ಕಾರ್ಖಾನೆಗಳಿದ್ದರೂ ಯುವಕರಿಗೆ ಸಿಗದ ಕಾಯಂ ಕೆಲಸ

| Published : May 02 2025, 11:45 PM IST / Updated: May 02 2025, 11:46 PM IST

ಸಾರಾಂಶ

ಗಿಣಿಗೇರಿ ಸುತ್ತಮುತ್ತ ದೈತ್ಯ ಕಾರ್ಖಾನೆಗಳಿದ್ದರೂ ಸ್ಥಳೀಯ ಯುವಕರಿಗೆ ಕಾಯಂ ಕೆಲಸ ನೀಡುತ್ತಿಲ್ಲ. ಈಗಾಗಲೇ ಹದಿನೈದು ಇಪ್ಪತ್ತು ವರ್ಷಗಳಿಂದ ಗ್ರಾಮದ ಸುತ್ತಲಿನ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಕೂಡಲೇ ಕಾಯಂಗೊಳಿಸಬೇಕು. ಕಾರ್ಮಿಕರಿಗೆ ಸಿಗುವಂತ ಕನಿಷ್ಠ ವೇತನ ಸೇರಿದಂತೆ ಎಲ್ಲ ಹಕ್ಕುಗಳನ್ನು ಗೌರವಿಸಿ ಜೀವನ ಭದ್ರತೆ ಒದಗಿಸಬೇಕು.

ಕೊಪ್ಪಳ:

ತಾಲೂಕಿನ ಗಿಣಗೇರ ಗ್ರಾಮದ ಸೇವಾಲಾಲ್ ವೃತ್ತದಲ್ಲಿ ಗಿಣಿಗೇರ ನಾಗರಿಕ ಹೋರಾಟ ಸಮಿತಿ ಮತ್ತು ಕಟ್ಟಡ ಕಟ್ಟುವ ಮತ್ತು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ವತಿಯಿಂದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಈ ವೇಳೆ ಮಾತನಾಡಿದ ಕಾರ್ಮಿಕ ಮುಖಂಡ ಶರಣು ಗಡ್ಡಿ, ಗಿಣಿಗೇರಿ ಸುತ್ತಮುತ್ತ ದೈತ್ಯ ಕಾರ್ಖಾನೆಗಳಿದ್ದರೂ ಸ್ಥಳೀಯ ಯುವಕರಿಗೆ ಕಾಯಂ ಕೆಲಸ ನೀಡುತ್ತಿಲ್ಲ. ಈಗಾಗಲೇ ಹದಿನೈದು ಇಪ್ಪತ್ತು ವರ್ಷಗಳಿಂದ ಗ್ರಾಮದ ಸುತ್ತಲಿನ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಕೂಡಲೇ ಕಾಯಂಗೊಳಿಸಬೇಕು. ಕಾರ್ಮಿಕರಿಗೆ ಸಿಗುವಂತ ಕನಿಷ್ಠ ವೇತನ ಸೇರಿದಂತೆ ಎಲ್ಲ ಹಕ್ಕುಗಳನ್ನು ಗೌರವಿಸಿ ಜೀವನ ಭದ್ರತೆ ಒದಗಿಸಬೇಕು. ಐಟಿಐ, ಡಿಪ್ಲೊಮಾ ವೃತ್ತಿಪರ ಕೋರ್ಸ್ ಮುಗಿಸಿದ ಯುವಕರಿಗೆ ಕೆಲಸದ ಭದ್ರತೆ ಒದಗಿಸಬೇಕು ಎಂದರು.

