ಕನ್ನಡಪ್ರಭ ವಾರ್ತೆ ಮಂಡ್ಯ

ಬ್ಯಾಡ್ಮಿಂಟನ್ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಪ್ರತಿ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು ನಿರ್ಮಿಸುವುದು ಅಗತ್ಯ ಎಂದು ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಕುಮಾರ್ ಬಂಗಾರಪ್ಪ ತಿಳಿಸಿದರು.

ಜಿಲ್ಲಾ ಕೇಂದ್ರದೊಳಗೆ ಕ್ರೀಡಾಂಗಣಕ್ಕೆ ಜಾಗ ನೀಡುವುದು ಕಷ್ಟವಾಗಬಹುದು. ಅದಕ್ಕಾಗಿ ಜಿಲ್ಲಾ ಕೇಂದ್ರದಿಂದ ೫ ಕಿ.ಮೀ. ಒಳಗೆ ಬ್ಯಾಡ್ಮಿಂಟನ್ ಕ್ರೀಡಾಂಗಣದ ಜೊತೆಗೆ ಇತರೆ ಕ್ರೀಡಾಭ್ಯಾಸಕ್ಕೂ ಅನುಕೂಲವಾಗುವಂತೆ ಕ್ರೀಡಾಂಗಣ ನಿರ್ಮಿಸಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಮಂಡ್ಯ ಜಿಲ್ಲಾ ಕೇಂದ್ರದ ಹೊರಗೆ ಐದು ಎಕರೆ ಜಾಗ ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಖೇಲೋ ಇಂಡಿಯಾದಲ್ಲಿ ಹಣವಿದ್ದು ಅದನ್ನು ಕ್ರೀಡಾಂಗಣ ನಿರ್ಮಾಣಕ್ಕೆ ನೀಡುವುದಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಇದರಿಂದ ಉತ್ತಮ ಕ್ರೀಡಾಂಗಣ ನಿರ್ಮಾಣವಾಗುವ ಆಶಯ ವ್ಯಕ್ತಪಡಿಸಿದರು.

ತಾಲೂಕು ವ್ಯಾಪ್ತಿಯಲ್ಲಿ ೫ ಸಾವಿರ ಚದರಡಿ ಜಾಗ ಸಿಕ್ಕರೂ ಸಾಕು. ಅದನ್ನೇ ಕ್ರೀಡಾಂಗಣವಾಗಿ ಪರಿವರ್ತನೆ ಮಾಡಿಕೊಂಡು ಅಭ್ಯಾಸ ನಡೆಸಬಹುದು. ಸೊರಬ ಕ್ಷೇತ್ರದಲ್ಲಿ ಬಸ್‌ನಿಲ್ದಾಣದ ಮೇಲೆ ಬ್ಯಾಡ್ಮಿಂಟನ್ ಕೋರ್ಟ್ ಮಾಡಿಸಿದ್ದು ಕ್ರೀಡಾಪಟುಗಳಿಗೆ ಬಸ್ ನಿಲ್ದಾಣಕ್ಕೆ ಬಂದು ಅಲ್ಲೇ ಅಭ್ಯಾಸ ಮಾಡುತ್ತಿದ್ದಾರೆ. ಆ ಸೌಲಭ್ಯ ರಾಜ್ಯದ ಎಲ್ಲಾ ತಾಲೂಕುಗಳಲ್ಲಿಯೂ ಸಿಗುವಂತಾಗಬೇಕು ಎಂದು ಆಶಿಸಿದರು.


ಷಟಲ್, ರಾಕೆಟ್, ಶೂ ಬೆಲೆಗಳು ದುಬಾರಿಯಾಗಿರುವುದು ನಿಜ. ಅವುಗಳನ್ನು ಕಡಿಮೆ ಮಾಡುವಂತೆ ಕಂಪನಿಗಳಿಗೆ ಮನವಿ ಮಾಡಲಾಗಿದೆ. ಬ್ಯಾಡ್ಮಿಂಟನ್ ಆಟದ ಸ್ವರೂಪವೂ ಬದಲಾಗುತ್ತಿದೆ. ೨ ಸರ್ವೀಸ್ ಮಾದರಿಯಿಂದ ೨೧ ಪಾಯಿಂಟ್ ರೀತಿಗೆ ಬದಲಾದ ಪಂದ್ಯವು ೧೫ ಪಾಯಿಂಟ್‌ನ ಮೂರು ಸೆಟ್‌ಗಳ ಪಂದ್ಯಾವಳಿಯಾಗಿ ರೂಪಾಂತರವಾಗುತ್ತಿದೆ. ಕ್ರೀಡೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಹೊಸ ಕ್ರೀಡಾನೀತಿಯನ್ನು ಜಾರಿಗೆ ತರಲಾಗುತ್ತಿದೆ. ಇದೇ ಡಿಸೆಂಬರ್‌ನಿಂದ ಈ ಕ್ರೀಡಾನೀತಿ ಜಾರಿಯಾಗುವ ನಿರೀಕ್ಷೆ ಇದೆ ಎಂದರು.

