ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಕಳೆದ ಏಳು ತಿಂಗಳುಗಳಿಂದ ಕಾರ್ಮಿಕರಿಗೆ ವೇತನ ನೀಡಿಲ್ಲ, ತಕ್ಷಣ ಸಂಪೂರ್ಣ ಸಂಬಳ ನೀಡುವಂತೆ ಆಗ್ರಹಿಸಿ ನಗರದ ಸಮೀಪ ಹನುಮಂತಪುರ ಬಳಿ ಕೈಗಾರಿಕಾ ಪ್ರದೇಶದಲ್ಲಿರುವ ನ್ಯೂ ಮಿನರ್ವ್ ಮಿಲ್ ಬಟ್ಟೆ ಫ್ಯಾಕ್ಟರಿ ಮುಂದೆ ಕೆಲಸ ಮಾಡುವ ಕಾರ್ಮಿಕರು ಎಐಟಿಯುಸಿ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.ಇದೇ ವೇಳೆ ಎ.ಐ.ಟಿ.ಯು.ಸಿ. ಜಿಲ್ಲಾಧ್ಯಕ್ಷ ಎಂ.ಸಿ. ಡೋಂಗ್ರೆ ಮಾಧ್ಯಮದೊಂದಿಗೆ ಮಾತನಾಡಿ, ತಾಲೂಕಿನ ಹನುಮಂತಪುರದಲ್ಲಿರುವ ನ್ಯೂ ಮಿನರ್ವ ಮಿಲ್ ಸಂಸ್ಥೆಯು ನ್ಯಾಷನಲ್ ಟೆಕ್ಸ್ ಟೈಲ್ಸ್ ಕಾರ್ಪೋರೇಷನ್ (ಎನ್.ಟಿ.ಸಿ) ಭಾಗವಾಗಿದ್ದು, ದೇಶದಾದ್ಯಂತ ಈ ರೀತಿಯ 23 ಘಟಕಗಳು ಇದೆ. ಈ ಎಲ್ಲಾ ಘಟಕಗಳು ಮಾರ್ಚ್ 2020ರಿಂದ ಸ್ಥಗಿತಗೊಂಡಿರುತ್ತವೆ. 2020 ಏಪ್ರಿಲ್ 1ರಿಂದ ಕಾರ್ಮಿಕರಿಗೆ ಪೂರ್ತಿ ಸಂಬಳ ನೀಡದೆ ಶೇಕಡ 50ರಷ್ಟು ಸಂಬಳವನ್ನು ನೀಡುತ್ತಾ ಬಂದಿರುತ್ತಾರೆ ಹಾಗೂ ಉಳಿದ ವ್ಯತ್ಯಾಸದ ವೇತನವನ್ನು ಯಾವಾಗಲಾದರೊಮ್ಮೆ ನೀಡುವ ಪರಿಪಾಠ ಬೆಳೆಸಿಕೊಂಡಿರುತ್ತಾರೆ ಎಂದು ದೂರಿದರು.
ಕಳೆದ ನವೆಂಬರ್ 2024ರಿಂದ ವೇತನವನ್ನೇ ನೀಡಿರುವುದಿಲ್ಲ. ಇದರಿಂದಾಗಿ ಕಾರ್ಮಿಕರ ಜೀವನ ಅತಂತ್ರಗೊಂಡು ದುಸ್ತರವಾಗಿದೆ. ಇದರ ಪರಿಣಾಮವಾಗಿ ಕಾರ್ಮಿಕರ ಇ.ಎಸ್.ಐ, ಪ್ರಾವಿಡೆಂಟ್ ಫಂಡ್ಗಳಿಗೆಲ್ಲ ಕಂತುಗಳು ಸಂದಾಯವಾಗದೆ ಈ ಸೌಲಭ್ಯಗಳು ಕಾರ್ಮಿಕರಿಗೆ ಇದ್ದೂ ಇಲ್ಲದಂತಾಗಿದೆ. ಈ ವಿಚಾರಗಳ ಕುರಿತು ಮ್ಯಾನೇಜ್ಮೆಂಟ್ ಗಮನವನ್ನು ಸೆಳೆದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಸಮಸ್ಯೆ ಕುರಿತು ಈ ವಿಚಾರಗಳನ್ನು ಮುಂದಿಟ್ಟುಕೊಂಡು ನ್ಯೂ ಮಿನರ್ವ ಮಿಲ್ ಫ್ಯಾಕ್ಟರಿ ಮುಂದೆ ಕಾರ್ಮಿಕರು ಸೇರಿ ಪ್ರತಿಭಟನೆ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.ಸರ್ಕಾರದ ಗಮನ ಸೆಳೆದರೂ ಕೂಡ ಇದುವರೆಗೂ ಯಾವ ಗಮನವಹಿಸಿ ಸಮಸ್ಯೆ ಬಗೆಹರಿಸಿರುವುದಿಲ್ಲ. ನಿಷ್ಟ್ರಯವಾಗಿದೆ. ಮಿನರ್ವ್ ಮಿಲ್ ಬಟ್ಟೆ ಪ್ಯಾಕ್ಟರಿ ಮ್ಯಾನೇಜ್ಮೆಂಟ್ ಅತ್ಯಂತ ಬೇಜವಾಬ್ದಾರಿಯುತವಾಗಿದ್ದು, ಕೂಡಲೇ ಏಳು ತಿಂಗಳ ಸಂಬಳ ಕಾರ್ಮಿಕರಿಗೆ ಕೊಡಲು ಆಗ್ರಹಿಸಿ ಜೂ.14ರ ಶನಿವಾರದಂದು ತೀವ್ರತರವಾದ ಹೋರಾಟ ಮಾಡಲಾಗುವುದು. ನಮ್ಮ ಬೇಡಿಕೆ ಈಡೇರದಿದ್ದರೇ ಇಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಹೋಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.ಜಿಲ್ಲಾಧಿಕಾರಿಗಳು ಕೂಡ ಕಾರ್ಮಿಕರಿಗೆ ಆಗುತ್ತಿರುವ ಈ ಅನ್ಯಾಯವನ್ನು ಗಂಭೀರವಾಗಿ ಗಮನಕ್ಕೆ ತೆಗೆದುಕೊಂಡು ಮಧ್ಯಪ್ರವೇಶಿಸಬೇಕಾಗಿ ಕೋರುತ್ತೇವೆ. ಮಾರ್ಚ್ 2020ರಿಂದ ಸ್ಥಗಿತಗೊಂಡಿರುವ ಘಟಕವನ್ನು ಪುನರಾರಂಭಿಸುವಲ್ಲಿ ಹಾಗೂ ಕಾರ್ಮಿಕರಿಗೆ ಬಾಕಿ ವೇತನವು ಕೂಡಲೇ ದೊರಕುವಂತೆ ಮಾಡಿಕೊಡಬೇಕಾಗಿ ವಿನಂತಿಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಬಿ.ಎಂ. ಮಧು, ಉಪಾಧ್ಯಕ್ಷ ಜೆ.ಆರ್. ಸಂತೋಷ್, ಕಾರ್ಯದರ್ಶಿ ಎಚ್.ಎಸ್. ಮಂಜೇಗೌಡ, ಖಜಾಂಚಿ ಜೆ.ಸಿ. ಲೋಕೇಶ್ ಇತರರು ಉಪಸ್ಥಿತರಿದ್ದರು.