ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಆರೋಗ್ಯವಂತ ಜೀವನಕ್ಕೆ ಕ್ರೀಡೆಯೇ ಸಂಜೀವಿನಿ. ಪ್ರತಿಯೊಬ್ಬರೂ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ದಕ್ಷಿಣ ಶಾಲೆ ಆಶ್ರಯದಲ್ಲಿ 14 ವರ್ಷ ವಯೋಮಾನದ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಕೂಡ ಪ್ರಾಥಮಿಕ ಶಾಲಾ ಹಂತದಲ್ಲೆ ಕಬಡ್ಡಿ, ವಾಲಿಬಾಲ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದೆ. ಕ್ರೀಡಾಪಟುವಾಗಿ ಕ್ರೀಡೆಗಳು ಯಾವಾಗ ಬರುತ್ತವೆ ಎಂದು ಕಾಯತ್ತಿದ್ದೆವು. ಆ ಕಾಲದಲ್ಲಿ ಹೋಬಳಿ ಮಟ್ಟದಲ್ಲಿ ಎಲ್ಲೆ ನಡೆದರೂ ಕ್ರೀಡೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದೆವು ಎಂದರು.ಮಕ್ಕಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಎಷ್ಟು ಆಸಕ್ತಿ ಹೊಂದಿರುತ್ತೀರೊ ಸಾಂಸ್ಕೃತಿಕ, ಕ್ರೀಡೆಗಳಿಗೂ ಅಷ್ಟೆ ಆಸಕ್ತಿ ಹೊಂದಬೇಕು.ಕ್ರೀಡಾಪಟುಗಳು ದುಶ್ಚಟಗಳಿಂದ ದೂರವಿರಬೇಕು. ಕ್ರೀಡಾಪಟುಗಳು ಮಾನಸಿಕ ದೈಹಿಕವಾಗಿ ಸದೃಢವಾಗಿರಲು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕ್ರೀಡಾಪಟುಗಳಿಗೆ ವಿಶೇಷ ಸ್ಥಾನಮಾನ ಗೌರವವಿದೆ. ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಪ್ರತಿಭೆ ಸಾಮರ್ಥ್ಯ ಆಧರಿಸಿ ಸಹಕಾರ ನೀಡಬೇಕಾದುದು ನಮ್ಮ ಜವಾಬ್ದಾರಿ. ಪೋಷಕರು ಮತ್ತು ಶಿಕ್ಷಕರು ಕ್ರೀಡಾಪಟುಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.ಕಸಬಾ ಹೋಬಳಿ ವ್ಯಾಪ್ತಿಯ ವಿವಿಧ ಶಾಲೆಗಳ ಮಕ್ಕಳು ಶಿಕ್ಷಕರು ಕ್ರೀಡೆಯಲ್ಲಿ ಭಾಗವಹಿಸಿದ್ದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್.ಆನಂದ ಕುಮಾರ್, ಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ, ಎಲ್.ಎಸ್.ಧರ್ಮಪ್ಪ, ಲಕ್ಷ್ಮಣಗೌಡ, ದೈಹಿಕ ಶಿಕ್ಷಕ ಸುಂದರೇಶ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ವಿವಿಧ ಶಾಲೆಗಳ ದೈಹಿಕ ಶಿಕ್ಷಕರು ಇದ್ದರು.