ಮಾನವೀಯ ಕಳಕಳಿಯಿಂದ ಜಗತ್ತಿನಲ್ಲಿ ಶ್ರೇಷ್ಠತೆ

| Published : Sep 14 2025, 01:04 AM IST

ಸಾರಾಂಶ

ಅಕ್ಕ-ಪಕ್ಕದವರು ಸಂಕಷ್ಟಕ್ಕೆ ಒಳಪಟ್ಟಾಗ ಅವರ ನೆರವಿಗೆ ಧಾವಿಸುವ ಮೂಲಕ ಮಾನವೀಯತೆ, ಸಮಾಜದ ಪರ ಕಾಳಜಿ ಹೊಂದಬೇಕು.

ಕೊಪ್ಪಳ:

ಜಗತ್ತಿನಲ್ಲಿ ಶ್ರೇಷ್ಠತೆ ಮಾನವೀಯ ಕಳಕಳಿಯಿಂದ ಬರುತ್ತದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಸಭಾಪತಿ ಸೋಮರಡ್ಡಿ ಅಳವಂಡಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಮತ್ತು ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರಥಮ ಚಿಕಿತ್ಸೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಕ್ಕ-ಪಕ್ಕದವರು ಸಂಕಷ್ಟಕ್ಕೆ ಒಳಪಟ್ಟಾಗ ಅವರ ನೆರವಿಗೆ ಧಾವಿಸುವ ಮೂಲಕ ಮಾನವೀಯತೆ, ಸಮಾಜದ ಪರ ಕಾಳಜಿ ಹೊಂದಬೇಕು ಎಂದರು.

ಮತ್ತೊಬ್ಬರ ಸಮಸ್ಯೆಗೆ ಸ್ಪಂದಿಸಿದಾಗ ಜೀವನದ ದಾರಿ ಸುಗಮವಾಗುತ್ತದೆ ಎಂದ ಅವರು, ವಿದ್ಯಾರ್ಥಿಗಳು ಪ್ರಶ್ನಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಚಿಂತನೆಗಳು ಸಮಾಜ ಮುಖಿಯಾಗಿರಬೇಕು ಎಂದು ಹೇಳಿದರು.

ಕೊಪ್ಪಳ ರೆಡ್‌ಕ್ರಾಸ್ ವತಿಯಿಂದ 1.25 ಲಕ್ಷ ಜನರಿಗೆ ರಕ್ತ ಕೊಟ್ಟಿರುವ ಜತೆಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೆರವಾಗಿದೆ ಎಂದರು.

ಜಿಲ್ಲಾ ಶಾಖೆಯ ನಿರ್ದೇಶಕರಾದ ಡಾ. ಶಿವನಗೌಡ ಪಾಟೀಲ್, ವೈದಾಧಿಕಾರಿ ಡಾ. ಕವಿತಾ ಹ್ಯಾಟಿ ವಿಶೇಷ ಉಪನ್ಯಾಸ ನೀಡಿದರು.

ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಜಿಲ್ಲಾ ಶಾಖೆಯ ನಿರ್ದೇಶಕ ಮತ್ತು ಸಂಯೋಜಕ ರಾಜೇಶ್ ಯಾವಗಲ್, ಕಾಲೇಜಿನ ರೆಡ್‌ಕ್ರಾಸ್ ಘಟಕದ ಸಂಚಾಲಕ ಡಾ. ಅಶೋಕ ಕುಮಾರ, ಶಿಕ್ಷಣ ಪ್ರೇಮಿ ಬಿ.ಜಿ. ಕರಿಗಾರ, ಹಿರಿಯ ಪ್ರಾಧ್ಯಾಪಕರಾದ ಡಾ. ಪ್ರದೀಪ್ ಕುಮಾರ, ಪ್ರೊ. ವಿಠೋಬ, ಡಾ. ನರಸಿಂಹ, ಕೊಪ್ಪಳ ರೆಡ್‌ಕ್ರಾಸ್ ಸಂಸ್ಥೆ ಯ ದೇವೇಂದ್ರಪ್ಪ, ಡಾ. ಅಶೋಕಕುಮಾರ, ಅಕ್ಕಮ್ಮ, ಡಾ. ಪ್ರದೀಪಕುಮಾರ ಇದ್ದರು.