ಆತ್ಮಹತ್ಯೆ ಮಾಡಿಕೊಳ್ಳದೇ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ: ಡಾ.ಡಿ.ಟಿ.ಮಂಜುನಾಥ

| Published : Sep 11 2024, 01:10 AM IST

ಆತ್ಮಹತ್ಯೆ ಮಾಡಿಕೊಳ್ಳದೇ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ: ಡಾ.ಡಿ.ಟಿ.ಮಂಜುನಾಥ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಾದ್ಯಂತ ಪ್ರತಿ ನಿತ್ಯ ಒಂದಲ್ಲ ಒಂದು ಕಾರಣಕ್ಕೆ ಪ್ರತಿ 40 ಸೆಕೆಂಡಿಗೆ ಓರ್ವ ವ್ಯಕ್ತಿ ಆತ್ಮಹತ್ಯೆಗೆ ಶರಣಾಗುತ್ತಿದೆ. ಇದನ್ನು ತಡೆಯಲು ಜಾಗೃತಿ ಅವಶ್ಯಕವಿದೆ. ನಾವೆಲ್ಲ ಸೇರಿ ಕಷ್ಟದಲ್ಲಿರುವವರ ಭಾವನೆಗಳಿಗೆ ಸ್ಪಂದಿಸಬೇಕು. ಕಷ್ಟ ಹಾಗೂ ಒತ್ತಡವಿದ್ದಾಗ ನೆರವಿಗಾಗಿ ಇನ್ನೊಬ್ಬರ ಸಲಹೆ ಪಡೆಯಬೇಕು.

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ಮಾನವ ಜನ್ಮ ಅತ್ಯಂತ ಶ್ರೇಷ್ಠವಾಗಿದೆ. ಯಾವುದೇ ಕಷ್ಟ ಬಂದರೂ ಧೈರ್ಯದಿಂದ ಎದುರಿಸಬೇಕೆ ಹೊರತು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಪ್ರಭಾರಿ ತಾಲೂಕು ಆರೋಗ್ಯಾಧಿಕಾರಿ ಡಾ. ಡಿ.ಟಿ.ಮಂಜುನಾಥ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ತಾಲೂಕಿನ ಅರಕೆರೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಅರಕೆರೆ ಸಮುದಾಯ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಶ್ವಾದ್ಯಂತ ಪ್ರತಿ ನಿತ್ಯ ಒಂದಲ್ಲ ಒಂದು ಕಾರಣಕ್ಕೆ ಪ್ರತಿ 40 ಸೆಕೆಂಡಿಗೆ ಓರ್ವ ವ್ಯಕ್ತಿ ಆತ್ಮಹತ್ಯೆಗೆ ಶರಣಾಗುತ್ತಿದೆ. ಇದನ್ನು ತಡೆಯಲು ಜಾಗೃತಿ ಅವಶ್ಯಕವಿದೆ. ನಾವೆಲ್ಲ ಸೇರಿ ಕಷ್ಟದಲ್ಲಿರುವವರ ಭಾವನೆಗಳಿಗೆ ಸ್ಪಂದಿಸಬೇಕು. ಕಷ್ಟ ಹಾಗೂ ಒತ್ತಡವಿದ್ದಾಗ ನೆರವಿಗಾಗಿ ಇನ್ನೊಬ್ಬರ ಸಲಹೆ ಪಡೆಯಬೇಕು. ಸಂದಿಘ್ನ ಪರಿಸ್ಥಿತಿಯಲ್ಲಿ ಒಂದು ನಿಮಿಷ ವಿಶಾಲವಾಗಿ ಯೋಜಿಸಿ, ಆತ್ಮ ಸ್ಥೈರ್ಯವಿದ್ದರೆ ಸಾವನ್ನು ಗೆಲ್ಲಬಹುದು ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಮಾತನಾಡಿ, ಭೂಮಿ ಮೇಲೆ ಹಸನ್ಮುಖಿಯಾಗಿ ಜೀವನ ನಡೆಸಬೇಕೇ ಹೊರತು ಆತ್ಮಹತ್ಯೆಗೆ ಕೈಹಾಕಬಾರದು. ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಬದುಕನ್ನು ಬದುಕಿರುವ ತನಕವೂ ಪ್ರೀತಿಸಬೇಕು. ಮರಣಕ್ಕಿಂತ ಜೀವನ ಮಿಗಿಲೆಂಬ ಧೋರಣೆಯಿರಬೇಕು. ಸಮಸ್ಯೆಗಳ ನಿರ್ವಹಣೆ ಮಾಡುವ ಕೌಶಲ್ಯ ಬೆಳೆಸಿಕೊಳ್ಳಬೇಕು. ಸಹಾಯಕ್ಕಾಗಿ ಕರೆಮಾಡಿ ಟೆಲಿ ಮನಸ್ 14416 ದಿನದ 24 ಗಂಟೆಯೂ ಸೇವೆಗೆ ಲಭ್ಯವಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಬೈರೇಶ್ ವಿಶ್ವ ಆತ್ಮಹತ್ಯೆ ತಡೆಗಟ್ಟುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್ ಮಾತನಾಡಿದರು. ಪ್ರಾಧ್ಯಾಪಕರಾದ ಚಂದ್ರಶೇಖರ್, ರಶ್ಮಿ, ಅಜಿತ್ ಕುಮಾರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ವೇತಲತಾ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎನ್ ಕೃಷ್ಣೇಗೌಡ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ವನಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.