ಸುಸ್ಥಿರ ದೇಶಕ್ಕಾಗಿ ಎಲ್ಲರ ಮತದಾನ ಅಗತ್ಯ: ಭೋಸರಾಜು

| Published : Sep 16 2025, 12:04 AM IST

ಸುಸ್ಥಿರ ದೇಶಕ್ಕಾಗಿ ಎಲ್ಲರ ಮತದಾನ ಅಗತ್ಯ: ಭೋಸರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರಜಾಪ್ರಭುತ್ವ ಇತಿಹಾಸವನ್ನು ಹೊಂದಿದಂತಹ ಭಾರತದಲ್ಲಿ ಜನಿಸಲು ನಾವೇ ಪುಣ್ಯವಂತರು. ದೇಶ ಅಭಿವೃದ್ಧಿಯಾಗುತ್ತಿದೆ, ಜನಸಂಖ್ಯೆಯಲ್ಲಿ ವ್ಯತ್ಯಾಸ ಕಾಣುತ್ತಿದೆ. ದೇಶವು ಸುಸ್ಥಿರವಾಗಿದೆ. ಜಾತಿ, ಧರ್ಮ ಭೇದಭಾವ ಇಲ್ಲದೆ ಹೀಗೆ ಸಾಗಬೇಕೆಂದರೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಯೂ ಮತ ಚಲಾಯಿಸಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಹಲವು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತಕ್ಕೆ ಉತ್ತಮ ಸಂವಿಧಾನ ನೀಡಿದ್ದಾರೆ. ಪ್ರಜಾಪ್ರಭುತ್ವವನ್ನು ನಾಯಕರು ಮಾತ್ರವಲ್ಲ ಸಾರ್ವಜನಿಕರು ಕಾಪಾಡಬೇಕು ಎಂದು ತಿಳಿಸಿದರು.

ನಗರದ ಗುಡ್ಡೆಮನೆ ಅಪ್ಪಯ್ಯ ಗೌಡ ಸ್ಮಾರಕ ಬಳಿ ಅಂಬೇಡ್ಕರ್ ಸ್ಮಾರಕ ನಿರ್ಮಿಸಲು ಗಣ್ಯರಿಂದ ಸ್ಥಳ ವೀಕ್ಷಿಸಲಾಯಿತು.

ಪ್ರಜಾಪ್ರಭುತ್ವದಿಂದ ಭಯರಹಿತ ವಾತಾವರಣ:

ಮುಖ್ಯ ಭಾಷಣಕಾರರಾಗಿ ಆಗಮಿಸಿದ ಎಫ್‌ಎಂಕೆಎಂಸಿ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀಧರ್ ಮಾತನಾಡಿ, ರಾಷ್ಟ್ರಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ನಮ್ಮ ಭಾರತ ಸಂವಿಧಾನ ತಲುಪಿದ್ದು, ಇಂತಹ ಮಹತ್ವಪೂರ್ಣ ಘಟನೆಯು ಭಾರತವನ್ನು ವಿಶ್ವದಾದ್ಯಂತ ಗುರುತಿಸಲು ಸಾಧ್ಯವಾಗಿದ್ದು ಸಂತೋಷಕರ ಸಂಗತಿಯಾಗಿದೆ ಎಂದರು.ಜಾತಿ, ಧರ್ಮ, ಮತದ ಯಾವುದನ್ನು ಲೆಕ್ಕಿಸದೆ ಸಾರ್ವತ್ರಿಕ ಚುನಾವಣೆಯ ಮೂಲಕ ನಡೆಯುತ್ತಿರುವ ಭಾರತದ ಆಡಳಿತ ವ್ಯವಸ್ಥೆ ಅತ್ಯಂತ ಪ್ರಬಲವಾಗಿದೆ. ಭಯ ಇಲ್ಲದ ವಾತಾವರಣ ಸ್ಥಾಪಿಸಬೇಕಾದರೆ ದೇಶದ ಒಳಗೆ ಪ್ರಜಾಪ್ರಭುತ್ವ ಶಕ್ತಿಶಾಲಿಯಾಗಿ ಪರಿಣಾಮ ಬೀರಬೇಕು ಎಂದು ನುಡಿದರು.

ಡಿ.ಎಸ್.ಎಸ್ ಸಂಚಾಲಕ ದಿವಾಕರ್ ಮಾತನಾಡಿ, ಅಂಬೇಡ್ಕರ್ ಭವನ ಸ್ಥಾಪನೆಗೆ ಮೊದಲು ಗುರುತಿಸಲಾದ ಸ್ಥಳವು ಸಮಿತಿಗೆ ಅಸಮಾಧಾನಕರವಾಗಿದ್ದು, ಬೇರೆ ಸ್ಥಳವನ್ನು ನಿಗದಿಪಡಿಸಬೇಕೆಂದು ಗಣ್ಯರಲ್ಲಿ ಮನವಿ ಮಾಡಿದರು.ಈ.ರಾಜು ಮತ್ತು ತಂಡದವರು ಸಂವಿಧಾನ ಕುರಿತು ಹಾಡು ಹಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ತೀತಿರ ಧರ್ಮದ ಉತ್ತಪ್ಪ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಂದ್ರಿರ ಮೋಹನ್ ದಾಸ್, ನಗರಸಭೆ ಸದಸ್ಯ ಸತೀಶ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಸಿಇಒ ಆನಂದ್ ಪ್ರಕಾಶ್‌ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶೇಖರ್, ದಲಿತ ಸಂಘರ್ಷ ಸಮಿತಿ ಪ್ರಮುಖರಾದ ವೀರಭದ್ರಯ್ಯ, ದೀಪಕ್, ರಾಜು, ಜನಾರ್ದನ, ಜಗದೀಶ್, ಮಡಿಕೇರಿ ತಾಲೂಕು ತಹಸೀಲ್ದಾರ್ ಶ್ರೀಧರ್, ಡಿಎಸ್‌ಎಸ್ ಸಂಚಾಲಕ ದಿವಾಕರ್, ಮೋಹನ್ ಮೌರ್ಯ, ದೀಪಕ್ ಪೊನ್ನಪ್ಪ, ಗಣೇಶ್, ಗೋಪಾಲ್ ಮತ್ತಿತರರು ಇದ್ದರು.ಅಂಬೇಡ್ಕರ್ ವಸತಿ ಶಾಲೆ ಮಕ್ಕಳು ನಾಡಗೀತೆ ಹಾಡಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಖರ್ ಸ್ವಾಗತಿಸಿ, ವಂದಿಸಿದರು.--------------

ಪ್ರಜಾಪ್ರಭುತ್ವ ಆಡಳಿತದ ಮೇಲೆ ಯುವ ಪೀಳಿಗೆ ಒಲವು ಮೂಡಿಸುವ ಕಾರ್ಯಕ್ರಮ ಹೆಚ್ಚಿಸಬೇಕು. ರಾಜಕೀಯದ ಆಡಳಿತ ಕುರಿತು ಶಿಕ್ಷಣವನ್ನು ನೀಡಬೇಕು. ಯುವ ಪೀಳಿಗೆಯನ್ನು ಸೇರಿಸಿಕೊಂಡು ರಾಜಕೀಯ ಕಾರ್ಯಕ್ರಮಗಳನ್ನು ನಡೆಸುವಂತಾಗಬೇಕು. ಆಗಲೇ ರಾಜ್ಯವು ಸುಸ್ಥಿರವಾಗಿರುವುದು.

।ಎನ್.ಎಸ್.ಭೋಸರಾಜು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