ಪಾಂಡವಪುರ ತಾಲೂಕಿನ ಜನತೆ ಕೆಲವು ಬದಲಾವಣೆ ಮಾಡಿಕೊಂಡು ಮೊದಲು ಫ್ಲೆಕ್ಸ್ ಸಂಸ್ಕೃತಿಗೆ ಕಡಿವಾಣ ಹಾಕಬೇಕು, ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸುವ ಕೆಲಸವಾಗಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಶ್ರೀ ಬಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ, ವಕೀಲ ಅರವಿಂದ್ ರಾಘವನ್ ಹೇಳಿದರು.

ತಾಲೂಕಿನ ಹಾಗನಹಳ್ಳಿಯಲ್ಲಿ ಇರುವ ಉಚಿತ ವೃದ್ಧಾಶ್ರಮ ಅಮ್ಮನ ಆಸರೆ ಚಾರಿಟಬಲ್ ಸೇವಾ ಟ್ರಸ್ಟ್ ವತಿಯಿಂದ ನಡೆದ ಎರಡನೇ ವರ್ಷದ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನ ಸರ್ಕಾರಿ ಶಾಲೆಗಳು ಹಾಗೂ ಅಂಗನವಾಡಿಗಳ ಅಭಿವೃದ್ಧಿಗಾಗಿ ಟ್ರಸ್ಟ್ ವತಿಯಿಂದ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದೇವೆ. ತಾಲೂಕಿನಲ್ಲಿ ಸುಮಾರು 27 ಶಾಲೆಗಳಿಗೆ ಖಾಸಗಿ ಶಿಕ್ಷಕರಿಗೆ ಟ್ರಸ್ಟ್‌ನಿಂದ ನೇಮಿಸಿ ಸಂಬಳ ನೀಡುತ್ತಿದ್ದೇನೆ ಎಂದರು.

ಜೊತೆಗೆ ಶಾಲೆಗಳ ಕಟ್ಟಡ, ಶೌಚಾಲಯ, ಡಿಜಿಟಲ್ ಗ್ರಂಥಾಲಯ ಸೇರಿದಂತೆ ಬ್ಯಾಂಡ್‌ಸೆಟ್ ಸಾಮಗ್ರಿಗಳು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ, ಜತೆಗೆ ಕೆಲವು ಅಂಗನವಾಡಿ ಮಕ್ಕಳ ಅಗತ್ಯ ಮೂಲಸೌಕರ್ಯಕ್ಕೆ ನೆರವು ನೀಡಿದ್ದೇನೆ ಎಂದರು.

ತಾಲೂಕಿನ ಜನತೆ ಕೆಲವು ಬದಲಾವಣೆ ಮಾಡಿಕೊಂಡು ಮೊದಲು ಫ್ಲೆಕ್ಸ್ ಸಂಸ್ಕೃತಿಗೆ ಕಡಿವಾಣ ಹಾಕಬೇಕು, ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸುವ ಕೆಲಸವಾಗಬೇಕು ಎಂದರು.

ಚಿತ್ರನಟ ನರಹರಿರಾಜ್ ಮಾತನಾಡಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪುಸ್ತಕ ಪ್ರೇಮಿ ಅಂಕೇಗೌಡ, ಶ್ಯಾದನಹಳ್ಳಿ ಚಲುವರಾಜ್, ಮಹದೇವಪ್ಪ, ವಿಶ್ವರುದ್ರ ಸೇರಿದಂತೆ ಅನೇಕರಿಗೆ ಅಭಿನಂದಿಸಿದರು.

ಸಮಾರಂಭದಲ್ಲಿ ಅಮ್ಮನ ಆಸರೆ ಚಾರಿಟಬಲ್ ಸೇವಾ ಟ್ರಸ್ಟ್ ಸಂಸ್ಥಾಪಕ ಪ್ರಭುಸ್ವಾಮಿ, ಪುಷ್ಪು ಉಮೇಶ್, ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ಫ್ರೆಂಚ್‌ರಾಕ್ಸ್ ಲಯನ್ ಕ್ಲಬ್ ಅಧ್ಯಕ್ಷ ಸ್ವಾಮೀಗೌಡ, ಬಸವೇಗೌಡ, ಡಾ.ರಾಗಿಮುದ್ದನಹಳ್ಳಿ ನಾಗೇಶ್, ಕಟ್ಟೇರಿ ರಾಜೇಂದ್ರ, ಧರ್ಮಸ್ಥಳ ಯೋಜನಾಧಿಕಾರಿ ಯಶ್ವಂತ್, ಅರ್ಜನ್, ಶ್ರೇಯಸ್, ಶಿವಕುಮಾರ್ ಸೇರಿದಂತೆ ಹಲವರು ಇದ್ದರು.