ಕಟ್ಟಡ ನಿರ್ಮಿಸುವ ಕಾರ್ಮಿಕರಿಗೇ ಇಲ್ಲ ಸೂರು

| Published : Jun 13 2025, 02:32 AM IST

ಸಾರಾಂಶ

ಭವ್ಯ ಬಂಗಲೆ, ಅರಮನೆಗಳನ್ನು ನಿರ್ಮಿಸುವ ಕಟ್ಟಡ ಕಾರ್ಮಿಕರಿಗೆ ಇಂದು ಸೂರು ಇಲ್ಲದಂತಹ ಪರಿಸ್ಥಿತಿ ಬಂದಿದೆ

ಕನ್ನಡಪ್ರಭ ವಾರ್ತೆ ರಾಮದುರ್ಗ

ಭಾರತದಲ್ಲಿ ಕೃಷಿ ಉದ್ಯಮ ಬಿಟ್ಟರೆ ಎರಡನೇ ಸ್ಥಾನದಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರವಿದೆ. ಆದರೆ ಭವ್ಯ ಬಂಗಲೆ, ಅರಮನೆಗಳನ್ನು ನಿರ್ಮಿಸುವ ಕಟ್ಟಡ ಕಾರ್ಮಿಕರಿಗೆ ಇಂದು ಸೂರು ಇಲ್ಲದಂತಹ ಪರಿಸ್ಥಿತಿ ಬಂದಿದೆ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ ರಾಜ್ಯಾಧ್ಯಕ್ಷ ಬಾಳಕೃಷ್ಣ ಶೆಟ್ಟಿ ವಿಷಾದ ವ್ಯಕ್ತಪಡಿಸಿದರು.

ರಾಮದುರ್ಗದಲ್ಲಿ ನಡೆದ ಸಿಡಬ್ಲೂಎಫ್‌ಐ ಸಂಯೋಜಿತ ಕಟ್ಟಡ ಕಾರ್ಮಿಕರ ಸಂಘಟನೆಯ ತೃತೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಬರುತ್ತಿರುವ ಸೆಸ್‌ನಿಂದ ರಾಜ್ಯದ ಕಟ್ಟಡ ಕಾರ್ಮಿಕರಿಗೆ ಹಲವು ಸೌಲಭ್ಯ ದೊರಕುತ್ತಿವೆ. ಆದರೆ ಇತ್ತೀಚಿಗೆ ಕಲ್ಯಾಣ ಮಂಡಳಿಯಲ್ಲಿ ಜಮಾ ಆಗುತ್ತಿರುವ ಸೆಸ್ ಹಣವು ಬೇರೆ ಬೇರೆ ಯೋಜನೆಗಳಿಗೆ ಸರ್ಕಾರ ಉಪಯೋಗಿಸುತ್ತಿದೆ ಹಾಗೂ ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.ಕಾರ್ಮಿಕ ಮುಖಂಡ ಗೈಬು ಜೈನೆಖಾನ್‌ ಮಾತನಾಡಿ, ಕಾರ್ಮಿಕ ಮಂಡಳಿಯಲ್ಲಿ ಬೋಗಸ್ ಕಾರ್ಡ್‌ ಹೊಂದಿರುವುದರಿಂದ ದಿನದ 12 ಗಂಟೆಗಳಿಗಿಂತ ಹೆಚ್ಚು ಕಾಲ ದುಡಿಯುವ ಲಕ್ಷಾಂತರ ಕಾರ್ಮಿಕರಿಗೆ ಮಂಡಳಿ ಸೌಲಭ್ಯ ದೊರೆಯುತ್ತಿಲ್ಲ. ಬೋಗಸ್ ಕಾರ್ಡ್‌ಗಳ ಸಂಖ್ಯೆ ಏರುತ್ತಿದ್ದರು ಸರ್ಕಾರ ಈ ಕಡೆ ಗಮನಹರಿಸದೆ ಇರುವುದರಿಂದ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದ್ದು, ಇದಕ್ಕೆಲ್ಲ ಕಾರ್ಮಿಕ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ನಾಗಪ್ಪ ಸಂಗೊಳ್ಳಿ ಮಾತನಾಡಿ, ಕಾರ್ಮಿಕ ಇಲಾಖೆಗೆ ಕೊಟ್ಟಿರುವ ಅರ್ಜಿಗಳು ಇತ್ಯರ್ಥವಾಗದೇ ಇಲಾಖೆಯಲ್ಲಿ ಕೊಳೆಯುತ್ತಿವೆ. ಇದರಿಂದ ಕಟ್ಟಡ ಕಾರ್ಮಿಕರು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಕಾರ್ಮಿಕ ಇಲಾಖೆ ಈ ವಿಳಂಬ ನೀತಿ ವಿರೋಧಿಸಿ ಹೋರಾಟ ಮಾಡುವುದು ಅನಿವಾರ್ಯ ಎಂದರು. ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಸರಸ್ವತಿ ಮಾಳಶೆಟ್ಟಿ, ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಅಧ್ಯಕ್ಷೆ ತುಳಸಮ್ಮ ಮಾಳದಕರ ಮಾತನಾಡಿದರು.

ತಾಲೂಕು ಸಮಿತಿ ಅಸ್ತಿತ್ವಕ್ಕೆ:

ರಾಮದುರ್ಗ ತಾಲೂಕು ಅಧ್ಯಕ್ಷರಾಗಿ ನಾಗಪ್ಪ ಸಂಗೊಳ್ಳಿ, ತಾಲೂಕು ಕಾರ್ಯದರ್ಶಿಯಾಗಿ ಮಾರುತಿ ಮುದಗುರಿ, ಖಜಾಂಚಿಯಾಗಿ ಮಹಾದೇವ ಕೊಪ್ಪದ, ಉಪಾಧ್ಯಕ್ಷರಾಗಿ ಸಿದ್ದಲಿಂಗಪ್ಪ ಶಿಂಗಾರಗೊಪ್ಪ ಮತ್ತು ಸಹಕಾರ್ಯದರ್ಶಿಯಾಗಿ ಮಾಬುಸಾಬ ಬಡೇಖಾನ್ ಹಾಗೂ 8 ಜನರ ಇರುವ ಕಾರ್ಯಕಾರಿ ಸಮಿತಿ ರಚಿಸಲಾಯಿತು.