ಸರ್ಕಾರಗಳು ಕಾರ್ಮಿಕರ ಪ್ರಜಾತಾಂತ್ರಿಕ ಹಕ್ಕುಗಳನ್ನು ದಮನ ಮಾಡಿ ಕಾರ್ಪೊರೇಟ್ ಪರ ನೀತಿಗಳನ್ನು ಜಾರಿ ಮಾಡುತ್ತಿವೆ. ದುಡಿಯುವ ಸಮಯ ಸೇರಿದಂತೆ ಕನಿಷ್ಠ ವೇತನ ನಿಗದಿ ಮಾಡದೆ ಕೇವಲ ಗುತ್ತಿಗೆ-ಹೊರಗುತ್ತಿಗೆ, ಸ್ಕೀಮ್ ನೌಕರರೆಂದು ಕಾರ್ಮಿಕ ವಿರೋಧಿ ನೀತಿ ಜಾರಿಗೊಳಿಸಿ ದುಡಿಯುವ ವರ್ಗವನ್ನು ಶೋಷಣೆ ಮಾಡಲಾಗುತ್ತಿದೆ ಎಂದ ಅವರು, ಕಾರ್ಮಿಕರು ವರ್ಗ ಪ್ರಜ್ಞೆ ಮೈಗೂಡಿಸಿಕೊಂಡು ನೈಜ ಕ್ರಾಂತಿಕಾರಿ ಸಂಘಟನೆಯನ್ನು ಬಲಪಡಿಸಬೇಕೆಂದು ಕರೆ ನೀಡಿದರು.

ನೂರಸಾಬ್‌ ಹೊಸಮನಿ ಮಾತನಾಡಿ, ಕಾರ್ಲ್‌ಮಾಕ್ಸ್‌ ಹಾಗೂ ಲೇನಿನ್‌ ದುಡಿಯುವ ಸಮಯ ಎಂಟು ಗಂಟೆ ಮತ್ತು ಜೀವನ ಭದ್ರತೆಗಾಗಿ ಕಾರ್ಮಿಕರು ಹೋರಾಟ ಕಟ್ಟಿ ಇಂದಿಗೂ ಸ್ಫೂರ್ತಿಯಾಗಿದ್ದಾರೆ. ಅವರ ಹೋರಾಟವನ್ನು ಅಂತಾರಾಷ್ಟ್ರೀಯ ಕಾರ್ಮಿಕ ದಿನವಾಗಿ ವಿಶ್ವದ ಎಲ್ಲ ದುಡಿಯುವ ಜನ ಆಚರಿಸುತ್ತಾರೆ ಎಂದರು.

ಮಂಗಳೇಶ ರಾಠೋಡ ಮಾತನಾಡಿ, ಗ್ರಾಮದ ಸಮಸ್ಯೆಗಳ ವಿರುದ್ಧ ಗಿಣಿಗೇರಿ ನಾಗರಿಕ ಹೋರಾಟ ಸಮಿತಿ ಹೆಸರಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿಗಾಗಿ ನಡೆದ ಹೋರಾಟ ಯಶಸ್ವಿಯಾಗಿದೆ. ಸಾರ್ವಜನಿಕ ಆರೋಗ್ಯ, ಪರಿಸರ ಮಾಲಿನ್ಯ, ಸ್ಥಳೀಯ ಯುವಕರಿಗೆ ಉದ್ಯೋಗ ಭದ್ರತೆ ಇನ್ನಿತರ ಸಮಸ್ಯೆಗಳ ಪರಿಹಾರಕ್ಕಾಗಿ ನಿತ್ಯ ನಿರಂತರ ನಡೆಯುವ ಹೋರಾಟವನ್ನು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.

ಈ ವೇಳೆ ಕಾರ್ಮಿಕ ಮುಖಂಡರಾದ ರಾಜಪ್ಪ ಚವ್ಹಾಣ, ಅಶೋಕ ಗುಜಮಾಗಡಿ, ಸಮಿತಿ ಸದಸ್ಯರಾದ ಸುರೇಶ ಕಲಾಲ್, ಹನುಮಂತ ಕಟೀಗಿ, ಯುವ ಮುಖಂಡ ಬಸವರಾಜ ಬಂಗಿ, ಮಾರುತಿ, ಹನುಮಂತ ಕನಕಾಪುರ, ಮಲ್ಲಿಕಾರ್ಜುನ ಹಲಿಗೇರಿ, ರಾಘು,ಮುಂತಾದವರು ಭಾಗವಹಿಸಿದ್ದರು.