ವಿಜಯಪುರ: ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಅಮೆಚೂರ ಸೈಕ್ಲಿಂಗ್ ಅಸೋಸಿಯೇಶನ್ ಹಾಗೂ ವಿಶಾಲ್ ಸೈಕಲ್ ಮಹಾಲ್ ಸಹಯೋಗದಲ್ಲಿ ವಿಶ್ವ ಬೈಸಿಕಲ್ ದಿನಾಚರಣೆ ನಿಮಿತ್ತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಸೈಕ್ಲಿಂಗ್ ಜಾಥಾ ನಡೆಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಸದೃಢ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ನಿತ್ಯ ಸೈಕಲ್ ಓಡಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ರಾಜ್ಯ ಸೈಕ್ಲಿಂಗ್ ಅಸೋಸಿಯೇನ್ ಅಧ್ಯಕ್ಷ ರಾಜು ಬಿರಾದಾರ ಹೇಳಿದರು.

ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಅಮೇಚೂರ ಸೈಕ್ಲಿಂಗ್ ಅಸೋಸಿಯೇಶನ್ ಹಾಗೂ ವಿಶಾಲ್ ಸೈಕಲ್ ಮಹಾಲ್ ಸಹಯೋಗದಲ್ಲಿ ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ಸೈಕ್ಲಿಂಗ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

1868ರಲ್ಲಿ ಸೈಕ್ಲಿಂಗ್ ಕ್ರೀಡೆಯಾಗಿ ಪರಿವರ್ತನೆಯಾಗಿ ಭಾರತ ದೇಶಕ್ಕೆ 1938 ರಲ್ಲಿ ಪಾದಾರ್ಪಣೆಯಾಯಿತು. ಬಳಿಕ 70 ರ ದಶಕದಲ್ಲಿ ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಸೈಕ್ಲಿಂಗ್ ಕ್ರೀಡೆಗೆ ಹೆಚ್ಚಿನ ಪ್ರಾಧಾನ್ಯತೆ ಸಿಕ್ಕಿತು. ಇದರಿಂದಾಗಿ ಅವಿಭಜಿತ ವಿಜಯಪುರ ಜಿಲ್ಲೆಯ ಸೈಕ್ಲಿಸ್ಟಟ ಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಜಿಲ್ಲೆಯ ಕೀರ್ತಿ ಬೆಳಗಿಸಿದ್ದಾರೆ. ಈ ಕ್ರೀಡೆ ಕೇವಲ ಸೈಕ್ಲಿಸ್ಟ್ ಗಳಿಗೆ ಮಾತ್ರವಲ್ಲ. ಜನಸಾಮಾನ್ಯರು ಸೈಕಲ್ ನಿತ್ಯ ಬಳಸಬಹುದಾಗಿದೆ. ನಿತ್ಯ ಸೈಕಲ್ ಸಂಚಾರ ಮಾಡುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ನಿತ್ಯವೂ ಸೈಕಲ್ ಸಂಚಾರ ಮಾಡುವುದರಿಂದ ಈಗಿನ ಬಿಪಿ ಮತ್ತು ಸಕ್ಕರೆ ಕಾಯಿಲೆಗಳಿಂದ ದೂರವಿದ್ದು, ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದರು.

ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಮಾತನಾಡಿ, ಇತರೇ ಕ್ರೀಡೆಗಳಿಗಿಂತ ಇಂದಿನ ದಿನಗಳಲ್ಲಿ ಸೈಕ್ಲಿಂಗ್ ಕ್ರೀಡೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಸೈಕ್ಲಿಂಗ್ ಕ್ರೀಡೆಯಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ, ಜಿಲ್ಲೆಯ ಕೀರ್ತಿ ಹೆಚ್ಚಿಸಿ, ಸದೃಢ ಆರೋಗ್ಯ ಜೀವನ ನಿರ್ವಹಣೆಗೆ ಈ ಕ್ರೀಡೆ ಅತ್ಯುಪಯುಕ್ತ ಎಂದರು.

ನಗರದ ಡಾ. ಬಿ.ಆರ್.ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ಸೈಕ್ಲಿಂಗ್ ಜಾಥಾಕ್ಕೆ ರಾಜ್ಯ ಸೈಕ್ಲಿಂಗ್ ಹಸಿರು ನಿಶಾನೆ ತೋರಿಸುವುದರ ಮೂಲಕ ಜಾಥಾಕ್ಕೆ ಚಾಲನೆ ನೀಡಲಾಯಿತು. ಡಾ.ಬಿ.ಆರ್.ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ಜಾಥಾ, ಗೋಲಗುಂಬಜ್, ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಗಾಂಧಿ ವೃತ್ತ, ಶಿವಾಜಿ ವೃತ್ತ, ಇಬ್ರಾಹಿಂರೋಜಾ, ವಾಟರ್‌ಟ್ಯಾಂಕ್ ಮಾರ್ಗವಾಗಿ ಬಿಎಲ್‌ಡಿಇ ಕ್ಯಾಂಪಸ್ ತಲುಪಿತು. ಬಳಿಕ ಅಲ್ಲಿಂದ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ, ಪುನಃ ಗಾಂಧಿವೃತ್ತ ಮೂಲಕ ಜಿಲ್ಲಾ ಕ್ರೀಡಾಂಗಣಕ್ಕೆ ತಲುಪಿತು. ಜಾಥಾದಲ್ಲಿ ಆರ್‌ಕೆಎಂ ಕಾಲೇಜಿನ ವಿದ್ಯಾರ್ಥಿಗಳು, ಸೈಕ್ಲಿಂಗ್ ಕ್ರೀಡಾ ವಸತಿ ಶಾಲೆ, ವಿಸಿಜಿ ಗ್ರೂಪ್, ರೈಲ್ವೆ, ಪೊಲೀಸ್ ಇಲಾಖೆ ಕ್ರೀಡಾಪಟುಗಳು, ವಿಜಯಪುರ ಸೈಕ್ಲಿಂಗ್ ಗ್ರೂಪ್‌ನ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಕಾರ್ಯದರ್ಶಿ ಸೋಮಶೇಖರ ಸ್ವಾಮಿ, ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಶನ್ ಪದಾಧಿಕಾರಿಗಳಾದ ಗಂಗಾಧರ ಪತ್ತಾರ, ಸಂಜೀವ ಪಡತಾರೆ, ಸಂತೋಷ ಕುಮಾರ ಕತಕನಹಳ್ಳಿ, ಶ್ರೀಕಾಂತ ಮಠ, ಸೋಮಶೇಖರ ಮಠದ, ಲಕ್ಷ್ಮಣ ತೇರದಾಳ, ನಿಜಪ್ಪ ಎಂಟೆತ್ತು, ತರಬೇತುದಾರರಾದ ಅಲ್ಕಾ ಪಡತಾರೆ, ರಮೇಶ ರಾಠೋಡ, ಪೊಲೀಸ್‌ತಂಡದ ಆಸೀಫ್ ಅತ್ತಾರ ಹಾಗೂ ಇತರೇ ಸೈಕ್ಲಿಸ್ಟ್ ಗಳು ಉಪಸ್ಥಿತರಿದ್ದರು.