ಕನ್ನಡಪ್ರಭ ವಾರ್ತೆ ಯಳಂದೂರು

ನಮ್ಮ ದೇಶದಲ್ಲಿ ಮೀಸಲಾತಿ ಪಡೆಯದ ಸಮುದಾಯವೇ ಇಲ್ಲ. ಆದರೆ ಇದನ್ನು ನಮಗೆ ಸಂವಿಧಾನದ ಮೂಲಕ ಬಳುವಳಿಯಾಗಿ ನೀಡಿದ ಅಂಬೇಡ್ಕರ್‌ರನ್ನು ಅರಿಯುವ ಕೆಲಸವನ್ನು ಕೇವಲ ಕೆಲವೇ ವರ್ಗಗಳು ಮಾಡುತ್ತಿದ್ದು ಪ್ರತಿಯೊಬ್ಬರೂ ಇವರನ್ನು ಅರಿಯಬೇಕು. ಅವರ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.

ಅವರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ಸಮತಾ ಸೈನಿಕ ದಳದ ವತಿಯಿಂದ ಹಮ್ಮಿಕೊಂಡಿದ್ದ ಪ್ರಸ್ತುತ ಎಲ್ಲಾ ಸವಾಲುಗಳಿಗೆ ಡಾ.ಬಿ.ಆರ್. ಅಂಬೇಡ್ಕರ್ ಚಿಂತನೆಗಳು ಹಾಗೂ ಭಾರತ ಸಂವಿಧಾನವೇ ಪರಿಹಾರ ಎಂಬ ವಿಶೇಷ ಉಪನ್ಯಾಸ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಸಂವಿಧಾನ ನಮಗೆ ಎಲ್ಲವನ್ನೂ ನೀಡಿದೆ. ಪ್ರತಿಯೊಂದು ಜಾತಿಗೂ ಸಹ ಮೀಸಲಾತಿ ಲಭಿಸುತ್ತಿದೆ. ಇದನ್ನು ನಾವು ಜನಸಂಖ್ಯೆಯ ಆಧಾರದ ಮೇಲೆ ಹಂಚುವ ಪರಿಸ್ಥಿತಿ ಪ್ರಸ್ತುತವಾಗಿದೆ. ಹಾವನೂರು ಹಾಗೂ ಮಂಡಲ್ ಆಯೋಗಗಳ ಮೂಲಕ ಎಲ್ಲರಿಗೂ ಇದರ ಉಪಯೋಗವಾಗುತ್ತಿದೆ. ಇತ್ತೀಚೆಗೆ ಅನೇಕ ಸರ್ಕಾರಿ ಸಂಸ್ಥೆಗಳು ಖಾಸಗೀಕರಣವಾಗುತ್ತಿದ್ದು ಇದರಿಂದ ಧಮನಿತರಿಗೆ ಉದ್ಯೋಗ ನಷ್ಟವಾಗುತ್ತಿದೆ. ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀಡುವ ಕೆಲಸವಾಗಬೇಕು. ಸಂವಿಧಾನ ನಮಗೆ ಸಮಾನತೆಯನ್ನು ನೀಡಿದ್ದು ಇದನ್ನು ಗೌರವಿಸುವ ಪರಿಪಾಠವನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಚೇತನ ಬುದ್ಧ ವಿಹಾರದ ಮನೋರಖ್ಖಿತ ಬಂತೇಜಿ ಮಾತನಾಡಿ, ನಾವು ಸಂವಿಧಾನದಡಿಯಲ್ಲಿ ಕೆಲಸ ಮಾಡುತ್ತಿದ್ದು ನಮಗೆ ಸದಾ ಜಾಗೃತ ಮನಸ್ಸು ಇರಬೇಕು. ಜೀವ ಇದ್ದು ಸತ್ತಂತಿದ್ದ ಜೀವನಕ್ಕೆ ಅಂಬೇಡ್ಕರ್ ಹೊಸ ಭಾಷ್ಯಯನ್ನು ಬರೆದಿದ್ದರು. ಇದನ್ನು ಉಳಿಸಿಕೊಳ್ಳಲು ನಮ್ಮ ಮನಸ್ಸು ಸದಾ ಜಾಗೃತವಾಗಿರಬೇಕು. ಇದನ್ನು ವಿಚಲಿತಗೊಳಿಸುವ ಶಕ್ತಿಗಳನ್ನು ತಡೆಯುವ ಕೆಲಸವನ್ನು ಮಾಡಬೇಕು. ಸಂವಿಧಾನ ವಿರೋಧಿಸಿ ನಮ್ಮ ದೇಶ ಆಳಲು ಬಯಸುವರಿಗೆ ಅವಕಾಶ ನೀಡಬಾರದು, ನಾವು ಪ್ರಗತಿ ಪರ ಹಾಗೂ ಪ್ರತಿಗಾಮಿ ಎರಡೂ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು, ಶೀಲವಂತರಾಗಿ ಬುದ್ಧ ಮಾರ್ಗದಲ್ಲಿ ನಡೆಯಬೇಕು ಎಂದು ಕರೆ ನೀಡಿದರು.

ಸಮತಾದಳದ ರಾಷ್ಟ್ರೀಯ ಅಧ್ಯಕ್ಷ ಡಾ.ಎಂ. ವೆಂಕಟಸ್ವಾಮಿ, ರಾಜ್ಯಾಧ್ಯಕ್ಷ ಆರ್.ಪಿ.ಐ ಸತೀಶ್ ಹಾಸನ್, ಜೆಡಿಎಸ್ ಮುಖಂಡ ಬಿ. ಪುಟ್ಟಸ್ವಾಮಿ, ಮಾತನಾಡಿದರು. ಪಪಂ ನಾಮನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಪಿ.ಸಿ. ಶ್ರೀಕಂಠಸ್ವಾಮಿ, ಮುನವ್ವರ್ ಬೇಗ್, ಮಾಂಬಳ್ಳಿ ರಾಮು, ಎಸ್‌ಎಸ್‌ಡಿ ಜಿಲ್ಲಾಧ್ಯಕ್ಷ ಎಸ್. ಮದ್ದೂರು ಸುರೇಶ್, ಪ್ರಧಾನ ಕಾರ್ಯದರ್ಶಿ ರಾಜು ಕೆಸ್ತೂರು, ಅಂಬಳೆ ಮಹದೇವು, ತಾಲೂಕು ಅಧ್ಯಕ್ಷ ವೈ.ಎಲ್. ಸಿದ್ಧರಾಜು ಸೇರಿದಂತೆ ಅನೇಕರು ಇದ್ದರು.