ಸಾರಾಂಶ
ಧಾರವಾಡ:
ಈ ಬಾರಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಪ್ರಯತ್ನಗಳು ನಡೆದಿದ್ದು, ವಿದ್ಯಾರ್ಥಿಗಳು ಜನರ ನಿರೀಕ್ಷೆ ಹುಸಿ ಮಾಡಬಾರದು ಎಂದು ಶಿವಲೀಲಾ ಕುಲಕರ್ಣಿ ಹೇಳಿದರು.ಇಲ್ಲಿಯ ಪ್ರತಿಭಾ ಕಾಲನಿಯಲ್ಲಿರುವ ಶಾರದಾ ದೇವಿ ಟ್ಯುಟೋರಿಯಲ್ಸ್ನಲ್ಲಿ ಎಸ್ಸೆಸ್ಸೆಲ್ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಡೆದ ಎರಡು ದಿನಗಳ ವಿಶೇಷ ಕಾರ್ಯಾಗಾರವನ್ನು ಬುಧವಾರ ಉದ್ಘಾಟಿಸಿದ ಅವರು, ಈ ಹಿಂದೆ ತಾವು ಮುತುವರ್ಜಿ ವಹಿಸಿ ಪಾಸಿಂಗ್ ಪ್ಯಾಕೆಜ್ ಸೇರಿದಂತೆ ಹಲವು ಪ್ರಯತ್ನಗಳ ಫಲವಾಗಿ ಧಾರವಾಡ ಒಂದಂಕಿ ಸ್ಥಾನ ಪಡೆದಿತ್ತು. ಇದಾದ ಬಳಿಕ ಈ ವರ್ಷವು ಉತ್ತಮ ಫಲಿತಾಂಶಕ್ಕಾಗಿ ನಾವು ಕಾಯುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಕಾರ್ಯಾಗಾರದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ತಮ್ಮ ಓದು ಹಾಗೂ ಜ್ಞಾನವನ್ನು ಪರೀಕ್ಷೆಯ ಓರೆಗೆ ಹಚ್ಚಬೇಕೆಂದರು.
ಹಿರಿಯ ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ದೊರಕಿದರೆ ಉತ್ತಮ ಫಲಿತಾಂಶ ಪಡೆಯುವುದರಲ್ಲಿ ಎರಡು ಮಾತಿಲ್ಲ. ಬರೀ ಎಸ್ಸೆಸ್ಸೆಲ್ಸಿ ಮಾತ್ರವಲ್ಲದೇ 1ನೇ ತರಗತಿಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರ ನೀಡಿದರೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಬಹುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.ಕಡಿಮೆ ಅವಧಿಯಲ್ಲಿ ಓದಿದ್ದದನ್ನು ಯಾವ ರೀತಿ ಮನನ ಮಾಡಿಕೊಳ್ಳಬೇಕು ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವ ಬಗೆಯನ್ನು ಸುರೇಶ ಕುಲಕರ್ಣಿ ಚಿತ್ರಗಳ ಮೂಲಕ ವಿವರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಮಾತನಾಡಿ, ಮಿಶನ್ ವಿದ್ಯಾಕಾಶಿ ಹೆಸರಿನಲ್ಲಿ ಇಲಾಖೆ ಈ ಬಾರಿ ಶಿಕ್ಷಕರು, ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ, ಕಾರ್ಯಾಗಾರ ಮಾಡಿದ್ದು ಉತ್ತಮ ಫಲಿತಾಂಶದ ನಿರೀಕ್ಷೆಗಳಿವೆ. ಇಲಾಖೆಗೆ ಪೂರಕವಾಗಿ ಶಿಕ್ಷಣ ಸಂಸ್ಥೆಗಳು, ಮಾಧ್ಯಮಗಳು ಕಾರ್ಯಾಗಾರ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.ಶಿಕ್ಷಣ ಇಲಾಖೆ ಸಂಯೋಜನಾಧಿಕಾರಿ ಎಸ್.ಎಂ. ಹುಡೇದಮನಿ, ಟುಟ್ಯೋರಿಯಲ್ ನಿರ್ದೇಶಕ ಎಚ್.ಎಚ್. ಮೇಟಿ, ಶಿಕ್ಷಣ ಇಲಾಖೆ ಸಂಯೋಜನಾಧಿಕಾರಿ ಬಸವರಾಜ ಚಿಕ್ಕೆರೂರ, ಶ್ರೀನಿವಾಸ ಸವಣೂರ, ಸಮನ್ವಯಾಧಿಕಾರಿ ಮಂಜುನಾಥ ಅಡಿವೇರ, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಬಸವರಾಜ ಆರೇರ ಇದ್ದರು.