ಶಸ್ತ್ರ ಚಿಕಿತ್ಸೆ, ಹೆರಿಗೆ ಇತರೆ ಪ್ರಮುಖ ಚಿಕಿತ್ಸೆಯನ್ನು ತಾಲೂಕಿನ ಹರದನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ವಹಿಸಲು ಉದ್ದೇಶಿಸಲಾಗಿದೆ

ಕನ್ನಡಪ್ರಭ ವಾರ್ತೆ ಸಾಲಿಗ್ರಾಮ

ಉದ್ದೇಶಿತ ತಾಲೂಕು ಆಸ್ಪತ್ರೆ ನಿರ್ಮಾಣ ಸಂಬಂಧ ಹಾಲಿಯಿರುವ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡವನ್ನು ನೆಲಸಮ ಮಾಡಬೇಕಾಗಿರುವುದರಿಂದ ತಾತ್ಕಾಲಿಕ ಆಸ್ಪತ್ರೆ ತೆರೆಯಲು ತಾಲೂಕು ಆರೋಗ್ಯ ಅಧಿಕಾರಿಯವರ ನೇತೃತ್ವದಲ್ಲಿ ರಕ್ಷಾ ಸಮಿತಿ ಸಭೆ ನಡೆಯಿತು. ತಾಲೂಕು ಆರೋಗ್ಯಧಿಕಾರಿ ಡಾ. ಸಂತೋಷ್ ಅವರ ಉಪಸ್ಥಿತಿಯಲ್ಲಿ ನಡೆದ ರಕ್ಷಾ ಸಮಿತಿ ಸಭೆಯಲ್ಲಿ ಹಾಲಿ ಇರುವ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ಕೆಡವುದಕ್ಕೂ ಮುನ್ನ ತಾತ್ಕಾಲಿಕ ಆಸ್ಪತ್ರೆಯನ್ನು ಇಲ್ಲಿನ ಶಾದಿಮಹಲ್ ನಲ್ಲಿ ತೆರೆಯಲು ತೀರ್ಮಾನಿಸಿತು.

ಅಲ್ಲದೆ ಶಸ್ತ್ರ ಚಿಕಿತ್ಸೆ, ಹೆರಿಗೆ ಇತರೆ ಪ್ರಮುಖ ಚಿಕಿತ್ಸೆಯನ್ನು ತಾಲೂಕಿನ ಹರದನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ವಹಿಸಲು ಉದ್ದೇಶಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.

ಉದ್ದೇಶಿತ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ 43 ಕೋಟಿ ರೂ. ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕಟ್ಟಡ ಕಾಮಗಾರಿ ಶುರುವಾಗಲಿದೆ. ಇದಕ್ಕೂ ಮುನ್ನ ಈ ತಿಂಗಳಾಂತ್ಯಕ್ಕೆ ಸಮುದಾಯ ಆರೋಗ್ಯ ಕೇಂದ್ರವನ್ನು ತಾತ್ಕಾಲಿಕವಾಗಿ ಶಾದಿ ಮಹಲ್ ಗೆ ಸ್ಥಳಾಂತರಿಸಿ ಕಟ್ಟಡವನ್ನು ಕೆಡವಲಾಗುವುದು. ಒಪಿಡಿ, ಡ್ರೆಸ್ಸಿಂಗ್, ಎಕ್ಸರೇ, ಲ್ಯಾಬ್ ಸೇವೆಯನ್ನು ಶಾದಿ ಮಹಲ್ ನಲ್ಲಿ ನೀಡಲಾಗುವುದು. ಶಸ್ತ್ರಚಿಕಿತ್ಸೆ, ಹೆರಿಗೆ ಸೇವೆಯನ್ನು ಹರದನಹಳ್ಳಿ ಆಸ್ಪತ್ರೆಯಲ್ಲಿ ಮಾಡಲಾಗುವುದು ಎಂದು ವೈದ್ಯಾಧಿಕಾರಿ ಡಾ. ದೇವಿಕ ತಿಳಿಸಿದರು.

ರಕ್ಷಾ ಸಮಿತಿಯ ಸದಸ್ಯರಾದ ಸಣ್ಣಪ್ಪ, ಬಸವರಾಜು, ಕೆ. ದಿನೇಶ್, ಮಂಜೇಗೌಡ, ಅಶ್ವಿನಿ ಪ್ರಭಾಕರ್, ಮೂರ್ತಿ, ಗೋಪಾಲ್, ಆಶಾ ಕಾರ್ಯಕರ್ತರು, ಆಸ್ಪತ್ರೆ ಸಿಬ್ಬಂದಿ ಇದ್ದರು.