ಅಥಣಿ ಪಟ್ಟಣದ ಬುಧವಾರ ಪೇಟೆಯಲ್ಲಿ ಆಯೋಜಿಸಿದ್ದ ಭಗವಾನ ಮಹಾವೀರರ ಜಯಂತಿ ನಿಮಿತ್ತ ಶಿವಲೀಲಾ ಸದಾಶಿವ ಬುಟಾಳಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶೋಭಾ ಯಾತ್ರೆಗೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ಭಗವಾನ್ ಮಹಾವೀರರು ಮನುಕುಲವನ್ನು ಉದ್ಧಾರ ಮಾಡಿದ ಮಹಾನ್ ಚೇತನ. ಮಹಾವೀರರ ವಿಚಾರಧಾರೆಗಳು ಸರ್ವರಿಗೂ ಸಮಬಾಳು, ಸಮಪಾಲು ನೀಡುವ ದಿವ್ಯ ಸಂದೇಶವಾಗಿವೆ ಎಂದು ಪುರಸಭೆ ಅಧ್ಯಕ್ಷ ಶಿವಲೀಲಾ ಸದಾಶಿವ ಬುಟಾಳಿ ಹೇಳಿದರು.

ಪಟ್ಟಣದ ಬುಧವಾರ ಪೇಟೆಯಲ್ಲಿ ಆಯೋಜಿಸಿದ್ದ ಭಗವಾನ್ ಮಹಾವೀರರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶೋಭಾ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಅತ್ಯಂತ ಸೂಕ್ಷ್ಮ ಪ್ರಾಣಿ ಕೂಡ ಪ್ರಕೃತಿಯ ಒಂದು ಭಾಗವಾಗಿರುವುದರಿಂದ ಪ್ರಾಣಿ ಹಿಂಸೆ ಮಹಾ ಪಾಪವೆಂದು ಬದುಕು ಮತ್ತು ಬದುಕಲಿಕ್ಕೆ ಬಿಡು ಎಂಬ ಮಾತು ಎಲ್ಲ ಕಾಲಕ್ಕೂ ಸಲ್ಲುತ್ತದೆ. ಶಾಂತಿ, ಸಹನೆ, ತಾಳ್ಮೆ ಜೀವನದ ಮಂತ್ರಗಳಾಗಬೇಕು. ಆ ಮೂಲಕ ಪರೋಪಕಾರ ಜೀವನ ಸಾಗಿಸಬೇಕೆಂಬ ಸಂದೇಶವನ್ನು ಭಗವಾನ್ ಮಹಾವೀರರು ನೀಡಿದ್ದಾರೆ. ಎಲ್ಲರೂ ಅವರ ಬದುಕಿನ ಆದರ್ಶಗಳನ್ನು ಪಾಲಿಸೋಣ ಎಂದು ಕರೆ ನೀಡಿದರು.

ಪಟ್ಟಣದ ಬುಧವಾರ ಪೇಠದಲ್ಲಿರುವ ಜೈನ ಬಸದಿಯಿಂದ ಶೋಭಾಯಾತ್ರೆಗೆ ಪುರಸಭೆ ಅಧ್ಯಕ್ಷ ಶಿವಲೀಲಾ ಬೂಟಾಳಿ ಚಾಲನೆ ನೀಡಿದರು. ವಿವಿಧ ವಾದ್ಯ ಮೇಳಗಳೊಂದಿಗೆ ಆರಂಭವಾದ ಮೆರವಣಿಗೆ ಮತ್ತು ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ತರಕಾರಿ ಮಾರುಕಟ್ಟೆಯಲ್ಲಿನ ಜೈನಮಂದಿರದಲ್ಲಿ ಸಮಾವೇಶಗೊಂಡಿತು. ಶೋಭಾ ಯಾತ್ರೆ ಮೆರವಣಿಗೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಭಾಗವಹಿಸಿ ಜೈನ ಸಮುದಾಯ ಬಂಧುಗಳಿಗೆ ಶುಭಾಶಯ ಕೋರಿದರು. ನಂತರ ಭಗವಾನ್ ಮಹಾವೀರರ ಪಂಚಾಮೃತ ಅಭಿಷೇಕದ ಸವಾಲ ಹಾಗೂ ನಾಮಕರಣ ಮಾಡುವ ಸವಾಲುಗಳ ಕಾರ್ಯಕ್ರಮಗಳು ನಡೆದವು. ಹಾಗೆ ಮಹಾವೀರ ಜಯಂತಿ ನಿಮಿತ್ಯ ಜರುಗಿದ ಮಕ್ಕಳಿಗೆ ಸಂಸ್ಕಾರ ಶಿಬಿರ ಏರ್ಪಡಿಸಲಾಗಿತ್ತು.

ಹಂಸಗಾಮಿನಿ ಮಹಿಳಾ ಸಂಘದಿಂದ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ನೂರಾರು ಶ್ರಾವಕ ಸ್ರಾವಕಿಯರು ಭಾಗವಹಿಸಿದ್ದರು.