ಸಾರಾಂಶ
ವಿಜಯನಗರೋತ್ತರ ಕಾಲದ ಸಿಡಿಮದ್ದು ತೂರುವ (ಎಸೆಯುವ) ವೃತ್ತಾಕಾರದ ಶಿಲೆಯೊಂದು ಕನಕಗಿರಿ ಪಟ್ಟಣದ ಹೊರವಲಯದ ವೆಂಕಟರಮಣ ದೇವಸ್ಥಾನ ಸ್ವಚ್ಛತಾ ಕಾರ್ಯ ಕೈಗೊಂಡಾಗ ಪತ್ತೆಯಾಗಿದೆ.
ಕನಕಗಿರಿ: ವಿಜಯನಗರೋತ್ತರ ಕಾಲದ ಸಿಡಿಮದ್ದು ತೂರುವ (ಎಸೆಯುವ) ವೃತ್ತಾಕಾರದ ಶಿಲೆಯೊಂದು ಪಟ್ಟಣದ ಹೊರವಲಯದ ವೆಂಕಟರಮಣ ದೇವಸ್ಥಾನ ಸ್ವಚ್ಛತಾ ಕಾರ್ಯ ಕೈಗೊಂಡಾಗ ಪತ್ತೆಯಾಗಿದೆ.
ಕಳೆದ ಮೂರು ದಿನಗಳಿಂದ ವೆಂಕಟರಮಣ ದೇವಸ್ಥಾನ ಸುತ್ತಲೂ ಬೆಳೆದಿರುವ ಗಿಡಗಂಟಿಗಳ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಆಗ ಐದಾರು ಅಡಿ ಸುತ್ತಳತೆಯ ಮದ್ದು ತೂರುವ ವೃತ್ತಾಕಾರದ ಶಿಲೆಯೊಂದು ಪತ್ತೆಯಾಗಿದೆ.ಇದು ವಿಜಯನಗರೋತ್ತರ ಕಾಲದ ಕುರುಹು ಆಗಿದ್ದು, ಕ್ರಿಶ ೧೬ ಅಥವಾ ೧೭ನೇ ಶತಮಾನಕ್ಕೆ ಸೇರಿದ್ದಾಗಿದೆ. ಶಿಲೆಯ ಎಡ ಮತ್ತು ಬಲ ಭಾಗದಲ್ಲಿ ಕ್ಲಿಪ್ಗಳಿವೆ. ಅಲ್ಲದೇ ದೇಗುಲಗಳ ಹಾಗೂ ಸ್ಮಾರಕ ನಿರ್ಮಾಣದಲ್ಲಿ ಸುರಿಕೆ ತಯಾರಿಕೆಗೆ ಈ ಶಿಲೆಯನ್ನು ಬಳಸಲಾಗುತ್ತಿರುವ ಕುರಿತು ಮಾಹಿತಿ ''''ಕನ್ನಡಪ್ರಭ''''ಕ್ಕೆ ಲಭ್ಯವಾಗಿದೆ.
ಮದ್ದು ಸಿಡಿಸುವ ತೋಪು ಕೂಡಾ ಕನಕಗಿರಿಯಲ್ಲಿದೆ. ಮದ್ದು ಸಂಗ್ರಹಣಾ ಕೋಣೆಗಳು ಕನಕಗಿರಿ ಪ್ರದೇಶದ ಆಗೋಲಿ-ಹಂಪಸದುರ್ಗಾ ಬೆಟ್ಟದಲ್ಲಿವೆ. ಈಗ ಪತ್ತೆಯಾಗಿರುವ ಈ ಕಲ್ಲಿನ ಸಹಾಯದಿಂದಲೇ ಯುದ್ಧದ ಸಂದರ್ಭದಲ್ಲಿ ಮದ್ದನ್ನು ತೂರಲಾಗುತ್ತಿತ್ತು ಎಂದು ಸಂಶೋಧಕರು ದೃಢಪಡಿಸಿದ್ದಾರೆ.ವಿಜಯನಗರೋತ್ತರ ಕಾಲದ ಈ ಐತಿಹ್ಯ ಕುರುಹು ವೀಕ್ಷಣೆಗೆ ಜನರ ದಂಡೆ ಹರಿದು ಬರುತ್ತಿದೆ.