ಕನ್ನಡಪ್ರಭವಾರ್ತೆ ರಾಮನಾಥಪುರ ಈ ಕ್ಷಣವು ನನ್ನ ಜೀವನದ ಅವಿಸ್ಮರಣೀಯ ಕ್ಷಣವಾಗಿದೆ ಎಂದು ನಾಚಾರಮ್ಮ ಪ್ರಶಸ್ತಿ ಮತ್ತು ಲಯಕಲಾ ಸ್ಪರ್ಶಮಣಿ ಬಿರುದು ಸ್ವೀಕರಿಸಿದ ವಿದ್ವಾನ್‌ ಎ.ವಿ.ಆನಂದ್‌ ತಿಳಿಸಿದರು.ರಾಮನಾಥಪುರ ಹೋಬಳಿಯ ಸಂಗೀತ ಗ್ರಾಮವೆಂದೇ ಖ್ಯಾತಿ ಗಳಿಸಿರುವ ರುದ್ರಪಟ್ಟಣದ ಶ್ರೀ ರಾಮಮಂದಿರದಲ್ಲಿ ಕಳೆ ನಾಲ್ಕು ದಿನಗಳಿಂದ ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್‌ ವತಿಯಿಂದ ಜರುಗುತ್ತಿರುವ ೨೩ನೇ ವಾರ್ಷಿಕ ಸಂಗೀತೋತ್ಸವದಲ್ಲಿ ನಾಚಾರಮ್ಮ ಪ್ರಶಸ್ತಿ ಮತ್ತು ಲಯಕಲಾ ಸ್ಪರ್ಶಮಣಿ ಬಿರುದು ಸ್ವೀಕರಿಸಿದ ಮೃದಂಗ ವಾದಕ ವಿ: ಎ.ವಿ.ಆನಂದ್‌ ಮಾತಾನಾಡುತ್ತಾ, ರುದ್ರಪಟ್ಟಣವು ಸಂಗೀತ ಕ್ಷೇತ್ರಕ್ಕೆ ಅನೇಕ ಅಪರೂಪದ ಕಲಾವಿದರನ್ನು ಕೊಡುಗೆಯಾಗಿ ನೀಡಿರುವ ಪುಣ್ಯ ಕ್ಷೇತ್ರವಾಗಿದೆ. ರುದ್ರಪಟ್ಟಣ ಸಂಗೀತೋತ್ಸವ ಸಮಿತಿಯು ವಾರ್ಷಿಕ ಸಂಗೀತೋತ್ಸವದ ಮೂಲಕ ರುದ್ರಪಟ್ಟಣದ ಸಂಗೀತದ ಪರಂಪರೆಯನ್ನು ಮುನ್ನಡೆಸುತ್ತಿರುವುದು ಅತ್ಯಂತ ಮಹತ್ವದ ಕೆಲಸ ಎಂದರು.ಕಾರ್ ಕ್ರಮದಲ್ಲಿ ಸಂಗೀತ ವಿದ್ವಾಂಸರಾದ ಶೇಷಮೂರ್ತಿ, ನಾಗರತ್ನ, ಚಂದ್ರಶೇಖರ್‌, ಸಿ.ಎ.ನಾಗರಾಜು, ಸಿ. ಎ. ಗುರುದತ್, ಸಿ.ಎ. ಶ್ರೀಧರ್‌, ಸಿ.ಎ.ನಟರಾಜ್ ಮತ್ತು ಬಿ.ಎಸ್. ರಮೇಶ್‌ರಿಗೆ ರುದ್ರಗಾನ ಕಲಾ ವಿಶಾರದ ಬಿರುದು ಪ್ರದಾನ ಮಾಡಲಾಯಿತು. ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್‌ನ ಆರ್‌. ಕೆ. ಪದ್ಮನಾಭ, ಕರ್ನಾಟಕ ಬ್ಯಾಂಕ್ ಎ ಜಿ ಎಂ ಕಿಶೋರ್ ಕುಲಕರ್ಣಿ, ಮುಖ್ಯ ಪ್ರಬಂಧಕ ಶಶಾಂಕ್, ಚಿಲ್ಕುಂದದ ಸಂಗೀತ ವಿದ್ವಾಂಸರಿದ್ದರು. .