ಸಾರಾಂಶ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್, ಕಣ್ಣಿನ ಆರೋಗ್ಯ ರಕ್ಷಿಸಿಕೊಳ್ಳುವುದು ಅತೀ ಅವಶ್ಯ. ಮೊಬೈಲ್, ಟಿವಿ ನೋಡುತ್ತ ಹೆಚ್ಚಿನ ಜನರು ಕಣ್ಣಿನ ದೃಷ್ಟಿ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಯುವ ಸಮುದಾಯ ಈ ಬಗ್ಗೆ ಜಾಗ್ರತೆ ವಹಿಸಿಕೊಳ್ಳಬೇಕು ಎಂದರು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ದ.ಕ ಜಿಲ್ಲಾ ಪಂಚಾಯಿತಿ ಮಂಗಳೂರು, ತಾಲೂಕು ಪಂಚಾಯಿತಿ ಬಂಟ್ವಾಳ, ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜೆಎಸ್ಡಬ್ಲ್ಯು ಫೌಂಡೇಶನ್ ಮತ್ತು ಇಂಡಿಯಾ ವಿಷನ್ ಇನ್ಸ್ಟಿಟ್ಯೂಟ್ ಇದರ ಜಂಟಿ ಸಹಭಾಗಿತ್ವದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್, ಕಣ್ಣಿನ ಆರೋಗ್ಯ ರಕ್ಷಿಸಿಕೊಳ್ಳುವುದು ಅತೀ ಅವಶ್ಯ. ಮೊಬೈಲ್, ಟಿವಿ ನೋಡುತ್ತ ಹೆಚ್ಚಿನ ಜನರು ಕಣ್ಣಿನ ದೃಷ್ಟಿ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಯುವ ಸಮುದಾಯ ಈ ಬಗ್ಗೆ ಜಾಗ್ರತೆ ವಹಿಸಿಕೊಳ್ಳಬೇಕು ಎಂದರು.ಜೆಎಸ್ಡಬ್ಲ್ಯು ಫೌಂಡೇಶನ್ ಸಿಎಸ್ಆರ್ ವ್ಯವಸ್ಥಾಪಕ ಪ್ರದೀಪ್ ಕೆ.ಆರ್. ಮಾಹಿತಿ ನೀಡಿದರು.ಸುಮಾರು 170 ಮಂದಿ ಸಾರ್ವಜನಿಕರು ಕಣ್ಣಿನ ತಪಾಸಣೆ ಮಾಡಿಕೊಂಡು ಶಿಬಿರದ ಪ್ರಯೋಜನ ಪಡೆದರು.
ವೇದಿಕೆಯಲ್ಲಿ ತಾ.ಪಂ. ಸಹಾಯಕ ನಿರ್ದೇಶಕರಾದ ವಿಶ್ವನಾಥ್ ಬಿ. (ಗ್ರಾ.ಉ), ಸಂಜೀವಿನಿ ಜಿಲ್ಲಾ ವ್ಯವಸ್ಥಾಪಕ ವಿನೀತ್, ಎನ್ಆರ್ಎಲ್ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಸುಧಾ, ಇಂಡಿಯಾ ವಿಷನ್ ಇನ್ಸ್ಟಿಟ್ಯೂಟ್ನ ಕಾರ್ಯಕ್ರಮ ಸಂಯೋಜಕಿ ಜಾನೆಟ್ ಉಪಸ್ಥಿತರಿದ್ದರು. ಎನ್ಆರ್ಎಲ್ಎಂ ತಾಲೂಕು ವ್ಯವಸ್ಥಾಪಕರಾದ ಪ್ರದೀಪ್ ಕಾಮತ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಎನ್ಆರ್ಎಲ್ಎಂ ತಾಲೂಕು ವಲಯ ಮೇಲ್ವಿಚಾರಕಿ ಕುಸುಮಾ ವಂದಿಸಿದರು.