ಪುಟ್ಟವೀರಮ್ಮನವರಿಗೆ ಅಧಿಕಾರ ಹಸ್ತಾಂತರಿಸದೆ ಕಿರುಕುಳ: ಆರೋಪ

ಡಿಡಿಪಿಐ ಮಧ್ಯಪ್ರವೇಶಿಸಿ ಗೊಂದಲ ಬಗೆಹರಿಸಲು ದಸಂಸ ಆಗ್ರಹ

ಕನ್ನಡಪ್ರಭ ವಾರ್ತೆ ಮಂಡ್ಯ

ಮುಖ್ಯ ಶಿಕ್ಷಕಿಯಾಗಿ ಬಡ್ತಿ ಹೊಂದಿದ ದಲಿತ ಮಹಿಳೆ ಪುಟ್ಟವೀರಮ್ಮಗೆ ಅಧಿಕಾರ ಹಸ್ತಾಂತರ ಮಾಡದೇ ಕಿರುಕುಳ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ರಾಜ್ಯಾಧ್ಯಕ್ಷ ಬಿ.ಸುರೇಶ್‌ಕುಮಾರ್ ಒತ್ತಾಯಿಸಿದರು.

ಪುಟ್ಟವೀರಮ್ಮ ಮುಖ್ಯ ಶಿಕ್ಷಕಿಯಾಗಿ ಕಳೆದ ಮೇ ೮ರಂದು ಬಡ್ತಿ ಹೊಂದಿ ಮಳವಳ್ಳಿ ತಾಲೂಕು ಅಮೃತೇಶ್ವರನಹಳ್ಳಿ ಗ್ರಾಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕರ್ತವ್ಯಕ್ಕೆ ಹಾಜರಾದರೂ ಪ್ರಭಾರ ಮುಖ್ಯ ಶಿಕ್ಷಕ ಟಿ.ಎನ್.ಮಹೇಶ ಅವರು ಅಧಿಕಾರ ಸ್ವೀಕರಿಸದಂತೆ ತಡೆಹಿಡಿದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಪುಟ್ಟವೀರಮ್ಮ ದಲಿತ ಮಹಿಳೆ ಎಂಬ ಕಾರಣಕ್ಕೆ ಅವರ ವಿರುದ್ಧ ಗ್ರಾಮಸ್ಥರು, ವಿದ್ಯಾರ್ಥಿಗಳ ಪೋಷಕರು, ಎಸ್‌ಡಿಎಂಸಿ ಸದಸ್ಯರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಈ ಶಾಲೆಗೆ ಪುಟ್ಟವೀರಮ್ಮ ಬೇಡ, ಅವರು ಇದ್ದರೆ ಟಿ.ಸಿ ಪಡೆಯುತ್ತೇವೆ, ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲವೆಂದು ಹೇಳುವಂತೆ ಪ್ರೇರೇಪಿಸಿದ್ದಾರೆ ಎಂದು ದೂರಿದರು.

ಈ ಸಂಬಂಧ ಶಾಲೆಗೆ ಭೇಟಿ ನೀಡಿದ ಬಿಆರ್‌ಸಿ, ಸಿಇಒ, ಸಿಆರ್‌ಪಿ ಅಧಿಕಾರಿಗಳು ಟಿ.ಎನ್.ಮಹೇಶ್ ಅವರೇ ಮುಖ್ಯ ಶಿಕ್ಷಕರಾಗಿ ಮುಂದುವರೆಯಲಿ ಎಂದು ಹೇಳಿದ್ದಾರೆ. ಅಲ್ಲದೇ, ಪುಟ್ಟವೀರಮ್ಮ ಅವರನ್ನು ನಿಂದಿಸಿ, ಮಾನಸಿಕವಾಗಿ ಘಾಸಿಗೊಳಿಸಿದ್ದಾರೆ. ಈ ಸಂಬಂಧ ಬಿಇಒ ಉಮಾ ಅವರಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಈ ಡಿಡಿಪಿಐ ಅವರು ಮಧ್ಯಪ್ರವೇಶಿಸಿ ಪುಟ್ಟವೀರಮ್ಮ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಚಂದ್ರು, ಮಲ್ಲೇಶ್ ಇದ್ದರು.