ಸಾರಾಂಶ
ರಾಮನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಅವರ ಮೇಲೆ ಎಸ್ಐಟಿಗೆ ದೂರನ್ನು ನೀಡಬೇಕು ಎಂದು ಸಕಲೇಶಪುರದ ಎಪಿಎಂಸಿ ಮಾಜಿ ಅಧ್ಯಕ್ಷ ಕವನ್ ಗೌಡ ಆಗ್ರಹಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತನಿಖೆಗೆ ಎಸ್ಐಟಿಗೆ ದೂರು ನೀಡಲಿ
ಕನ್ನಡಪ್ರಭ ವಾರ್ತೆ ಹಾಸನರಾಮನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಅವರ ಮೇಲೆ ಎಸ್ಐಟಿಗೆ ದೂರನ್ನು ನೀಡಬೇಕು ಎಂದು ಸಕಲೇಶಪುರದ ಎಪಿಎಂಸಿ ಮಾಜಿ ಅಧ್ಯಕ್ಷ ಕವನ್ ಗೌಡ ಆಗ್ರಹಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ‘ಇತ್ತೀಚೆಗಷ್ಟೆ ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಅಲ್ಲಿಯ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಅಶ್ಲೀಲ ವಿಡಿಯೋ ಕಾಲ್ ಮಾಡುತ್ತಿರುವ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಇನ್ನೂ ಏಕೆ ಸುಮ್ಮನೆ ಕುಳಿತಿದೆ. ಇನ್ಫಾರ್ಮೇಷನ್ ಆಕ್ಟ್ ೬೭ ಎ ನಲ್ಲಿ ಈ ಕೃತ್ಯ ಎಸಗಿದವರಿಗೆ ಐದು ವರ್ಷಗಳ ಶಿಕ್ಷೆಯಾಗುವ ಸಾಧ್ಯತೆ ಇದೆ. ಹಾಸನ ಜಿಲ್ಲೆಯ ಪೆನ್ಡ್ರೈವ್ ಪ್ರಕರಣವನ್ನು ವಹಿಸಿಕೊಂಡಿರುವ ಎಸ್ಐಟಿಯು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಆರೋಪಿ ನವೀನ್ ನನ್ನು ಏಕೆ ಬಂಧಿಸಲಿಲ್ಲ. ಅವರು ಯಾರ ರಕ್ಷಣೆಯಲ್ಲಿ ಇದ್ದಾರೆ? ಕೂಡಲೇ ಬಂಧಿಸಿ ಸತ್ಯಾಂಶವನ್ನು ರಾಜ್ಯದ ಜನರ ಮುಂದಿಡಬೇಕು’ ಎಂದು ಆಗ್ರಹಿಸಿದರು.‘ಪೆನ್ಡ್ರೈವ್ ಎಲ್ಲಿಂದ ಬಂತು? ಯಾರು ಕೊಟ್ಟವರು ಎಂಬುದನ್ನು ರಾಜ್ಯದ ಜನರ ಮುಂದೆ ಇಡಬೇಕು. ಮಾಹಿತಿ ತಂತ್ರಜ್ಞಾನ ಅಧಿನಿಯಮ, ವಿದ್ಯುನ್ಮಾನ ನಮೂನೆಯಲ್ಲಿ ಅಶ್ಲೀಲವಾದ ಮಾಹಿತಿಯನ್ನು ಪ್ರಕಟಿಸುವುದು ಶಿಕ್ಷಾರ್ಹ ಅಪರಾಧ. ಲೈಂಗಿಕವಾಗಿ ಮುಚ್ಚು ಮರೆಯಿಲ್ಲದೆ ಕೃತ್ಯಗಳು ಮೊದಲಾದವುಗಳ ಒಳಗೊಂಡ ವಿಷಯಗಳನ್ನು ವಿದ್ಯುನ್ಮಾನ ನಮೂನೆ ಪ್ರಕಟಿಸುವುದು ಇಲ್ಲವೇ ಪ್ರಸರಣವಾಗಿ ಮಾಡುವುದಕ್ಕೆ ಶಿಕ್ಷೆಯ ಬಗ್ಗೆ ತಿಳಿಸಿರುತ್ತದೆ. ಕಾಂಗ್ರೆಸ್ ಪಕ್ಷವು ಕರ್ನಾಟಕ ಸರ್ಕಾರವನ್ನು ನಡೆಸುವುದ ಮರೆತು ವಿರೋಧ ಪಕ್ಷದ ರೀತಿ ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡಿದೆ. ಇದಕ್ಕಾಗಿಯೇ ಜೆಡಿಎಸ್ ಪಕ್ಷದ ವರಿಷ್ಠರು ಕ್ರಮ ಕೈಗೊಂಡಿದ್ದಾರೆ’ ಎಂದು ಕುಹಕವಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಲೋಹಿತ್, ಕ್ಯಾಮಾನಹಳ್ಳಿ ರಂಜಿತ್ ಇತರರು ಇದ್ದರು.