ಜಾತ್ರೆ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ: ಉಮಾನಾಥ ಕೋಟ್ಯಾನ್‌

ಮೂಲ್ಕಿ: ಮೂಲ್ಕಿಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಏ.1ರಿಂದ 8ರ ವರೆಗೆ ನಡೆಯಲಿರುವ ಬಪ್ಪನಾಡು ಜಾತ್ರೆಯ ಯಶಸ್ಸಿಗೆ ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಭಕ್ತರು, ಊರ, ಪರವೂರ ಭಕ್ತರ ಸಹಕಾರ ಅಗತ್ಯ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು. ಏ. 1ರಿಂದ 8ರವರೆಗೆ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವ ಬಗ್ಗೆ ಬಪ್ಪನಾಡಿನ ಜ್ಞಾನ ಮಂದಿರದಲ್ಲಿ ಜರುಗಿದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕರಾವಳಿ ಜಿಲ್ಲೆಯಲ್ಲಿ ಬಪ್ಪನಾಡು ಜಾತ್ರೆಗೆ ವಿಶೇಷತೆ ಇದ್ದು, ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ. ಪಾರ್ಕಿಂಗ್‌ ವ್ಯವಸ್ಥೆ, ಅನ್ನ ಸಂತರ್ಪಣೆ, ಆರೋಗ್ಯ ಸೇವೆಗೆ ಮುತುವರ್ಜಿ ವಹಿಸಬೇಕಾಗಿದ್ದು, ಸಂಘ, ಸಂಸ್ಥೆಗಳು, ಮೂಲ್ಕಿ, ಆರೋಗ್ಯ ಇಲಾಖೆ, ಮೆಸ್ಕಾಂ ಇಲಾಖೆ, ಪೊಲೀಸ್‌ ಇಲಾಖೆ, ಸಂಚಾರ ಸೇರಿದಂತೆ ಎಲ್ಲರ ಸಂಪೂರ್ಣ ಸಹಕಾರದಿಂದ ಜಾತ್ರೆ ಕಾರ್ಯಕ್ರಮ ಯಶಸ್ಗಿಗೊಳಿಸಲು ಸಾಧ್ಯ ಎಂದು ಹೇಳಿದರು.

ಮೂಲ್ಕಿಯ ಸಮುದಾಯ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಡಾ. ಸುನೀಲ್‌ ಜತ್ತನ್ನ, ಮೂಲ್ಕಿ ಪೊಲೀಸ್‌ ಠಾಣೆ, ಮಂಗಳೂರು ಉತ್ತರ ಸಂಚಾರಿ ಠಾಣೆ ಅಧಿಕಾರಿಗಳು, ಮೆಸ್ಕಾಂ ಇಲಾಖೆಯ ಸೆಕ್ಷನ್‌ ಆಫೀಸರ್‌ ಭಾಗವಹಿಸಿದ್ದರು. ಬಪ್ಪನಾಡು ದೇವಳದ ಕಾರ್‍ಯನಿರ್ವಹಣಾಧಿಕಾರಿ ಶ್ವೇತ ಪಳ್ಳಿ ಮಾತನಾಡಿ, ಅನ್ನ ಸಂತರ್ಪಣೆ ಮತ್ತಿತರ ವಿಷಯಗಳ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದು, ವಿವಿಧ ಸಂಘ, ಸಂಸ್ಥೆಗಳಿಗೆ ಜವಾಬ್ದಾರಿ ನೀಡಲಾಗಿದೆ. ಟ್ರಾಫಿಕ್‌ ವ್ಯವಸ್ತೆ ಪ್ರಮುಖವಾಗಿದ್ದು, ಪೊಲೀಸ್‌ ಇಲಾಖೆ ವ್ಯವಸ್ತಿತ ರೀತಿಯಲ್ಲಿ ಟ್ರಾಫಿಕ್‌ ವ್ಯವಸ್ಥೆಯನ್ನು ನಿರ್ವಹಿಸುವಂತೆ ಸೂಚಿಸಿದರು. ಮೂಲ್ಕಿ ಸೀಮೆ ಅರಸರು, ದೇವಳದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು ಮಾತನಾಡಿ, ಬಪ್ಪನಾಡು ಜಾತ್ರೆ ಒಂಬತ್ತು ಮಾಗಣೆಯಯ ಹಬ್ಬವಾಗಿದ್ದು, ಜಾತ್ರೆಯ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

ನಾಗೇಶ್‌ ಬಪ್ಪನಾಡು, ದೇವಳದ ಅಕೌಟೆಂಟ್‌ ಶಿವ ಶಂಕರ್‌ ವರ್ಮ, ದೇವಳ ಅಭಿವೃದ್ದಿ ಸಮಿತಿ ಸದಸ್ಯರು, ವಿವಿಧ ಸಂಸ್ತೆಗಳ ಪದಾಧಿಕಾರಿಗಳು ಇದ್ದರು.