ಗ್ರಾಮ ದೇವತೆಯರ ಜಾತ್ರೆಗೆ ಎಲ್ಲರೂ ಕೈಜೋಡಿಸಿ

| Published : Apr 14 2025, 01:28 AM IST

ಸಾರಾಂಶ

ಗ್ರಾಮ ದೇವತೆಯರ ಜಾತ್ರಾ ನಿಮಿತ್ಯವಾಗಿ ಅದರ ಪೂರ್ವಭಾವಿಯಾಗಿ ಏ.30 ರಿಂದ ಮೇ 8 ರವರೆಗೆ ಅಷ್ಟ ಬಂಧ ಪ್ರತಿಷ್ಟಾ ಬ್ರಹ್ಮ ಕಳಶೋತ್ಸವ ಮತ್ತು ಮಹಾ ರಥೋತ್ಸವವು ಜರುಗಲಿದೆ. ಇದರ ಯಶಸ್ಸಿಗಾಗಿ ಪ್ರತಿಯೊಬ್ಬರೂ ಸೇವಾ ಮನೋಭಾವನೆಯಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ದೇವಿಯರ ಕೃಪೆಗೆ ಪಾತ್ರರಾಗಬೇಕೆಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.

ಕನ್ನಡಪ್ರಭ ವಾರ್ತೆ ಗೋಕಾಕ

ಗ್ರಾಮ ದೇವತೆಯರ ಜಾತ್ರಾ ನಿಮಿತ್ಯವಾಗಿ ಅದರ ಪೂರ್ವಭಾವಿಯಾಗಿ ಏ.30 ರಿಂದ ಮೇ 8 ರವರೆಗೆ ಅಷ್ಟ ಬಂಧ ಪ್ರತಿಷ್ಟಾ ಬ್ರಹ್ಮ ಕಳಶೋತ್ಸವ ಮತ್ತು ಮಹಾ ರಥೋತ್ಸವವು ಜರುಗಲಿದೆ. ಇದರ ಯಶಸ್ಸಿಗಾಗಿ ಪ್ರತಿಯೊಬ್ಬರೂ ಸೇವಾ ಮನೋಭಾವನೆಯಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ದೇವಿಯರ ಕೃಪೆಗೆ ಪಾತ್ರರಾಗಬೇಕೆಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.

