ಪ್ರತಿ ಶುಶ್ರೂಷಕಿಯರು ಪ್ರಶಂಸೆಗೆ ಅರ್ಹರು: ಗೃಹ ಸಚಿವ ಡಾ। ಜಿ.ಪರಮೇಶ್ವರ್‌

| Published : May 13 2024, 01:00 AM IST

ಸಾರಾಂಶ

ಜಗತ್ತಿನಾದ್ಯಂತ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಉಪಚರಿಸಿ ಅವರ ಆರೋಗ್ಯದ ಸುಧಾರಣೆಗೆ ನಿರಂತರವಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ಶುಶ್ರೂಷಕಿಯರೂ ಪ್ರಶಂಸೆಗೆ ಅರ್ಹರು ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜಗತ್ತಿನಾದ್ಯಂತ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಉಪಚರಿಸಿ ಅವರ ಆರೋಗ್ಯದ ಸುಧಾರಣೆಗೆ ನಿರಂತರವಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ಶುಶ್ರೂಷಕಿಯರೂ ಪ್ರಶಂಸೆಗೆ ಅರ್ಹರು ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ಹೇಳಿದ್ದಾರೆ.

ಅಂತಾರಾಷ್ಟ್ರೀಯ ದಾದಿಯರ ದಿನದ ಅಂಗವಾಗಿ ಎಸ್‌ಡಿಎಸ್‌ಟಿಆರ್‌ಸಿ ಮತ್ತು ರಾಜೀವ್‌ಗಾಂಧಿ ಎದೆರೋಗಗಳ ಸಂಸ್ಥೆ, ಭಾನುವಾರ ವಿಧಾನಸೌಧದ ಮುಂದೆ ಹಮ್ಮಿಕೊಂಡಿದ್ದ ‘ನಮ್ಮ ಶುಶ್ರೂಷಕಿಯರು ನಮ್ಮ ಭವಿಷ್ಯ’ ರ್‍ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ವೈದ್ಯ ವೃತ್ತಿಯನ್ನು ಸಾಮಾನ್ಯವಾಗಿ ಭಗವಂತನ ಸಮನಾಗಿ ಕಾಣಲಾಗುತ್ತದೆ. ಆ ವೈದ್ಯರ ಮಾರ್ಗದರ್ಶನದಲ್ಲಿ ರೋಗಿಗಳನ್ನು ಉಪಚರಿಸಿ ಅವರ ಆರೋಗ್ಯ ಸುಧಾರಣೆಗೆ ಶ್ರಮಿಸುವ ಎಲ್ಲ ಶುಶ್ರೂಷಕಿಯರು ಪ್ರಶಂಸೆಗೆ ಅರ್ಹರು. ಜನನ ಮರಣದ ಸಮಯದಲ್ಲೂ ಅವರ ಸೇವೆ ಗಣನೀಯ. ಅವರ ಸೇವೆಗೆ ಗೌರವ ಸೂಚಿಸಲೆಂದೇ ಪ್ರತಿ ವರ್ಷ ಮೇ 12ರಂದು ವಿಶ್ವದೆಲ್ಲೆಡೆ ವಿಶ್ವ ದಾದಿಯರ ದಿನಾಚರಣೆ ಆಚರಿಸಲಾಗುತ್ತಿದೆ. ಕೋವಿಡ್‌ ಸಂದರ್ಭದಲ್ಲಿ ಶುಶ್ರೂಷಕಿಯರು ಜೀವದ ಹಂಗನ್ನೇ ತೊರೆದು ಹಗಲಿರುಳು ಶ್ರಮಿಸಿದರು. ಜೀವನ್ಮರಣದ ನಡುವೆ ಹೋರಾಡುತ್ತಿದ್ದವರ ಶುಶ್ರೂಷೆಗಾಗಿ ಅವರು ತೋರಿದ ಉತ್ಪಾಹ ಮತ್ತು ಕಾಳಜಿಯ ವೃತ್ತಿಬದ್ಧತೆ ಅನುಕರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರ್‍ಯಾಲಿಯಲ್ಲಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ರಾಜೀವ್‌ ಗಾಂಧಿ ಎದೆರೋಗಗಳ ಸಂಸ್ಥೆಯ ನಿರ್ದೇಶಕ ಡಾ। ಸಿ.ನಾಗರಾಜ, ವಿವಿಧ ಆಸ್ಪತ್ರೆಗಳ ಶುಶ್ರೂಷಕಿಯರು ಹಾಗೂ ನರ್ಸಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳೂ ಭಾಗವಹಿಸಿದ್ದರು.