ಕೊಪ್ಪಳ ಜಿಲ್ಲಾಧಿಕಾರಿಗಳು ಬಲ್ಡೋಟ ಕಂಪನಿ ಮೇಲೆ ತಕ್ಷಣ ಕ್ರಮ ಜರುಗಿಸಿ, ಅಡ್ಡಗಟ್ಟಿದ ಸಂಪರ್ಕ ರಸ್ತೆಯನ್ನು ಜನ, ಜಾನುವಾರು ನೀರು ಕುಡಿಯಲು ಮುಕ್ತಗೊಳಿಸಬೇಕು ಎಂದು ಬಳ್ಳಾರಿ ಜಿಲ್ಲಾ ರಾಜ್ಯ ರೈತ ಸಂಘದ ಅಧ್ಯಕ್ಷ ಎಂ.ಎಲ್.ಕೆ. ನಾಯ್ಡು ಆಗ್ರಹಿಸಿದರು.
ಕೊಪ್ಪಳ: ಜಿಲ್ಲಾಧಿಕಾರಿಗಳು ಬಸಾಪುರ ಕೆರೆಗೆ ಸಂಬಂಧಿಸಿ ಹೈಕೋರ್ಟ್ ಆದೇಶ ಉಲ್ಲಂಘಿಸಿ ಕಾಂಪೌಂಡ್ ಹಾಕಿದ ಬಲ್ಡೋಟ ಕಂಪನಿ ಮೇಲೆ ತಕ್ಷಣ ಕ್ರಮ ಜರುಗಿಸಿ ಅಡ್ಡಗಟ್ಟಿದ ಸಂಪರ್ಕ ರಸ್ತೆಯನ್ನು ಜನ, ಜಾನುವಾರು ನೀರು ಕುಡಿಯಲು ಮುಕ್ತಗೊಳಿಸಬೇಕು ಎಂದು ಬಳ್ಳಾರಿ ಜಿಲ್ಲಾ ರಾಜ್ಯ ರೈತ ಸಂಘದ ಅಧ್ಯಕ್ಷ ಎಂ.ಎಲ್.ಕೆ. ನಾಯ್ಡು ಆಗ್ರಹಿಸಿದರು.
ನಗರದ ನಗರಸಭೆ ಮುಂದೆ 228 ದಿನಗಳಿಂದ ನಡೆಯುತ್ತಿರುವ ಹೋರಾಟದ ವೇದಿಕೆಯಲ್ಲಿ ಕಂಪನಿಯ ನಕ್ಷೆ ತೋರಿಸಿ ಅವರು ಮಾತನಾಡಿದರು. ಕಂಪನಿ ಅಧಿಕೃತವಾದ ತನ್ನ ನಕ್ಷೆ ವ್ಯಾಪ್ತಿಯ ಹೊರಗೆ ಬಸಾಪುರ ಸ.ನಂ. 143ರ 44.35 ಎಕರೆ ವಿಸ್ತೀರ್ಣದ ಕೆರೆ ಇದೆ ಎಂದು ಹೇಳಿದೆ. ಹೀಗಿದ್ದಾಗಲೂ ಈ ಹಿಂದಿನ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರ್ ವಿಠ್ಠಲ್ ಚೌಗಲಾ ಅವರು ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಕೆರೆಯ ಸುತ್ತ ಕಂಪನಿಯವರು ಕಾಂಪೌಂಡ್ ಕಟ್ಟಲು ಅನುಮತಿ ಕೊಟ್ಟು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಧಿಕಾರ ದುರುಪಯೋಗ ಮಾಡಿದ್ದು ಮೇಲ್ನೋಟದಲ್ಲಿ ಕಂಡು ಬಂದರೂ ಅವರ ಮೇಲೆ ಜಿಲ್ಲಾಧಿಕಾರಿ ಯಾಕೆ ಕ್ರಮ ಜರುಗಿಸಿಲ್ಲ? ಈ ಮಾಹಿತಿಯನ್ನು ಸರ್ಕಾರದ ಗಮನಕ್ಕೆ ತರಬೇಕಿತ್ತು. ಷರತ್ತು ಉಲ್ಲಂಘನೆಯಾಗಿದ್ದಕ್ಕೆ ನೋಟಿಸ್ ಜಾರಿ ಮಾಡಿ ಮೌನವಹಿಸಿದರೆ ಆಗದು, ಬಸಾಪುರ ಗ್ರಾಮದ ಸುತ್ತಲಿನ ರೈತರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಕೂಡಲೇ ಜಿಲ್ಲಾಧಿಕಾರಿ ತಕ್ಷಣ ಕ್ರಮ ಕೈಗೊಂಡು ಅನಧಿಕೃತ ಕಾಂಪೌಂಡ್ ತೆರವು ಮಾಡಬೇಕು. ಇಲ್ಲದಿದ್ದರೆ ನಾವೇ ಕೆರೆಯನ್ನು ವಶಕ್ಕೆ ಪಡೆದುಕೊಳ್ಳುತ್ತೇವೆ ಎಂದು ಘೋಷಿಸಿದರು.ಧರಣಿಯಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ನಿವೃತ್ತ ಉಪನ್ಯಾಸಕ ಶಂಬುಲಿಂಗಪ್ಪ ಹರಗೇರಿ, ಮಹಾದೇವಪ್ಪ ಮಾವಿನಮಡು, ರಾಜಶೇಖರ ಏಳುಭಾವಿ, ಶಿವಪ್ಪ ಜಲ್ಲಿ, ರೇವಣಪ್ಪ ಎಸ್.ಕೆ. ಅಭಿಜಿತ್ ಅಂಡಗಿ, ಶಿವಮ್ಮ ಚಾಕ್ರಿ, ಸಾವಿತ್ರಿ ತೆಗ್ಗಿನಮನಿ, ಮಲ್ಲಮ್ಮ ನಾಗರಡ್ಡಿ, ಶರಣಪ್ಪ ತೆಗ್ಗಿನಮನಿ, ಗುಡದಪ್ಪ ಭಂಗಿ, ಶೇಖರಗೌಡ ಎ. ಪಾಟೀಲ ಲಕಮಾಪುರ, ಮಜರಪ್ಪ ಹೊಸಮನಿ, ವಿಶಾಲಾಕ್ಷಿ ಅಬ್ಬಿಗೇರಿ, ಗೌರಮ್ಮ ಆರೇರ, ತೃತೀಯಲಿಂಗಿ ಅನು ಹೊಸಪೇಟೆ ಮುಂತಾದವರು ಪಾಲ್ಗೊಂಡರು.