ಸಾರಾಂಶ
ಹಿರೇಕೆರೂರು:ಬಾಲ್ಯ ವಿವಾಹ ಅತ್ಯಂತ ಘೋರ ಅಪರಾಧವಾಗಿದೆ. ಇದರ ಬಗ್ಗೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಜಾರಿಯಲ್ಲಿದ್ದು, ಇದನ್ನು ತಡೆಗಟ್ಟಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಹಿರೇಕೆರೂರು ಜೆ.ಎಮ್.ಎಫ್.ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶೆ ನಾಗರತ್ನಮ್ಮ ಹೇಳಿದರು.ಪಟ್ಟಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಅಭಿಯೋಜನೆ ಇಲಾಖೆ, ವಕೀಲರ ಸಂಘದ ವತಿಯಿಂದ ಬಾಲ್ಯ ವಿವಾಹ ಪದ್ಧತಿ ವಿರೋಧಿ ದಿನದ ಅಂಗವಾಗಿ ಕಾಲ್ನಡಿಗೆ ಜಾಗೃತಿ ಜಾಥಾ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಾಲ್ಯ ವಿವಾಹದಿಂದ ಮಹಿಳೆಯರ ಆರೋಗ್ಯ ಮತ್ತು ಮನಸ್ಸಿನ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಹಾಗೂ ಅವರಿಗೆ ಸಂಪೂರ್ಣವಾಗಿ ತಮ್ಮ ಜವಾಬ್ದಾರಿ ಬಗ್ಗೆ ಅರಿವು ಇರುವುದಿಲ್ಲ. ಯಾರೇ ಇಂತಹ ಕೃತ್ಯಕ್ಕೆ ಕೈಹಾಕಿದರೆ ತಕ್ಷಣ ರಕ್ಷಣಾ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸವಿತಾ ಎನ್. ಮುಖುಲ್, ತಹಸೀಲ್ದಾರ್ ಎಚ್. ಪ್ರಭಾಕರಗೌಡ, ವಕೀಲರ ಸಂಘದ ಪದಾಧಿಕಾರಿಗಳಾದ ಕೆ.ಬಿ. ಬಾಳಿಕಾಯಿ, ಎಸ್.ಬಿ. ತಿಪ್ಪಣ್ಣನವರ್, ಎಚ್.ಆರ್. ಬೆಳ್ಳೂರ, ಎಸ್.ಎಚ್.ಪಾಟೀಲ, ಜಿ.ವಿ.ಕುಲಕರ್ಣಿ, ದುರಗೇಶ ತಿರಕಪ್ಪನವರ, ಎಸ್.ಎನ್. ಮುಲ್ಲಾ, ಎ.ಎ. ಯಲಿವಾಳ, ಬಿ.ಜಿ.ಪಾಟೀಲ, ಎಲ್.ಎಚ್. ಕಳ್ಳಿಮನಿ ಹಾಗೂ ವಕೀಲರು, ಕೋರ್ಟಿನ ಸಿಬ್ಬಂದಿಯವರು ಇದ್ದರು.