ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಶಿಕ್ಷಕರು ಬೋಧಿಸುವ ಮೌಲ್ಯಾಧಾರಿತ, ನೀತಿಯುಕ್ತ, ಜ್ಞಾನಾರ್ಜನೆ ವಿಷಯಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಶಿಕ್ಷಕರಿಗೆ ಗೌರವ ಕೃತಜ್ಞತೆಗಳನ್ನು ಸಲ್ಲಿಸಬೇಕು ಎಂದು ವಿಜಯ ಶಾಲೆ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್ ಸ್ವಾಮಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ನಗರದ ವಿಜಯಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಂದು ಶಾಲೆಯ ಎಲ್ಲಾ ಶಿಕ್ಷಕರಿಗೆ ಬೂಕರ್ ಪ್ರಶಸ್ತಿ ವಿಜೇತ "ಎದೆಯ ಹಣತೆ " ಪುಸ್ತಕವನ್ನು ನೀಡಿ ಗೌರವಿಸಿ ಮಾತನಾಡಿದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಸರ್ಕಾರಿ ಶಾಲೆಯ ಗಣಿತ ಶಿಕ್ಷಕರೂ ಹಾಗೂ ವಿಜಯ ಶಾಲೆಯ ಪೋಷಕರು ಆದ ಸುಂದರಂ ಕೆ.ಎಸ್. ಮಾತನಾಡುತ್ತಾ ಶಿಕ್ಷಕರು ಜೀವನದಲ್ಲಿ ನಿರಂತರ ಕಲಿಕೆಯನ್ನು ಅಳವಡಿಸಿಕೊಂಡು ಉತ್ತಮ ಶಿಕ್ಷಕರಾಗೋಣ ಎಂದು ಶಿಕ್ಷಕರೆಲ್ಲರಿಗೂ ಶುಭಾಶಯ ಕೋರಿದರು. ತಾವು ಶಿಕ್ಷಕ ವೃತ್ತಿಯಲ್ಲಿ ಅನುಭವಿಸಿದ ಹಲವಾರು ಅನುಭವಗಳನ್ನು ಹಂಚಿಕೊಂಡಿದ್ದು ನೆರೆದಿದ್ದವರಲ್ಲಿ ನಗುವಿನಷ್ಟೆ ಕಣ್ಣಂಚಿನ ಕಂಬನಿಗೆ ಸಾಕ್ಷಿಯಾಯಿತು. ವಿಜಯ ಶಾಲೆಯ 417 ಪೋಷಕರು ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಇವರಿಗೆ ಶಾಲಾ ಸಂಸ್ಥಾಪಕ ನಿರ್ದೇಶಕರಾದ ಶ್ರೀಮತಿ ತಾರ ಎಸ್ ಸ್ವಾಮಿಯವರು ತಮ್ಮ ಕೈ ಬರೆಹದಲ್ಲಿ ಬರೆದ ಶುಭಾಶಯ ಪತ್ರಗಳನ್ನು ವಿದ್ಯಾರ್ಥಿಗಳ ಮೂಲಕ ತಲುಪಿಸಿದ್ದು ಹೃದಯಸ್ಪರ್ಶಿ ಘಟನೆಗೆ ಸಾಕ್ಷಿಯಾಯಿತು. 10ನೇ ತರಗತಿ ವಿದ್ಯಾರ್ಥಿಗಳು ತಾವೇ ವಿಶಿಷ್ಟವಾಗಿ ತಯಾರಿಸಿದ ಬುಕ್ ಮಾರ್ಕರ್ಗಳನ್ನು ಗುರುಗಳಿಗೆ ನೀಡಿದ್ದು ವಿದ್ಯಾರ್ಥಿಗಳಲ್ಲಿರುವ ಕಲಾ ಕೌಶಲತೆಗೆ ಸಾಕ್ಷಿ ಯಾದರೆ, ಪ್ರತಿ ಶಿಕ್ಷಕರನ್ನು ಕ್ರಿಯಾವಿಶೇಷಣಗಳ ಮೂಲಕ ಸ್ವಾಗತಿಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳು ಶಿಕ್ಷಕರಿಗೆ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಶೈಕ್ಷಣಿಕ ಮುಖ್ಯಸ್ಥೆ ಡಾ. ಶ್ರೀ ಲಕ್ಷ್ಮಿ ಎಸ್, ಪ್ರಾಂಶುಪಾಲ ನಂದೀಶ ಕೆ ಎಸ್, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.