡಬೇಕು. ನೋವಾಗದಂತೆ ನಡೆದುಕೊಳ್ಳಬೇಕೆಂದು ಇಸ್ಲಾಂ ಹೇಳುತ್ತದೆ. ಎಲ್ಲಾ ಧರ್ಮಗ್ರಂಥಗಳ ಸಾರ ಒಂದೇ. ನಾವೆಲ್ಲರೂ ಭಾರತೀಯರು ಎಂಬ ಮನೋಭಾವನೆ ಬೆಳೆಸಿ ಕೊಂಡು ಬಾಳಬೇಕು. ಉರುಸ್ ಎಲ್ಲಾ ಧರ್ಮಿಯರನ್ನು ಒಂದು ಗೂಡಿಸುತ್ತದೆ ಎಂದರು.
ಜಿಪಂತಿ ಮಾಜಿ ಸದಸ್ಯ ಪಿ.ಜೆ.ಆ್ಯಂಟನಿ ಮಾತನಾಡಿ,ಯಾವುದೇ ಧರ್ಮದ ಆಚಾರ, ವಿಚಾರ ರೂಢಿ, ಸಂಪ್ರದಾಯ ಬೇರೆ, ಬೇರೆಯಾಗಿದ್ದರೂ ಧಾರ್ಮಿಕತೆ ಒಂದೇ ಆಗಿತ್ತದೆ. ಎಲ್ಲರನ್ನೂ ಸಮಾನವಾಗಿ ನೋಡಬೇಕೆಂಬುದು ಧರ್ಮದ ಸಾರ. ಹಿಂದೂ–ಮುಸ್ಲಿಂ ಸಂಸ್ಕೃತಿ ಸಮ್ಮಿಶ್ರವಾಗಿರುವ ಸೂಫಿ ಸಂತತಿ ಸಹಬಾಳ್ವೆ ಸಂಕೇತ ಎಂದರು.ಜಿಪಂ ಮಾಜಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ನಾವೆಲ್ಲಾ ಭಾರತೀಯರು ಒಂದೇ ಎಂಬ ಮನೋ ಭಾವನೆ ಬೆಳೆಸಿಕೊಂಡು ಬಾಳ ಬೇಕು ಎಂದರು. ಪಪಂ ಮಾಜಿ ಅಧ್ಯಕ್ಷ ಬಿ.ಎಸ್.ಆಶೀಶ್ ಕುಮಾರ್ ಮಾತನಾಡಿ, ಉರುಸ್ ಆಚರಣೆಯಲ್ಲಿ ದರ್ಗಾಕ್ಕೆ ಹಿಂದೂಗಳು ಸಹ ಹರಕೆ ಹೊರುವುದು ವಿಶೇಷವಾಗಿದೆ ಎಂದರು.
ಎಲ್ಲಾ ಅತಿಥಿಗಳನ್ನು ಗೌರವಿಸಲಾಯಿತು. ಜಾಮೀಯ ಮಸೀದಿ ಮೌಲಾನ ಅಮ್ಜದ್ ಖಾನ್ , ಅಲ್ ನೂರ್ ಮಸೀದಿಯ ಅಬ್ಧುಲ್ಲಾ ಮಿಫ್ತಾಹಿ ಅವರಿಂದ ಧಾರ್ಮಿಕ ಪ್ರವಚನ ನಡೆಯಿತು. ರಾತ್ರಿ ಕವಾಲಿ ಆಯೋಜಿಸಲಾಗಿತ್ತು. ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.ಪಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ , ಅಧ್ಯಕ್ಷತೆ ವಹಿಸಿದ್ದ ಉರುಸ್ ಆಚರಣಾ ಸಮಿತಿ ಅಧ್ಯಕ್ಷ ಖಾಸಿಂಖಾನ್ , ಜಾಮೀಯಾ ಮಸೀದಿ ಅಧ್ಯಕ್ಷ ನಜೀರ್ ಅಹಮ್ಮದ್ ( ಅಂಜುಮ್ ) ಪಟ್ಟಣ ಪಂಚಾಯಿಯಿ ಮಾಜಿ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಎನ್.ಶಿವದಾಸ್, ಅಲ್ ನೂರ್ ಮಸೀದಿ ಅಧ್ಯಕ್ಷ ಸೈಯದ್ ಜಲಾಲ್, ಪಟ್ಟಣ ಪಂಚಾಯಿತಿ ಸದಸ್ಯ ಸುಕುಮಾರ್ ,ಜಾಮೀಯ ಮಸೀದಿ ಕಾರ್ಯದರ್ಶಿ ಆಬಿದ್ ಸಾಬ್, ಸಾದಿಕ್ ಬಾಷ ಇದ್ದರು. ಅಭಿನವ ಗಿರಿರಾಜ್ ಕಾರ್ಯಕ್ರಮ ನಿರೂಪಿಸಿದರು.