ಸಾರಾಂಶ
ಕ್ಷಯ ರೋಗಿಗಳನ್ನು ದಾನಿಗಳು ದತ್ತು ಪಡೆಯುವುದರ ಮೂಲಕ ಸಮತೋಲನ ಆಹಾರ, ವೈದ್ಯಕೀಯ ವ್ಯವಸ್ಥೆಗಳು, ಪೂರಕ ಪೌಷ್ಟಿಕಾಂಶಗಳು ದೊರೆಯುವಂತೆ ನೋಡಿಕೊಳ್ಳುವುದರ ಮೂಲಕ ಕ್ಷಯಮುಕ್ತ ಹೊಸದುರ್ಗವನ್ನಾಗಿಸೋಣ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರಾಘವೇಂದ್ರ ಪ್ರಸಾದ್ ಹೇಳಿದರು.
ಹೊಸದುರ್ಗ: ಕ್ಷಯ ರೋಗಿಗಳನ್ನು ದಾನಿಗಳು ದತ್ತು ಪಡೆಯುವುದರ ಮೂಲಕ ಸಮತೋಲನ ಆಹಾರ, ವೈದ್ಯಕೀಯ ವ್ಯವಸ್ಥೆಗಳು, ಪೂರಕ ಪೌಷ್ಟಿಕಾಂಶಗಳು ದೊರೆಯುವಂತೆ ನೋಡಿಕೊಳ್ಳುವುದರ ಮೂಲಕ ಕ್ಷಯಮುಕ್ತ ಹೊಸದುರ್ಗವನ್ನಾಗಿಸೋಣ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರಾಘವೇಂದ್ರ ಪ್ರಸಾದ್ ಹೇಳಿದರು.
ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.ಎರಡು ವಾರಕ್ಕಿಂತ ಹೆಚ್ಚಿನ ಕೆಮ್ಮು, ಕೆಮ್ಮಿನಲ್ಲಿ ರಕ್ತ ಬರುವುದು, ಎರಡು ವಾರಕ್ಕಿಂತ ಹೆಚ್ಚು ಜ್ವರವಿರುವುದು, ಇದ್ದಕ್ಕಿದ್ದಂತೆ ತೂಕ ಕಡಿಮೆಯಾಗುವುದು, ಹಸಿವಾಗದಿರುವುದು, ಸೋಲು ಮತ್ತು ಸುಸ್ತಾಗುವುದು ಕ್ಷಯ ರೋಗದ ಲಕ್ಷಣವಿರಬಹುದು, ಇಂತಹ ಲಕ್ಷಣಗಳಿದ್ದರೆ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷಿಸಿಕೊಳ್ಳಿ ಎಂದರು.
ಕ್ಷೇತ್ರ ಆರೋಗ್ಯಶಿಕ್ಷಣಾಧಿಕಾರಿ ವೀರೆಂದ್ರ ಪಾಟೀಲ್ ಮಾತನಾಡಿ, ಕ್ಷಯ ರೋಗ ಪರೀಕ್ಷೆ,ಪತ್ತೆ ಮತ್ತು ಚಿಕಿತ್ಸೆಯನ್ನು ಸರ್ಕಾರ ಆರೋಗ್ಯ ಇಲಾಖೆ ಮೂಲಕ ಸಂಪೂರ್ಣ ಉಚಿತವಾಗಿ ನೀಡುತ್ತಿದ್ದು ಇದರ ಸದುಪಯೋಗಪಡಿಸಿಕೊಂಡು ದೇಶವನ್ನು ಕ್ಷಯಮುಕ್ತಗೊಳಿಸೋಣ ಎಂದರು.ವಿಶ್ವ ಆರೋಗ್ಯ ಸಂಸ್ಥೆಯ ಸರ್ವೇಕ್ಷಾಣಾಧಿಕಾರಿ ಡಾ.ಶ್ರೀಧರ್, ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕರಿಗಳಾದ ಹನುಮಂತ ರೆಡ್ಡಿ, ಸಿದ್ದರಾಮಪ್ಪ, ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ನಿರ್ಮಲ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕಮಲಮ್ಮ ಇದ್ದರು.