ಸಾರಾಂಶ
ಹಾನಗಲ್ಲ: ಭಗವಂತ ನೀಡಿದ ಕಣ್ಣುಗಳನ್ನು ಪ್ರತಿಯೊಬ್ಬರೂ ರಕ್ಷಣೆ ಮಾಡಿಕೊಳ್ಳಬೇಕಿದೆ. ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾನಗಲ್ ತಾಲೂಕಿನಲ್ಲಿ ನಿಯಮಿತವಾಗಿ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ ಹೇಳಿದರು. ತಾಲೂಕಿನ ತಿಳವಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಶಿರಸಿಯ ರೋಟರಿ ಆಸ್ಪತ್ರೆ, ಟೀಂ ಆಪತ್ಬಾಂಧವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹುಟ್ಟಿನಿಂದ ದೃಷ್ಟಿ ಕಳೆದುಕೊಂಡವರು ಪ್ರಪಂಚ ನೋಡುವ ಭಾಗ್ಯದಿಂದ ವಂಚಿತರಾಗಿದ್ದಾರೆ. ಆದರೆ ಬಹಳಷ್ಟು ಜನ ತಮ್ಮ ನಿರ್ಲಕ್ಷ್ಯದಿಂದ ಕಣ್ಣು ಕಳೆದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಟೀಂ ಆಪತ್ಬಾಂಧವ ಆಶ್ರಯದಲ್ಲಿ ಉಚಿತ ಶಿಬಿರಗಳ ಮೂಲಕ ಸಾವಿರಾರು ಜನರಿಗೆ ಉಚಿತವಾಗಿ ನೇತ್ರ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂದರು. ಶಿಬಿರದಲ್ಲಿ ೨೮೬ ಜನ ನೇತ್ರಗಳನ್ನು ತಪಾಸಣೆಗೆ ಒಳಪಡಿಸಿ ಈ ಪೈಕಿ ೧೬೪ ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ನೇತ್ರಾಧಿಕಾರಿ ಬಿ.ಎಂ.ಮಂಜುನಾಥಗೌಡ, ಡಾ.ವಿ.ಜಿ. ವಸ್ತ್ರದ, ಗಿರೀಶ ಧಾರೇಶ್ವರ, ವೈದ್ಯಾಧಿಕಾರಿ ಡಾ. ರಿಹಾನಾ, ತಾಪಂ ಮಾಜಿ ಸದಸ್ಯ ಫಯಾಜ್ ಲೋಹಾರ, ಗ್ರಾಪಂ ಅಧ್ಯಕ್ಷ ಅಫ್ರೋಜಾ ಕನವಳ್ಳಿ, ಸದಸ್ಯರಾದ ಲಕ್ಷ್ಮೀಬಾಯಿ ಪಾಟೀಲ, ಸುಶೀಲಾ ತಳವಾರ, ಬಸವರಾಜ ಚವ್ಹಾಣ, ವಾಸೀಂ ಪಠಾಣ ಈ ಸಂದರ್ಭದಲ್ಲಿದ್ದರು.