ಸಾರಾಂಶ
ಸಿಸಿಬಿ ಪೊಲೀಸರ ಹೆಸರಿನಲ್ಲಿ ಬಿಬಿಎಂಪಿ ತ್ಯಾಜ್ಯ ಸಂಗ್ರಹಕಾರರಿಗೆ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾನ್ಸ್ಟೇಬಲ್ ಸೇರಿ ಇಬ್ಬರನ್ನು ಸಿಸಿಬಿ ಬಂಧಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಿಸಿಬಿ ಪೊಲೀಸರ ಹೆಸರಿನಲ್ಲಿ ಬಿಬಿಎಂಪಿ ತ್ಯಾಜ್ಯ ಸಂಗ್ರಹಕಾರರಿಗೆ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾನ್ಸ್ಟೇಬಲ್ ಸೇರಿ ಇಬ್ಬರನ್ನು ಸಿಸಿಬಿ ಬಂಧಿಸಿದೆ.ಹೊಸಕೋಟೆಯ ನಾಸಿರ್ ಖಾನ್ ಹಾಗೂ ಐಎಸ್ಡಿ ಕಾನ್ಸ್ಟೇಬಲ್ ಪ್ರಶಾಂತ್ ನಾವಿ ಬಂಧಿತರಾಗಿದ್ದು, ಈ ಬಗ್ಗೆ ರಾಜ್ಯ ಜನ ಸದ್ಭಾವನಾ ಸಂಸ್ಥೆಯ ಮುಖ್ಯಸ್ಥ ನೀಡಿದ ದೂರಿನ ಮೇರೆಗೆ ಆರೋಪಿಗಳ ಬಂಧನವಾಗಿದೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಬಿಬಿಎಂಪಿ ತ್ಯಾಜ್ಯ ಸಂಗ್ರಹಕಾರರಿಗೆ ಆರೋಗ್ಯ ಮತ್ತು ಶುಚಿತ್ವದ ಬಗ್ಗೆ ಕಾಳಜಿ ಮೂಡಿಸಲು ದೂರುದಾರರು ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರು. ಆ ಕಾರ್ಯಕ್ರಮದಲ್ಲಿ ಬಿಬಿಎಂಪಿ ತ್ಯಾಜ್ಯ ಸಂಗ್ರಹಕಾರರಾದ ಫಾತೀಮಾ ಬೇಗಂ, ಇಮ್ರಾನ್, ಶಮೀರ್, ಮಹಮ್ಮದ್ ಷಾ ಆಲಂ ಅವರಿಗೆ ಸಿಸಿಬಿ ಹೆಸರಿನಲ್ಲಿ ಬೆದರಿಸಿ ಹಣ ವಸೂಲಿ ಬಗ್ಗೆ ಹೇಳಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಎನ್ಜಿಓ ಮುಖ್ಯಸ್ಥ, ಕೂಡಲೇ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದರು. ಬಳಿಕ ತನಿಖೆ ನಡೆಸಿದ ಸಿಸಿಬಿ ಅಧಿಕಾರಿಗಳು, ನಾಸಿರ್ ಹಾಗೂ ಪ್ರಶಾಂತ್ನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.ಐಎಸ್ಡಿಯಲ್ಲಿ ಪ್ರಶಾಂತ್ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕರ್ತವ್ಯ ಲೋಪದ ಆರೋಪದಡಿ ಆತನನ್ನು ಅಮಾನತುಗೊಳಿಸಿ ಮಾತೃ ಘಟಕ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವಿಭಾಗಕ್ಕೆ ಐಎಸ್ಡಿ ಅಧಿಕಾರಿಗಳು ಕಳುಹಿಸಿದ್ದರು. ಅಮಾನತು ಬಳಿಕ ನಾಸಿರ್ ಜತೆ ಸುಲಿಗೆ ಕೃತ್ಯದಲ್ಲಿ ಪ್ರಶಾಂತ್ ಸಹ ಪಾಲ್ಗೊಂಡಿದ್ದ ಎಂದು ಸಿಸಿಬಿ ಹೇಳಿದೆ.