ನಗರದ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಹಾಲಕ್ಷ್ಮೀ, ಗಣಪತಿ, ಈಶ್ವರ, ಆಂಜನೇಯ, ನಾಗದೇವರ, ನವಗ್ರಹರ ದೇವರ ಅಷ್ಠಬಂಧ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಒಟ್ಟು 9 ದಿನಗಳವರೆಗೆ ನಡೆಯಲಿದೆ ಎಂದು ತಿಳಿಸಿದರು.ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ವಿವಿಧ ಉಪ ಸಮಿತಿಗಳನ್ನು ರಚಿಸಬೇಕು. ಜಾತ್ರೆಯ ಯಶಸ್ಸಿಗಾಗಿ ಪ್ರತಿಯೊಬ್ಬರೂ ತನು, ಮನ, ಧನದಿಂದ ಸೇವೆ ಸಲ್ಲಿಸಬೇಕು. 9 ದಿನಗಳ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಸಂದರ್ಭದಲ್ಲಿ ನಿತ್ಯ ಪೂಜ್ಯರಿಂದ ಪ್ರವಚನಗಳು ಜರುಗಲಿವೆ. ಬರುವ ಜೂ.30ರಿಂದ ಜುಲೈ 8ರ ವರೆಗೆ ಗೋಕಾಕ ಗ್ರಾಮದೇವಿಯರ ಜಾತ್ರೆಯು ಬಹು ವಿಜೃಂಭಣೆಯಿಂದ ಜರುಗಲಿದೆ. ಇಡೀ ರಾಜ್ಯವೇ ಮೆಚ್ಚಿಸುವ ರೀತಿಯಲ್ಲಿ ನಾವು ಈ ಕಾರ್ಯಕ್ರಮಗಳಲ್ಲಿ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಿದೆ ಎಂದರು.ಪುರಾತನವಾದ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರವನ್ನು ಮಾಡಬೇಕೆಂಬುದನ್ನು ನಿಶ್ಚಯಿಸಿ ಸರ್ವಭಕ್ತರ ಸಹಕಾರದಿಂದ ದೇವಸ್ಥಾನವು ನವೀಕೃತಗೊಂಡು ಭವ್ಯವಾಗಿ ತಲೆಯೆತ್ತಿ ನಿಂತಿದೆ. ನಮ್ಮ ತಂದೆಯವರಾಗಿದ್ದ ದಿ.ಲಕ್ಷ್ಮಣರಾವ್‌ ಜಾರಕಿಹೊಳಿ ಅವರು ಈ ದೇವಸ್ಥಾನದ ನಿರ್ಮಾಣಕ್ಕೆ ಶ್ರಮಿಸಿದ್ದರು ಎಂಬುದನ್ನು ಸ್ಮರಿಸಿಕೊಂಡ ಅವರು, ಮೂಲ ಮಂದಿರಕ್ಕೆ ಯಾವುದೇ ಭಂಗ ಬರದಂತೆ ಶಿಖರವು ಎದ್ದು ನಿಂತಿದೆ. ಆಧುನಿಕತೆಯ ಸ್ಪರ್ಷದೊಂದಿಗೆ ಕಂಗೊಳಿಸುತ್ತಿದೆ. ಪರಿವಾರದ ದೇವರುಗಳು ಇದೇ ಸಂದರ್ಭದಲ್ಲಿ ಪ್ರತಿಷ್ಠಾಪನೆಗೊಳ್ಳಲಿವೆ. ಒಟ್ಟು 40 ಪೂಜೆಗಳು ದಿನಂಪ್ರತಿ ನಡೆಯಲಿದ್ದು, ಈ ಪೂಜಾ ಕಾರ್ಯಗಳಲ್ಲಿ ಎಲ್ಲರೂ ಭಾಗವಹಿಸಬೇಕು ಎಂದರು.ನಗರದಲ್ಲಿರುವ ಪ್ರತಿಯೊಂದು ಸಮಾಜಗಳ ಸಹಕಾರವು ಅಗತ್ಯವಾಗಿದೆ. ಎಲ್ಲರೂ ಕೂಡಿಕೊಂಡು ಅದ್ದೂರಿಯಾಗಿ ಜಾತ್ರೆ ಮಾಡೋಣ. ಸೇವಾ ಭಾವದಿಂದ ದುಡಿಯೋಣ. ಮಹಾಲಕ್ಷ್ಮೀ ದೇವಿಯು ಸರ್ವರಿಗೂ ಒಳಿತನ್ನು ಮಾಡಲಿ ಎಂದು ಅವರು ಆಶಿಸಿದರು.ಇದೇ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದ ಮೇರೆಗೆ ಏ.30ರಿಂದ 9 ದಿನಗಳ ಕಾಲ ಜರುಗುವ ಅಷ್ಠಬಂಧ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ಯಶಸ್ವಿ ಮಾಡಲು ಉಪ- ಸಮಿತಿಗಳನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ಪ್ರಭು ಚವ್ಹಾಣ, ಅಡಿವೆಪ್ಪ ಕಿತ್ತೂರ, ಅಶೋಕ ಹೆಗ್ಗನ್ನವರ, ಬಸವಣ್ಣಿ ಬನ್ನಿಶೆಟ್ಟಿ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ವಿಕ್ರಮ ಅಂಗಡಿ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ, ನ್ಯಾಯವಾದಿ ಎಂ.ವೈ,ಹಾರೂಗೇರಿ, ಸಿ.ಬಿ.ಕೌಜಲಗಿ, ವಿವಿಧ ಸಮುದಾಂಗಳ ಮುಖಂಡರು, ನಗರಸಭೆ ಸದಸ್ಯರು, ವ್ಯಾಪಾರಿಗಳು, ನ್ಯಾಯವಾದಿಗಳು, ಹಲವು ಸಂಘಟನೆಗಳ ಪ್ರಮುಖರು, ಯುವಕ ಮಂಡಳಗಳ ಸದಸ್ಯರು ಭಾಗಿಯಾಗಿದ್ದರು.